ADVERTISEMENT

ರಾಜ್ಯ ಸರ್ಕಾರದ ಪತನಕ್ಕೆ ಕ್ಷಣಗಣನೆ: ಶ್ರೀರಾಮುಲು

​ಪ್ರಜಾವಾಣಿ ವಾರ್ತೆ
Published 31 ಜನವರಿ 2015, 10:53 IST
Last Updated 31 ಜನವರಿ 2015, 10:53 IST

ಗಂಗಾವತಿ: ಸಿದ್ದರಾಮಯ್ಯ ನೇತೃತ್ವ­ದಲ್ಲಿನ ಕಾಂಗ್ರೆಸ್ ಸರ್ಕಾರ ಅಧಪತನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಅಧಿಕಾರಕ್ಕಾಗಿ ಆಡಳಿತ ಪಕ್ಷದಲ್ಲಿಯೇ ಭಿನ್ನಮತ ಸ್ಪೋಟವಾಗುತ್ತಿದೆ. ಕಾಂಗ್ರೆಸಿನ 25-–30 ಅತೃಪ್ತ ಶಾಸಕರು ಬಿಜೆಪಿಯೊಂದಿಗೆ ಕೈಜೋಡಿಸಲು ಸಂಪರ್ಕದಲ್ಲಿದ್ದಾರೆ ಎಂದು ಸಂಸದ ಬಿ. ಶ್ರೀರಾಮುಲು ಹೇಳಿದರು.

ಕನಕಗಿರಿ ಕ್ಷೇತ್ರದ ಜಿಲ್ಲಾ ಪಂಚಾಯಿತಿಯ ಉಪ ಚುನಾವಣೆಯ ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಶ್ರೀರಾಮುಲು, ಮಾಜಿ ಶಾಸಕ ಪರಣ್ಣ ಮುನವಳ್ಳಿ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಅಧಿಕಾರಕ್ಕೆ ಬಂದ ಕೇವಲ ಒಂದುವರೆ ವರ್ಷದಲ್ಲಿ ಸರ್ಕಾರ ವರ್ಚಸ್ಸು ಕಳೆದುಕೊಂಡಿದೆ.

ಚುನಾವಣೆ ಪೂರ್ವದಲ್ಲಿ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಕೇವಲ ಆಶ್ವಾಸನೆಗಳ ಮೂಲಕ ಜನರನ್ನು ದಿಕ್ಕು ತಪ್ಪಿಸುವ ಕಾರ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೊಡಗಿದ್ದಾರೆ. ರಾಜ್ಯದ ಆರ್ಥಿಕ ಸ್ಥಿತಿ ಚಿಂತಾಜನಕವಾಗಿದೆ ಎಂದರು.

ತುಂಗಭದ್ರಾ ಹೂಳೆತ್ತಲು ₨900 ಕೋಟಿ ಘೊಷಿಸಿದ್ದ ಸಿದ್ದರಾಮಯ್ಯ ಒಂದುವರೆ ವರ್ಷವಾದರೂ ಒಂದು ನಯಾಪೈಸೆ ನೀಡಿಲ್ಲ. ಕನಿಷ್ಠ ಯೋಜನೆಯ ರೂಪುರೇಷೆಯೂ ಸಿದ್ದವಾಗಿಲ್ಲ. ಹೂಳೆತ್ತಲು ಸಾಧ್ಯವಾಗದ್ದಿರೆ ಸಮನಾಂತರ ಜಲಾಶಯ, ಕಾಲುವೆಗಳು ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.

ಮೂರುವರೆ ವರ್ಷಗಳ ಕಾಲ ಸೆರೆವಾಸ ಅನುಭವಿಸಿರುವ ಮಾಜಿ ಸಚಿವ ಜನಾರ್ದನರೆಡ್ಡಿ, ಸಧ್ಯಕ್ಕೆ ಸಕ್ರೀಯ ರಾಜಕೀಯಕ್ಕೆ ದೂರವಿರಲಿ. ಕೆಲಕಾಲ ಹೆಂಡತಿ, ಮಕ್ಕಳು, ಬಂಧು-–ಬಳಗ, ತೀರ್ಥ ಕ್ಷೇತ್ರಳಿಗೆ ಓಡಾಡಿಕೊಂಡು ದಣಿವಾರಿಸಿಕೊಂಡ ಬಳಿಕ ರಾಜಕೀಯದ ನಿರ್ಧಾರ ಪ್ರಕಟಿಸಲಿದ್ದಾರೆ ಎಂದರು.

