ಗಂಗಾವತಿ: ಕೊಯ್ಲಿನ ಹಂತಕ್ಕೆ ಬಂದಿದ್ದ ಮೆಕ್ಕಜೋಳದ ಫಸಲಿನ ಮೇಲೆ ದಾಳಿ ಮಾಡಿದ ಹಂದಿಗಳು ಬೆಳೆ ಹಾನಿ ಮಾಡಿವೆ. ಇದರಿಂದ ರೈತರಿಗೆ ಲಕ್ಷಾಂತರ ರೂಪಾಯಿ ಹಾನಿಯಾಗಿದೆ.
ನಗರದ ಹೊರವಲಯ ಶರಣಬಸವೇಶ್ವರ ಕ್ಯಾಂಪಿನ ಮರಳಿ ಕಂದಾಯ ವೃತ್ತದ ಭಟ್ಟರಹಂಚಿನಾಳ ಗ್ರಾಮದ ಸರ್ವೇ ನಂಬರ್ 60ರಲ್ಲಿ ರಾಜಾಸಾಬ ಕಾಸೀಂಸಾಬ ವಡ್ಡರಹಟ್ಟಿ ಎಂಬ ರೈತ, ಜಮೀನು ಗುತ್ತಿಗೆ ಪಡೆದು 8.11 ಎಕರೆಯಲ್ಲಿ ಮೆಕ್ಕೆ ಜೋಳ ಬೆಳೆದಿದ್ದರು. ಫಸಲು ಸಮೃದ್ಧವಾಗಿ ಬೆಳೆದು ನಿಂತು ಕೊಯ್ಲು ಮಾಡಿಕೊಳ್ಳಬೇಕಿತ್ತು. ಅಷ್ಟರಲ್ಲಿ ಹಂದಿಗಳು ದಾಳಿ ಮಾಡಿ ಮೆಕ್ಕೆಜೋಳ ತಿಂದು ಹಾಕಿವೆ.
‘ಹಂದಿ ದಾಳಿಯಿಂದಾಗಿ ₹1.80 ಲಕ್ಷ ಮೊತ್ತದ ಬೆಳೆ ಹಾನಿಯಾಗಿದೆ. 20 ದಿನದಿಂದ ಕಾವಲುಗಾರರನ್ನು ಹಾಕಿ ಬೆಳೆ ಕಾಪಾಡಿಕೊಳ್ಳಲಾಗಿತ್ತು. ಈ ಮಧ್ಯೆ ಹಂದಿ ದಾಳಿ ಮಾಡಿದ್ದು ಆರ್ಥಿಕ ನಷ್ಟ ಉಂಟಾಗಿದೆ’ ಎಂದು ರೈತ ಅಳಲು ತೋಡಿಕೊಂಡಿದ್ದಾರೆ.
‘ಹಂದಿ ಸಾಕಾಣಿಕೆ ಮಾಲೀಕರು ಅಥವಾ ಸರ್ಕಾರದಿಂದ ಬೆಳೆ ನಷ್ಟ ಪರಿಹಾರ ಕೊಡಿಸಬೇಕು. ಇಲ್ಲವಾದಲ್ಲಿ ಕಾನೂನು ಹೋರಾಟ ಮಾಡುತ್ತೇನೆ’ ಎಂದು ರೈತ ರಾಜಾಸಬ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.