ADVERTISEMENT

ಅವ್ಯವಹಾರ ಖಂಡಿಸಿ ಸದಸ್ಯರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಮೇ 2017, 7:08 IST
Last Updated 22 ಮೇ 2017, 7:08 IST

ಮದ್ದೂರು: ಮಾರಸಿಂಗನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಯ ಅವ್ಯವಹಾರದ ವಿರುದ್ಧ ಆಡಳಿತ ಮಂಡಳಿ ಸದಸ್ಯರು ಭಾನುವಾರ ಪ್ರತಿಭಟನೆ ನಡೆಸಿದರು. ಕಾರ್ಯದರ್ಶಿ ಎಂ.ಗೂಳಿಗೌಡ ವಿರುದ್ಧ ಘೋಷಣೆ ಕೂಗಿ ಸಂಘದ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಸಂಘದ ಅಧ್ಯಕ್ಷ ಮರಿಕೆಂಚೇಗೌಡ ಮಾತನಾಡಿ, ‘ಗೂಳಿಗೌಡ ಸಂಘದ ನಾಲ್ವರು ಸದಸ್ಯರಿಂದ ರಾಜೀನಾಮೆ ಪತ್ರ ಪಡೆದು, ಉಪಾಧ್ಯಕ್ಷೆ ಸುಕನ್ಯಾ ಅವರ ರಾಜೀನಾಮೆ ಪತ್ರ ನಕಲು ಮಾಡಿ ಉಪನಿಬಂಧಕರಿಗೆ ಸಲ್ಲಿಸಿ ಆಡಳಿತ ಮಂಡಳಿ ವಜಾಗೊಳಿಸಿದರು.

ಇವರ ವಿರುದ್ಧ ಜಿಲ್ಲಾ ಸಹಕಾರ ನಿಬಂಧಕರ ಬಳಿ ದೂರು ನೀಡಿದ್ದು, ಅದು ವಿಚಾರಣೆ ಹಂತದಲ್ಲಿದೆ. ಆದರೆ, ಈಗ 15 ದಿನಗಳಿಂದ ಕರ್ತವ್ಯಕ್ಕೆ ಹಾಜರಾಗದೇ ನಮ್ಮನ್ನೇ ಅನೂರ್ಜಿತಗೊಳಿಸಿ ಸಂಘ ದಿಂದ ಹೊರ ಹಾಕುವ ಹುನ್ನಾರ ನಡೆಸಿದ್ದಾರೆ’ ಎಂದು ಆರೋಪಿಸಿದರು.

ಜಿಲ್ಲಾ ಸಹಕಾರ ನಿಬಂಧಕರು ಈ ಪ್ರಕರಣದ ತನಿಖೆ ಕೈಗೊಂಡು, ಅನ್ಯಾಯ ಸರಿಪಡಿಸಬೇಕು. ಸಂಘದಲ್ಲಿ ಬಹುಹಿಂದಿನಿಂದಲೂ ಅವ್ಯವಹಾರ ನಡೆಸಿರುವ ಕಾರ್ಯದರ್ಶಿಯನ್ನು ವಜಾ ಮಾಡಬೇಕು ಎಂದು ಆಗ್ರಹಿಸಿದರು.

ಉಪಾಧ್ಯಕ್ಷೆ ಸುಕನ್ಯಾ, ನಿರ್ದೇಶ ಕರಾದ ನಾಗರತ್ನಾ, ಸುಮಿತ್ರಮ್ಮ, ಡಿ.ಪುಟ್ಟಸ್ವಾಮಿ, ಸದಸ್ಯರಾದ ರೇಣುಕಸ್ವಾಮಿ, ಮರಿಯಪ್ಪ, ಆನಂದ, ಸತೀಶ್, ಎಂಸಿ.ಸತೀಶ್, ಚಿಕ್ಕಣ್ಣ, ಎಂ.ವಿ.ಕೊಮರಿಗೌಡ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.