ADVERTISEMENT

‘ಅಸ್ಪೃಶ್ಯತೆ ನಿವಾರಣೆಗೆ ಎಲ್ಲರ ಸಹಕಾರ ಅಗತ್ಯ’

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2017, 5:20 IST
Last Updated 20 ಡಿಸೆಂಬರ್ 2017, 5:20 IST

ನಾಗಮಂಗಲ: ಅಸ್ಪೃಶ್ಯತಾ ಆಚರಣೆ ಅಪರಾಧ ಎಂದು ಗೊತ್ತಿದ್ದರೂ ಅದು ನಿರಂತರವಾಗಿ ನಡೆಯುತ್ತಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಟಿ.ಗೋವಿಂದಯ್ಯಹೇಳಿದರು.

ಪಟ್ಟಣದ ಶಿಕ್ಷಕರ ಭವನದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಅಸ್ಪೃಶ್ಯತಾ ನಿವಾರಣಾ ಕಾರ್ಯಕ್ರಮದ ಅಂಗವಾಗಿ ಮಂಗಳವಾರ ನಡೆದ ವಿಚಾರ ಗೋಷ್ಠಿ ಮತ್ತು ಕಾರ್ಯಾಗಾರದಲ್ಲಿ ಕಾನೂನು ಅರಿವು ಮತ್ತು ಯೋಜನೆಗಳ ಕಿರುಹೊತ್ತಿಗೆ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಯಾವುದೇ ಕಾನೂನು ಕಟ್ಟಳೆಗಳಿಂದ ಅಸ್ಪೃಶ್ಯತಾ ನಿವಾರಣೆ ಮಾಡುವುದು ಕಷ್ಟ. ಸಾರ್ವಜನಿಕರ ಸಹಕಾರ, ಬೀದಿ ನಾಟಕಗಳು ಮತ್ತಿತರ ಚಟುವಟಿಕೆಗಳ ಮೂಲಕ ಜನರ ಮನಸ್ಸನ್ನು ಪರಿವರ್ತಿಸಬೇಕು. ಇದೊಂದು ಸಾಮಾಜಿಕ ಪಿಡುಗು ಮತ್ತು ಮಾನಸಿಕ ರೋಗ. ಇರುವುದೊಂದೇ ನೆಲ, ಕುಡಿಯುವುದೊಂದೇ ನೀರು. ಹೀಗಿದ್ದರೂ ಮೇಲು, ಕೀಳು ಎಂಬ ಭಾವನೆ ಏಕೆ ಎಂದು ಪ್ರಶ್ನಿಸಿದರು.

ADVERTISEMENT

ತಾಯಿ ತನ್ನ ಮಗುವಿನ ಮಲ–ಮೂತ್ರ ತೆಗೆಯಲು ಹೇಗೆ ಅಸಹ್ಯ ಪಟ್ಟುಕೊಳ್ಳುವುದಿಲ್ಲವೋ, ಹಾಗೆಯೇ ಪೌರಕಾರ್ಮಿಕರು ಇಡೀ ಊರನ್ನು ಸ್ವಚ್ಛಗೊಳಿಸುತ್ತಾರೆ. ಅವರೂ ತಾಯಿಗೆ ಸಮಾನ. ಅಂಥವರನ್ನು ನಾವು ಕೀಳಾಗಿ ಕಾಣುವುದು ಸರಿಯಲ್ಲ. ಸಮಾಜದಲ್ಲಿರುವುದು ಎರಡೇ ಜಾತಿ, ಒಂದು ಹೆಣ್ಣು ಮತ್ತೊಂದು ಗಂಡು. ಆದರೆ ಈ ಹೇಳಿಕೆಗಳು ವೇದಿಕೆಗಳಿಗಷ್ಟೇ ಸೀಮಿತವಾಗುತ್ತಿವೆ. ಅಸ್ಪೃಶ್ಯತೆಯನ್ನು ನಿವಾರಿಸಬೇಕು ಎಂಬ ಮನೋಬಾವ ಮನಸ್ಸಿನಿಂದ ಬರಬೇಕು ಎಂದು ಹೇಳಿದರು.

ವಕೀಲ ಲಕ್ಷ್ಮಿಸಾಗರ್ ಉಪನ್ಯಾಸ ನೀಡಿದರು. ತಹಶೀಲ್ದಾರ್ ಸಿ.ಶಿವಣ್ಣ, ಬಿಇಒ ಡಿ.ಆರ್.ಅಮಿತ್, ತಾಲ್ಲೂಕು ಪಂಚಾಯಿತಿ ಉದ್ಯೋಗ ಖಾತ್ರಿ ಯೋಜನೆಯ ಸಹಾಯಕ ನಿರ್ದೇಶಕ ರವಿಕಾಂತಮಣಿ, ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಟೇಶ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಸುನಂದ, ಮುತ್ತಣ್ಣ, ಎಪಿಎಂಸಿ ನಿರ್ದೇಶಕ ಶಿವಣ್ಣ, ವಕೀಲ ಎನ್.ಆರ್.ಚಂದ್ರಶೇಖರ್, ಸಮಾಜ ಕಲ್ಯಾಣಾಧಿಕಾರಿ ಟಿ.ಎಂ. ಜಯಪ್ರಕಾಶ್, ತೊಳಲಿ ಕೃಷ್ಣಮೂರ್ತಿ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.