ADVERTISEMENT

ಅಂಬರೀಷ್‌ಗೆ ಟಿಕೆಟ್‌; ಭುಗಿಲೆದ್ದ ಆಕ್ರೋಶ, ಪೀಠೋಪಕರಣ ಧ್ವಂಸ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2018, 9:46 IST
Last Updated 17 ಏಪ್ರಿಲ್ 2018, 9:46 IST

ಮಂಡ್ಯ: ಗಣಿಗ ಪಿ.ರವಿಕುಮಾರ್‌ಗೌಡ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ಕೈತಪ್ಪಿದ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ಸೋಮವಾರ ಕಾಂಗ್ರೆಸ್‌ ಕಚೇರಿಗೆ ನುಗ್ಗಿ ಪೀಠೋಪಕರಣ, ಕಿಟಕಿ ಗಾಜುಗಳನ್ನು ಪುಡಿ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಸಂಜಯ ವೃತ್ತದಿಂದ ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅರೆಬೆತ್ತಲೆ ಮೆರವಣಿಗೆ ನಡೆಸಿ, ಬಂದೀಗೌಡ ಬಡಾವಣೆಯಲ್ಲಿರುವ ಕಾಂಗ್ರೆಸ್‌ ಕಚೇರಿಗೆ ಏಕಾಏಕಿ ನುಗ್ಗಿ ದಾಂದಲೆ ನಡೆಸಿದರು. ‘ಕಾಂಗ್ರೆಸ್‌ ಪಕ್ಷ ಮೋಸ ಮಾಡಿದೆ’ ಎಂದು ಆರೋಪಿಸಿ ಪಕ್ಷ ಹಾಗೂ ಮುಖಂಡರ ವಿರುದ್ಧ ಧಿಕ್ಕಾರ ಕೂಗಿದರು.

ಈ ಸಂದರ್ಭದಲ್ಲಿ ಕಚೇರಿಯಲ್ಲಿದ್ದ ಕಾಂಗ್ರೆಸ್‌ ಮಹಿಳಾ ಮುಖಂಡರು ಹಾಗೂ ಕಾರ್ಯಕರ್ತರು ಆತಂಕಕ್ಕೀಡಾದರು. ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ADVERTISEMENT

‘ಸರದಿ ಸಾಲಿನಲ್ಲಿ ನಿಂತು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದೆ. ಆದರೆ ಅರ್ಜಿ ಹಾಕದೇ ಇರುವವರಿಗೆ ಟಿಕೆಟ್‌ ನೀಡಲಾಗಿದೆ. ಕಳೆದ ಚುನಾವಣೆ ಸಂದರ್ಭದಲ್ಲಿ ಅಂಬರೀಷ್‌, ಇದು ನನ್ನ ಕಡೆಯ ಚುನಾವಣೆ, ಮುಂದೆ ನಿನಗೇ ಟಿಕೆಟ್‌ ಎಂದು ಹೇಳಿದ್ದರು. ಹೀಗಾಗಿ ನಾನು ಅವರ ಪರವಾಗಿ ಕೆಲಸ ಮಾಡಿ ಗೆಲುವಿಗೆ ಕಾರಣನಾಗಿದ್ದೆ. ಆದರೆ ಈಗ ಕಾಂಗ್ರೆಸ್‌ ಹಾಗೂ ಅಂಬರೀಷ್‌ ದ್ರೋಹ ಬಗೆದಿದ್ದಾರೆ. ಟಿಕೆಟ್‌ ನೀಡದಿದ್ದರೂ ನನ್ನ ಸ್ಪರ್ಧೆ ಖಚಿತ. ಬಂಡಾಯವಾಗಿ ಕಣಕ್ಕಿಳಿಯುತ್ತೇನೆ’ ಎಂದು ಗಣಿಗ ಪಿ.ರವಿಕುಮಾರ್‌ಗೌಡ ಹೇಳಿದರು.

ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿ ಕಾಂಗ್ರೆಸ್‌ ಕಚೇರಿಗೆ ಭದ್ರತೆ ಒದಗಿಸಿದರು. ನಂತರ ಚುನಾವಣಾಧಿಕಾರಿ ಭೇಟಿ ನೀಡಿ ಮಾಹಿತಿ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.