ADVERTISEMENT

ಭಾರಿ ಮಳೆಗೆ ಜನಜೀವನ ತತ್ತರ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2017, 5:48 IST
Last Updated 6 ಸೆಪ್ಟೆಂಬರ್ 2017, 5:48 IST
ಮಂಗಳವಾರ ಸುರಿದ ಭಾರಿ ಮಳೆಗೆ ಕೊಪ್ಪಳ ತಾಲ್ಲೂಕಿನ ದದೇಗಲ್‌–ಕೋಳೂರು ರಸ್ತೆಯಲ್ಲಿ ಇರುವ ಈಚಲಹಳ್ಳ ತುಂಬಿ ಹರಿಯಿತು (ಎಡಚಿತ್ರ). ಮಳೆಯಿಂದಾಗಿ ಕೊಪ್ಪಳದ ಜಿಲ್ಲಾಕ್ರೀಡಾಂಗಣದ ಬಳಿ ಇರುವ ಪೆಟ್ರೋಲ್‌ ಬಂಕ್‌ ಜಲಾವೃತ್ತಗೊಂಡು ಕೃತಕ ಕೆರೆಯಂತಾಗಿತ್ತು ಪ್ರಜಾವಾಣಿ ಚಿತ್ರ: ಭರತ್‌ ಕಂದಕೂರ
ಮಂಗಳವಾರ ಸುರಿದ ಭಾರಿ ಮಳೆಗೆ ಕೊಪ್ಪಳ ತಾಲ್ಲೂಕಿನ ದದೇಗಲ್‌–ಕೋಳೂರು ರಸ್ತೆಯಲ್ಲಿ ಇರುವ ಈಚಲಹಳ್ಳ ತುಂಬಿ ಹರಿಯಿತು (ಎಡಚಿತ್ರ). ಮಳೆಯಿಂದಾಗಿ ಕೊಪ್ಪಳದ ಜಿಲ್ಲಾಕ್ರೀಡಾಂಗಣದ ಬಳಿ ಇರುವ ಪೆಟ್ರೋಲ್‌ ಬಂಕ್‌ ಜಲಾವೃತ್ತಗೊಂಡು ಕೃತಕ ಕೆರೆಯಂತಾಗಿತ್ತು ಪ್ರಜಾವಾಣಿ ಚಿತ್ರ: ಭರತ್‌ ಕಂದಕೂರ   

ಕೊಪ್ಪಳ: ನಗರದಲ್ಲಿ ಮಂಗಳವಾರ ಸುರಿದ ಭಾರಿ ಮಳೆಯಿಂದ ಜನಜೀವನ ಅಸ್ಥವ್ಯಸ್ಥಗೊಂಡಿತು. ಬೆಳಿಗ್ಗೆ 7.30ಕ್ಕೆ ಆರಂಭವಾದ ಮಳೆ 11.30ರ ವರೆಗೆ ಎಡೆಬಿಡದೆ ಸತತ 4 ಗಂಟೆ ಕಾಲ ಸುರಿಯಿತು. ಇದರಿಂದಾಗಿ ನಗರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ನಗರದ ಪ್ರಮುಖ ರಸ್ತೆಗಳು ಜಲಾವೃತಗೊಂಡಿದ್ದವು.

ನಗರದ ಬಸ್‌ ನಿಲ್ದಾಣ, ಜವಾಹರ್‌ ರಸ್ತೆ, ಹಳೆ ಮಾರುಕಟ್ಟೆ ಪ್ರದೇಶ, ಜಿಲ್ಲಾ ಕ್ರೀಡಾಂಗಣದ ಬಳಿ ಬೃಹತ್‌ ಪ್ರಮಾಣದಲ್ಲಿ ನೀರು ನಿಂತು ಕೃತಕ ಕರೆಯಂತೆ ಭಾಸವಾಯಿತು. ಅಸಮರ್ಪಕ ಚರಂಡಿ ವ್ಯವಸ್ಥೆಯಿಂದಾಗಿ ಚಂರಡಿಯ ನೀರು ರಸ್ತೆಗೆ ನುಗ್ಗಿದ್ದರಿಂದ ಚಂರಡಿಯಾವುದೋ, ರಸ್ತೆ ಯಾವುದೋ ಎನ್ನುವಂತಾಗಿತ್ತು. ಶಾಲಾ ಮಕ್ಕಳು, ವೃದ್ಧರು, ಮಹಿಳೆಯರು ಸಂಚರಿಸಲು ಹರಸಾಹಸ ಪಡಬೇಕಾಯಿತು.

ನಗರದ ನಿರ್ಮಿತಿ ಕೇಂದ್ರ ಸೇರಿದಂತೆ ಕೆಲ ತೆಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ಮಳೆ ನೀರು ನುಗ್ಗಿ  ಜಲಾವೃತವಾಗಿದ್ದವು. ಇದರಿಂದಾಗಿ ಅವರ ಪರಿಸ್ಥಿತಿ ಹೇಳ ತೀರದಾಗಿತ್ತು. ಪ್ರತಿನಿತ್ಯ ಎಂದಿನಂತೆ ಆರಂಭವಾಗಬೇಕಿದ್ದ ಅಂಗಡಿ ಮುಂಗ್ಗಟ್ಟುಗಳು, ಕಚೇರಿಗಳು, ಸಭೆ ಸಮಾರಂಭಗಳು ಸರಿಸುಮಾರು ಮಧ್ಯಾಹ್ನ ಕಾರ್ಯಾರಂಭಿಸಿದವು.

ADVERTISEMENT

ಬಹುತೇಕ ಶಾಲಾ–ಕಾಲೇಜುಗಳಲ್ಲಿ ಮಕ್ಕಳ ಹಾಜರಾತಿ ಇಳಿಕೆಯಾಗಿತ್ತು. ತಾಲ್ಲೂಕಿನ ಅಳವಂಡಿ ಹೋಬಳಿಯ ಕೆಲ ಹಳ್ಳಗಳು ತುಂಬಿಹರಿದವು. ಅಲ್ಲಲ್ಲಿ ಗಿಡ–ಮರಗಳು ಧರೆಗುರುಳಿದ್ದವು. ಸುತ್ತಮುತ್ತಲಿನ ಕೆಲ ಹಳ್ಳಿಗಳಲ್ಲಿ ಉತ್ತಮ ಮಳೆಯಾಗಿದೆ. ಹಾನಿಯಾದ ಬಗ್ಗೆ ಯಾವುದೇ ವರದಿಯಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.