ADVERTISEMENT

ಸ್ವಾತಂತ್ರ್ಯದ ತುಡಿತಕ್ಕೆ ಮಿಡಿದ ಮನಗಳು

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ, ರಾಜ್ಯಮಟ್ಟದ ಎರಡು ದಿನಗಳ ವಿಚಾರ ಸಂಕಿರಣ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2017, 7:07 IST
Last Updated 9 ಮಾರ್ಚ್ 2017, 7:07 IST
ಸ್ವಾತಂತ್ರ್ಯದ ತುಡಿತಕ್ಕೆ ಮಿಡಿದ ಮನಗಳು
ಸ್ವಾತಂತ್ರ್ಯದ ತುಡಿತಕ್ಕೆ ಮಿಡಿದ ಮನಗಳು   
ಕೊಪ್ಪಳ:  ವರದಕ್ಷಿಣೆ, ಕೌಟುಂಬಿಕ ದೌರ್ಜನ್ಯ, ಲಿಂಗ ಅಸಮಾನತೆ, ಸಾಮಾಜಿಕ ಕಟ್ಟುಪಾಡು, ಜಾತಿ ವ್ಯವಸ್ಥೆ ಇವೆಲ್ಲವುಗಳಿಂದ ಸ್ವತಂತ್ರಗೊಳ್ಳಲು ಬಯಸಿದ ಹೆಣ್ಣು ಮನಸ್ಸುಗಳು ಒಂದೇ ವೇದಿಕೆಯಲ್ಲಿ ಬುಧವಾರ ಕಷ್ಟಸುಖ ಹಂಚಿಕೊಂಡವು.
 
ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ, ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ನಗರದ ಬಾಲಾಜಿ ಫಂಕ್ಷನ್‌ ಹಾಲ್‌ನಲ್ಲಿ ಬುಧವಾರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಡೆದ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ವ್ಯಕ್ತವಾದ ಭಾವವಿದು. 
 
ಮಹಿಳೆ ಮಾಡುವ ಕೆಲಸಕ್ಕೆ ಬೆಲೆಕಟ್ಟಲಾಗದು. ಮಹಿಳೆಯರು ಮಾಡುವ ಮನೆಕೆಲಸ, ದಲಿತರ ಕೆಲಸಕ್ಕೆ ಕನಿಷ್ಠ ವೇತನ ನೀಡಲಾಗುತ್ತಿದೆ. ಅವರಿಗೆ ಕೊಡುವ ವೇತನ ಮಧ್ಯಮವರ್ಗದವರು ಹೋಟೆಲ್‌, ರೆಸ್ಟೋರೆಂಟ್‌ನಲ್ಲಿ ಒಮ್ಮೆ ಖರ್ಚು ಮಾಡುವ ವೆಚ್ಚಕ್ಕಿಂತಲೂ ಕಡಿಮೆ ಇದೆ. ಒಂದು ದಿನ ಮಹಿಳೆಯರೆಲ್ಲ ಅಡುಗೆ ಮಾಡುವುದಿಲ್ಲ ಎಂದು ಕುಳಿತುಬಿಟ್ಟರೆ ಅದೆಷ್ಟು ಜನ ಹಸಿವಿನಿಂದ ಕಂಗೆಡಬಹುದು ಎಂದು ಸಂಕಿರಣ ಉದ್ಘಾಟಿಸಿದ ಒಡಿಶಾದ ಹೋರಾಟಗಾರ್ತಿ ರಂಜನಾ ಪಾಡಿ ಕಳವಳ ವ್ಯಕ್ತಪಡಿಸಿದರು. 
 
ವಕೀಲೆ, ಹೋರಾಟಗಾರ್ತಿ ಸಾವಿತ್ರಿ ಮುಜುಂದಾರ್‌ ಮಾತನಾಡಿ, ಮಹಿಳಾ ನಿರ್ಲಕ್ಷ್ಯತೆ ಮತ್ತು ದೌರ್ಜನ್ಯ ಜಿಲ್ಲೆಯಲ್ಲಿದೆ. ಈ ಹೆಣ್ಣುಮಗಳಿಗೇಕೆ ಸಮಾಜದ ಕೆಲಸಗಳು ಬೇಕು? ನಿನಗೆ ಕೆಲಸ ಇಲ್ಲವೇನು ಅಂತ ಕೇಳಿದವರಿದ್ದಾರೆ. ಅಂಥವರಿಗೆ ಈ ಒಕ್ಕೂಟದಿಂದ ಉತ್ತರ ಕೊಡುತ್ತಿದ್ದೇವೆ. ನಡವಳಿಕೆ ಅನ್ನುವುದು ಸ್ತ್ರೀಯಷ್ಟೇ ಪುರುಷನಿಗೂ ಮುಖ್ಯ. ನಮ್ಮ ನಡವಳಿಕೆ ಬಗ್ಗೆ ಯಾರೂ ಪ್ರಮಾಣಪತ್ರ ಕೊಡಬೇಕಿಲ್ಲ ಎಂದರು.
 