ಕೊಪ್ಪಳ ಕ್ಷೇತ್ರದ ಸಂಸದ ಕರಡಿ ಸಂಗಣ್ಣ ಮಾತನಾಡಿ, ಕಾಂಗ್ರೆಸ್ ಹಾಗೂ ಮುಖ್ಯಮಂತ್ರಿಯ ದುರಾಡ­ಳಿತಕ್ಕೆ ಜನ ನಿರಾಶರಾಗಿದ್ದಾರೆ. ಅನ್ನಭಾ­ಗ್ಯದ ಬಳಿಕ ಯಾವುದೇ ಹೇಳಿಕೊಳ್ಳುವ ಯೋಜನೆ­ಯನ್ನು ಸಿದ್ದರಾಮಯ್ಯ ಜನರಿಗಾಗಿ ಅನುಷ್ಠಾನಕ್ಕೆ ತಂದಿಲ್ಲ. ಸರ್ಕಾರದಲ್ಲಿ ಅಧಿಕಾರಕ್ಕಾಗಿ ಶಾಸಕ, ಸಚಿವರ ಮಧ್ಯ ಜಟಾಪಟಿ ನಡೆದರೆ, ಹಣಕ್ಕಾಗಿ ಅಧಿಕಾರಿಗಳನ್ನು ವರ್ಗಾ­ವಣೆಯ ದಂಧೆ ಜೋರಾಗಿ ನಡೆದಿದೆ. ಅಧಿಕಾರಿಗಳಿಂದ ಜನರ ಸುಲಿಗೆ ನಡೆದಿದೆ. ಆಪ್ತ ಸ್ನೇಹಿತ ಜಾರಕಿಹೊಳಿ ಅವರನ್ನೇ ತೃಪ್ತ ಪಡಿಸಲಾಗದ ಸಿದ್ದರಾಮಯ್ಯರಿಗೆ ಇನ್ನುಳಿದವರಿಗೆ ಹೇಗೆ ಸಮಾಧಾನ ಮಾಡುತ್ತಾರೆ ಎಂದರು.

ಅನ್ನದಾತರಾದ ರೈತರಿಗೆ ಸೇವೆಸಲ್ಲಿ­ಸುವ ಸುವರ್ಣವಕಾಶ ಪಡಿದಿರುವ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ರೈತರ ಬದಕನ್ನು ಹಸನು ಮಾಡುವುದು ಬಿಟ್ಟು ಕೆರೆ ತುಂಬಿಸುವ ಯೋಜನೆಯ ಮೂಲಕ ತಮ್ಮ ಜೇಬು ತುಂಬಿಸಿಕೊಳ್ಳುವ ಕಾಯಕಕ್ಕೆ ಇಳಿದಿದ್ದಾರೆ.

ಕ್ಷೇತ್ರದ ಮೂರು ಕೆರೆಗೆ ನೀರು ತುಂಬಿಸಲು ₨30, 50, 70 ಲಕ್ಷ ಮಂಜೂರಾಗಿದ್ದರೂ ನೀರು ತುಂಬಿಲ್ಲ. ಬೋಗಸ್ ಕೆಲಸ ಮಾಡಿ ಬಿಲ್ ಎತ್ತಿರುವ ಬಗ್ಗೆ ಗ್ರಾಮಸ್ಥರು ತಿಳಿಸಿದ್ದು, ಈ ಬಗ್ಗೆ ದಾಖಲೆ ಸಂಗ್ರಹಿಸಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸಂಸದ ತಿಳಿಸಿದ್ದರು.

ಶಾಸಕ ಹಾಲಪ್ಪ ಆಚಾರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಅಮರೇಶ ಕುಳಗಿ, ಮಾಜಿ ಸಂಸದ ಎಸ್. ಶಿವರಾಮಗೌಡ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಧಡೇಸ್ಗೂರು ಬಸವರಾಜ, ಮುಕುಂದ್‌ ರಾವ್‌ ಭವಾನಿಮಠ, ತಿಪ್ಪೇರುದ್ರಸ್ವಾಮಿ, ಗಿರೇಗೌಡ, ಕೆ. ಸತ್ಯನಾರಾಯಣ,  ಎಚ್. ಪ್ರಭಾಕರ, ಬಿ.ಎಸ್. ಹಂದ್ರಾಳ, ಮನೋಹರ ಹೇರೂರು ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.