ADVERTISEMENT

‘ಮಹನೀಯರಿಂದ ಸಮಾಜ ಸುಧಾರಣೆ’

ಜಿಲ್ಲಾಡಳಿತ ಭವನದಲ್ಲಿ ದಲಿತ ವಚನಕಾರರ ಜಯಂತಿ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2017, 6:09 IST
Last Updated 11 ಮಾರ್ಚ್ 2017, 6:09 IST
ಕೊಪ್ಪಳ: ಸಮಾಜದ ಸೇವೆಗಾಗಿ ತಮ್ಮ ಜೀವನ ಯಾರು ಮುಡಿಪಾಗಿಡುತ್ತಾರೋ ಅವರು ಮಹನೀಯರಾಗಲು ಸಾಧ್ಯ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ರುದ್ರೇಶ ಘಾಳಿ ಹೇಳಿದರು. ನಗರದಲ್ಲಿ ಶುಕ್ರವಾರ ಜಿಲ್ಲಾಡಳಿತದ ಆಶ್ರಯದಲ್ಲಿ ನಡೆದ ದಲಿತ ವಚನಕಾರರ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.
 
12ನೇ ಶತಮಾನದಲ್ಲಿ ಆದ ಧಾರ್ಮಿಕ ಸುಧಾರಣೆ, ಭಕ್ತಿ ಚಳವಳಿ ಹಾಗೂ ವಚನ ಚಳವಳಿಗಳು ಇಡಿ ವಿಶ್ವಕ್ಕೆ ಮಾದರಿಯಾಗಿವೆ. ಮಹಿಳೆಯ ರಕ್ಷಣೆ, ಮಹಿಳಾ ಸಮಾನತೆ, ಜಾತಿ ಪದ್ಧತಿಯ ನಿರ್ಮೂಲನೆ ಹೀಗೆ ಅನೇಕ ಬಗೆಯ ಸುಧಾರಣಾ ಪ್ರಯತ್ನಗಳು ಆಗ ನಡೆದಿವೆ ಎಂದು ಅವರು ತಿಳಿಸಿದರು. 
 
ಪರಂಪರೆಯಿಂದ ನಿರ್ಲಕ್ಷ್ಯಕ್ಕೆ ಒಳಗಾದ ಸಮಾಜದ ಕಣ್ಣು ತೆರೆಸಿ, ಅವರಲ್ಲಿ ಆತ್ಮವಿಶ್ವಾಸ ಮೂಡಿಸಿದ ಸತ್ಯ ಶುದ್ಧ ಕಾಯಕದಿಂದ ಬದುಕನ್ನು ನಡೆಸುವ ಆದರ್ಶಗಳನ್ನು ಮುಂದಿಟ್ಟ ಮಹಾ ಪುರುಷರು ಸಮಾಜಕ್ಕೆ ನೀಡಿದ ಕೊಡುಗೆಗಳು ಅಪಾರ ಎಂದು ಅವರು ತಿಳಿಸಿದರು. 
 
ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಸಂಗಮೇಶ ಉಪಾಸೆ ಅವರು ವಿಶೇಷ ಉಪನ್ಯಾಸ ನೀಡಿ, ವಚನ ಎನ್ನುವುದೇ ಬಹಳ ವಿಚಿತ್ರ. ಮನುಷ್ಯನಿಗೆ ಅತಿ ಅವಶ್ಯಕವಾದದ್ದು. ಕರ್ನಾಟಕದಲ್ಲಿ 12ನೇ ಶತಮಾನದಲ್ಲಿ ವಚನ ಚಳವಳಿಗಳು ಆರಂಭಗೊಂಡವು ಎಂದು ಅವರು ತಿಳಿಸಿದರು. 
 
ಇದಕ್ಕೆ ಮೂಲ ಕಾರಣೀಕರ್ತ ಜೇಡರ ದಾಸಿಮಯ್ಯ. ವೇದ, ಪುರಾಣಗಳು ಸಂಸ್ಕೃತದಲ್ಲಿದ್ದು, ಜನರಿಗೆ ಅವುಗಳ ಬಗ್ಗೆ ತಿಳಿವಳಿಕೆ ಇಲ್ಲದ ಕಾರಣ ವಚನಕಾರರು, ಜನಸಾಮಾನ್ಯರಿಗೆ ತಮ್ಮ ವಚನಗಳ ಮೂಲಕ ಅರಿವು ಮೂಡಿಸಿದರು. ದಲಿತ ವಚನಕಾರರಾದ ಮಾದಾರ ಚನ್ನಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಮಾದಾರ ಧೂಳಯ್ಯ ಹಾಗೂ ಉರಿಲಿಂಗ ಪೆದ್ದಿ ಅವರ ಜೀವನ, ವಚನ ಹಾಗೂ ಬೋಧನೆಗಳು ಇಂದಿಗೂ ಆದರ್ಶ ಎಂದರು.

ಪುರಸಭೆ ತಹಶೀಲ್ದಾರ್‌ ಶಿವಲಿಂಗಪ್ಪ ಪಟ್ಟದಕಲ್ಲ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿಜಯಕುಮಾರ, ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ.ಶಿವಣ್ಣ, ಮಹಾಂತೇಶ ಮಲ್ಲನಗೌಡರ, ಶಿವಾನಂದ ಹೊದ್ಲೂರ ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಕೃಷ್ಣಮೂರ್ತಿ ದೇಸಾಯಿ ಸ್ವಾಗತಿಸಿದರು. ಸಿ.ವಿ. ಜಡಿಯವರ್ ಕಾರ್ಯಕ್ರಮ ನಿರೂಪಿಸಿದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.