ಜಿಲ್ಲೆಯಲ್ಲಿ ಮರಳು ಮಾಫಿಯಾ ಚಟುವಟಿಕೆಯಲ್ಲಿ ರಾತ್ರಿಯಿಡೀ ಮಹಿಳೆಯರನ್ನು ದುಡಿಸಿಕೊಳ್ಳಐಲಾಗುತ್ತಿದೆ. ಅಲ್ಲಿ ನಡೆಯಬಾರದ್ದೆಲ್ಲಾ ನಡೆಯುತ್ತಿದೆ. ರಾಜಕಾರಣದಲ್ಲಿಯೂ ಶೇ 80ರಷ್ಟು ಮಂದಿಗೆ ಮಹಿಳಾಪರ ಕಾಳಜಿ ಇಲ್ಲ ಎಂದು ಅವರು ಬೇಸರಿಸಿದರು.
 
ದೇವದಾಸಿ ಪದ್ಧತಿ ಕುರಿತು ಪ್ರಸ್ತಾಪಿಸಿದ ಅವರು, ದೇವದಾಸಿಯರ ಜತೆ ಮಲಗುವ ಪುರುಷರು ಎಂಥವರು ಎಂದು ಪ್ರಶ್ನಿಸಿದರು.  ಕೆ.ವಿ. ನೇತ್ರಾವತಿ ಅವರು ಜತೆಗೂಡಿ ನಡೆಯೋಣ ಪುಸ್ತಕ ಕುರಿತು ಮಾತನಾಡಿದರು. ಹಿರಿಯ ಲೇಖಕಿ ಶಾಂತಾದೇವಿ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. 
 
ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಸ್ವಾಗತಿಸಿದರು. ಸಂಘಟಕಿ ವಾಣಿ ಪೆರಿಯೋಡಿ ಪ್ರಾಸ್ತಾವಿಕ ಮಾತನಾಡಿದರು. ಶಿವಲೀಲಾ ಕಾರ್ಯಕ್ರಮ ನಿರೂಪಿಸಿದರು. ನಸ್ರೀನ್‌ ವಂದಿಸಿದರು. 

* ನಮ್ಮ ಜಿಲ್ಲೆಯಲ್ಲಿರುವ ಮರಳುಗಾರಿಕೆ ಅಕ್ರಮವೋ ಸಕ್ರಮವೋ ಗೊತ್ತಿಲ್ಲ. ಆದರೆ, ದಯವಿಟ್ಟು ಅಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ರಕ್ಷಣೆ ಕೊಡಿ.
ಸಾವಿತ್ರಿ ಮುಜುಂದಾರ್‌, ವಕೀಲೆ, ಮಹಿಳಾ ಹೋರಾಟಗಾರ್ತಿ

* ನಮ್ಮಲ್ಲಿ ಎಷ್ಟೋ ಹೆಣ್ಣುಮಕ್ಕಳು ಜಗದ ಬೆಳಕು ಆಗಿಲ್ಲ. ಆ ರೀತಿ ಅವಳು ಬೆಳೆದಿಲ್ಲ. ಅವಳಲ್ಲಿ ಬೆಳಕು ತುಂಬಿದಾಗ ಬೆಳಕಾಗಲು ಆಗುತ್ತದೆ.  ಮಹಿಳಾ ಸಂಘಗಳು ವಿಚಾರಶಕ್ತಿ ಬೆಳೆಸಬೇಕು.
-ಹೇಮಕ್ಕ,ಜನಶಕ್ತಿ ವೇದಿಕೆ, ಬೆಂಗಳೂರು

ಸಮಾವೇಶದಲ್ಲಿ ಇಂದು
ಹಕ್ಕೊತ್ತಾಯ ಜಾಥಾ: ಗವಿಸಿದ್ದೇಶ್ವರ ಮಠದ ಆವರಣದಿಂದ. ಉದ್ಘಾಟನೆ: ತೆಲುಗು ಲೇಖಕಿ ಗೋಗು ಶ್ಯಾಮಲಾ. ಜಾಥಾಕ್ಕೆ ಚಾಲನೆ: ದೆಹಲಿಯ ಕವಿತಾ ಕೃಷ್ಣನ್‌. ಬೆಳಿಗ್ಗೆ 11. ಬಹಿರಂಗ ಸಮಾವೇಶ: ಸಾರ್ವಜನಿಕ ಮೈದಾನ. ಆಶಯ ಭಾಷಣ: ದು. ಸರಸ್ವತಿ, ದಿಕ್ಸೂಚಿ ಭಾಷಣ: ಕವಿತಾ ಕೃಷ್ಣನ್‌, ನಿರ್ಣಯ ಮಂಡನೆ: ಅಖಿಲಾ ವಿದ್ಯಾಸಂದ್ರ. ಮಧ್ಯಾಹ್ನ 2.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.