ADVERTISEMENT

ವೃಂದಾವನ: ಎಫ್ಐಆರ್‌ಗೆ ಕೋರ್ಟ್‌ ತಡೆಯಾಜ್ಞೆ

​ಪ್ರಜಾವಾಣಿ ವಾರ್ತೆ
Published 5 ಮೇ 2016, 10:53 IST
Last Updated 5 ಮೇ 2016, 10:53 IST

ಗಂಗಾವತಿ:  ತಾಲ್ಲೂಕಿನ ಆನೆಗೊಂದಿ ಸಮೀಪ ಇರುವ ನವವೃಂದಾನ ಗಡ್ಡೆಯಲ್ಲಿ ಅತಿಕ್ರಮ ಪ್ರವೇಶ ಪಡೆದಿದ್ದಾರೆ ಎಂದು ಆರೋಪಿಸಿ ಮಂತ್ರಾಲಯ ಮಠದ ಬೆಂಬಲಿಗರ ವಿರುದ್ಧ ಉತ್ತರಾದಿಮಠದ ಅರ್ಚಕರು ನೀಡಿದ್ದ ದೂರಿನ ಮೇರೆಗೆ ಇಲ್ಲಿನ ಗ್ರಾಮೀಣ ಠಾಣೆಯಲ್ಲಿ ದಾಖಲಾಗಿದ್ದ ಎಫ್ಐಆರ್‌ಗೆ  ಬೆಂಗಳೂರಿನ ರಜೆ ಕಾಲದ ನ್ಯಾಯಪೀಠ ತಡೆಯಾಜ್ಞೆ ನೀಡಿದೆ.

ಈ ಬಗ್ಗೆ ಮಂತ್ರಾಲಯದ ಶ್ರೀಗಳ ಆಪ್ತ ಕಾರ್ಯದರ್ಶಿ ಸುಮೀಂದ್ರ ಆಚಾರ ಹೇಳಿಕೆ ನೀಡಿದ್ದು, ಶ್ರೀಮಠದ 9 ಮಂದಿ ವಿರುದ್ಧ ದಾಖಲಾಗಿದ್ದ ಎಫ್ಐಆರ್‌ಗೆ ನ್ಯಾಯಪೀಠ ತಡೆಯಾಜ್ಞೆ ನೀಡಿದ್ದ ಪ್ರತಿಯನ್ನು ಪೊಲೀಸರಿಗೆ ಸಲ್ಲಿಸಲಾಗಿದೆ ಎಂದು ತಿಳಿಸಿದರು. 

ನವವೃಂದಾವನ ಗಡ್ಡೆಯಲ್ಲಿನ ಧಾರ್ಮಿಕ ಹಕ್ಕಿಗೆ ಸಂಬಂಧಿಸಿದಂತೆ ವಾಗೀಶ ತೀರ್ಥರ ಉತ್ತರರಾಧನೆ ಮತ್ತು ನಿತ್ಯ ಪೂಜೆಗೆ ರಾಯರಮಠಕ್ಕೂ ಅವಕಾಶ ನೀಡಿ ಧಾರವಾಡದ ಸಂಚಾರಿ ಹೈಕೋರ್ಟ್‌ ಪೀಠ ತೀರ್ಪು  ನೀಡಿತ್ತು. ತೀರ್ಪಿನ ಅನ್ವಯ ರಾಯರ ಮಠದ ಅನುಯಾಯಿಗಳು ಹಾಗೂ ಅರ್ಚಕರು ಭಕ್ತರೊಂದಿಗೆ ತೆರಳಿ ಪೂಜೆ ನಡೆಸಿದ್ದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಉತ್ತರಾದಿಮಠದ ಅರ್ಚಕರು, ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಗಂಗಾವತಿ ಠಾಣೆಗೆ ದೂರು ಸಲ್ಲಿಸಿದ್ದರು.ದೂರಿನ್ವಯ ಗ್ರಾಮೀಣ ಪೊಲೀಸರು ರಾಯರ ಮಠದ ಅರ್ಚಕರು ಸೇರಿ 9 ಜನರ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಇದನ್ನು ಪ್ರಶ್ನಿಸಿ ರಾಯರಮಠದಿಂದ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.
ಯಥಾರೀತಿ ನವವೃಂದಾವನದಲ್ಲಿ ನಿತ್ಯ ಪೂಜೆ ನಡೆಸಲಾಗುವುದು ಎಂದು ಶ್ರೀಗಳ ಆಪ್ತಕಾರ್ಯದರ್ಶಿ  ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.