ಗಂಗಾವತಿ: ರಾಜಕೀಯ ಸ್ವಾರ್ಥಕ್ಕೆ ಅಶ್ಲೀಲ ಪದಬಳಕೆ ಮಾಡಿಕೊಂಡು ವೈಯಕ್ತಿಕ ಟೀಕೆಯಲ್ಲಿ ತೊಡಗಿ ಜನರಿಗೆ ತೊಂದರೆ ನೀಡುತ್ತಿರುವ ಹಾಲಿ ಹಾಗೂ ಮಾಜಿ ಶಾಸಕರಾದ ಇಕ್ಬಾಲ್ ಅನ್ಸಾರಿ, ಎಚ್.ಆರ್. ಶ್ರೀನಾಥ್ ಮೇಲೆ ಕಾನೂನು ಕ್ರಮಕ್ಕೆ ಉದ್ಯಮಿ ಕೊಲ್ಲಿ ನಾಗೇಶ್ವರ ರಾವ್ ಆಗ್ರಹಿಸಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿಸಲ್ಲಿಸಿರುವ ಅವರು, ನಗರದ ಶಾಂತಿ ಭಂಗಕ್ಕೆ ಯತ್ನಿಸುತ್ತಿರುವ ಹಾಗೂ ಪರಸ್ಪರ ದೋಷಾರೋಪಣೆಯಲ್ಲಿ ತೊಡಗಿರುವ ಉಭಯರ ಮೇಲೆ ಕಾನೂನು ಕ್ರಮಕ್ಕೆ ಗೃಹ ಇಲಾಖೆ, ಬಳ್ಳಾರಿ ವಲಯದ ಐಜಿ, ಕೊಪ್ಪಳ ಎಸ್ಪಿ ಸೂಚನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಮಾಜಿ ಎಂಎಲ್ಸಿ ಎಚ್.ಆರ್. ಶ್ರೀನಾಥ್ ನ.15ಕ್ಕೆ, ಹಾಲಿ ಶಾಸಕ ಇಕ್ಬಾಲ್ ಅನ್ಸಾರಿ ನ.16ಕ್ಕೆ ಗಂಗಾವತಿ ಬಂದ್ ಮಾಡಲು ಪೊಲೀಸ್ ಇಲಾಖೆಗೆ ಮನವಿ ನೀಡಿದ್ದಾರೆ. ಆದರೆ ಇಲಾಖೆ ಇಬ್ಬರಿಗೂ ಗಂಗಾವತಿ ಬಂದ್ ಮಾಡಿಸಲು ಅನುಮತಿ ನೀಡಿಲ್ಲ.
ಗಂಗಾವತಿ ಬಂದ್ ಘಟನೆಯಿಂದಾಗಿ ನಗರ ಮಾತ್ರವಲ್ಲ, ಗ್ರಾಮೀಣ ಭಾಗದ ಮಂದಿರ, ಮಸೀದಿಗಳಲ್ಲಿ ಜನ ಸೇರಲಿದ್ದು, ಇದು ಕೋಮು ಗಲಭೆಗೆ ಕಾರಣವಾಗಲಿದೆ. ಶಾಂತಿ ನೆಮ್ಮದಿ ಕದಡಲು ಯತ್ನಿಸುತ್ತಿರುವ ಈ ಇಬ್ಬರ ಮೇಲೆ ಕಾನೂನು ಕ್ರಮಕ್ಕೆ ಶಿಫಾರಸ್ಸು ಮಾಡಬೇಕು ಎಂದು ಅಂತರಾಷ್ಟ್ರೀಯ ಮಾನವ ಹಕ್ಕುಗಳ ರಾಜ್ಯ ಘಟಕದ ಅಧ್ಯಕ್ಷರೂ ಆದ ನಾಗೇಶ್ವರ ರಾವ್ ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.