ADVERTISEMENT

ಸುರಿದ ಕಸ ಜನರ ಬದುಕಿಗೆ ವಿಷ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2017, 7:30 IST
Last Updated 18 ಸೆಪ್ಟೆಂಬರ್ 2017, 7:30 IST
ಭಾಗ್ಯನಗರದ ಸ್ಮಶಾನ ರಸ್ತೆಯಲ್ಲಿ ಜನವಸತಿ ಪ್ರದೇಶದ ಬಳಿ ಸುರಿಯಲಾದ ಕಸದ ರಾಶಿ
ಭಾಗ್ಯನಗರದ ಸ್ಮಶಾನ ರಸ್ತೆಯಲ್ಲಿ ಜನವಸತಿ ಪ್ರದೇಶದ ಬಳಿ ಸುರಿಯಲಾದ ಕಸದ ರಾಶಿ   

ಕೊಪ್ಪಳ: ಸಮೀಪದ ಭಾಗ್ಯನಗರದಲ್ಲಿ ಜನವಸತಿ ಪ್ರದೇಶದ ಬಳಿಯೇ ಕಸ ವಿಲೇವಾರಿ ಮಾಡುತ್ತಿರುವುದಕ್ಕೆ ಜನರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಭಾಗ್ಯನಗರದ 9 ಮತ್ತು 11ನೇ ವಾರ್ಡ್‌ನ ಸಮೀಪವೇ ಕಸ ಸುರಿಯುತ್ತಿರುವುದು ಈ ಆಕ್ರೋಶಕ್ಕೆ ಕಾರಣ. ಮಾತ್ರವಲ್ಲ ಈ ಪ್ರದೇಶದಲ್ಲಿ 30ಕ್ಕೂ ಹೆಚ್ಚು ಜನ ಜ್ವರದಿಂದ ಬಳಲುತ್ತಿದ್ದಾರೆ. ಪಟ್ಟಣ ಪಂಚಾಯಿತಿ ಸದಸ್ಯರಿಗೆ ಅಥವಾ ಖುದ್ದಾಗಿ ಕಚೇರಿಗೆ ಹೋಗಿ ದೂರು ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಜನರು ಅಳಲು ತೋಡಿಕೊಂಡರು. 

ಕಸ ಸುರಿಯುತ್ತಿರುವುದರಿಂದ ಇಲ್ಲಿ ಸೊಳ್ಳೆ, ಕ್ರಿಮಿಗಳ ಉತ್ಪತ್ತಿಯಾಗುತ್ತಿದೆ. ಕೂದಲು ಸಂಸ್ಕರಣಾ ಘಟಕಗಳ ತ್ಯಾಜ್ಯವೂ ಇಲ್ಲಿಯೇ ಬಂದು ಬೀಳುತ್ತಿದೆ. ಗಾಳಿಯೂ ಕಲುಷಿತವಾಗಿದೆ ಎಂದು ನಾಗರಿಕರು ಸಮಸ್ಯೆ ವಿವರಿಸಿದರು.

ಕೂಡಲೇ ಕಸ ವಿಲೇವಾರಿ ಮಾಡಬೇಕು. ಚರಂಡಿಗಳಿಗೆ ಕ್ರಿಮಿನಾಶಕ ಸಿಂಪಡಿಸಬೇಕು ಎನ್ನುತ್ತಾರೆ ಜನರು. ಈ ಬಗ್ಗೆ ಪಟ್ಟಣ ಪಂಚಾಯಿತಿಗೆ ಮನವಿಯನ್ನೂ ಸಲ್ಲಿಸಿದ್ದಾರೆ. ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದರೂ ಕಸ ವಿಲೇವಾರಿ, ಸ್ವಚ್ಛತೆ ನಿರ್ವಹಣೆ ಇನ್ನೂ ಸಮರ್ಪಕವಾಗಿ ಆಗಬೇಕಿದೆ ಎಂಬುದು ಜನರ ಒತ್ತಾಯ.

ADVERTISEMENT

ಪಟ್ಟಣ ಪಂಚಾಯಿತಿ ಹೇಳಿಕೆ: ಚರಂಡಿಗಳಿಗೆ ಕ್ರಿಮಿನಾಶಕ ಸಿಂಪಡಿಸಲಾಗಿದೆ. ಕಸ ವಿಲೇವಾರಿಗೆ ಸಂಬಂಧಪಟ್ಟಂತೆ ಬಹಳಷ್ಟು ದಿನಗಳಿಂದ ಅಲ್ಲಿಯೇ ಕಸ ವಿಲೇವಾರಿ ಮಾಡಲಾಗುತ್ತಿದೆ. ಜನರ ಹಿತದೃಷ್ಟಿಯಿಂದ ಬೇರೆಡೆ ಕಸವಿಲೇವಾರಿಗೆ ಈಗಾಗಲೇ ಜಮೀನು ಖರೀದಿಗೆ ಎಲ್ಲ ಸಿದ್ಧತೆ ಮಾಡಲಾಗಿದೆ.

ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿಯನ್ನೂ ಪಡೆಯಬೇಕಾಗಿದೆ. ಅವರು ಕೆರೆ, ಹಳ್ಳ ಹತ್ತಿರವಿಲ್ಲದ ಮತ್ತು ಪರಿಸರಕ್ಕೆ ತೊಂದರೆಯಾಗದ ಸ್ಥಳಕ್ಕೆ ಮಾತ್ರ ಅನುಮತಿ ನೀಡುತ್ತಾರೆ. ಅದಕ್ಕಾಗಿ ತಡವಾಗಿದೆ. ಎಂದು ಭಾಗ್ಯನಗರದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಬಿ. ಬಾಬು ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.