ADVERTISEMENT

ಅಹವಾಲುಗಳನ್ನು ನೇರವಾಗಿ ಸಲ್ಲಿಸಿ– ಶಾಸಕ ಬಂಡಿಸಿದ್ದೇಗೌಡ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2017, 9:51 IST
Last Updated 15 ನವೆಂಬರ್ 2017, 9:51 IST

ಶ್ರೀರಂಗಪಟ್ಟಣ: ‘ಕ್ಷೇತ್ರದ ಜನರು ತಮ್ಮ ಯಾವುದೇ ಅಹವಾಲುಗಳನ್ನು ನನಗೆ ನೇರವಾಗಿ ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದು’ ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ತಿಳಿಸಿದರು. ಟೌನ್‌ ವ್ಯಾಪ್ತಿಯ ಗಂಜಾಂ ತಿರುವಿನಲ್ಲಿರುವ ಖಬರಸ್ತಾನ್‌ ಕಾಂಪೌಂಡ್‌ ನಿರ್ಮಾಣ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಕುಡಿಯುವ ನೀರಿನ ಸಮಸ್ಯೆ ಇಲ್ಲದಂತೆ ನೋಡಿಕೊಳ್ಳಲಾಗಿದೆ. ಪ್ರಮುಖ ರಸ್ತೆಗಳು ಅಭಿವೃದ್ಧಿಯಾಗುತ್ತಿವೆ. ರಾಜ್ಯದ ಕಾಂಗ್ರೆಸ್‌ ಸರ್ಕಾರ ನಮ್ಮ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ನೀಡಿದ್ದು, ಅಭಿವೃದ್ಧಿ ಕಾರ್ಯಗಳು ತ್ವರಿತ ಗತಿಯಲ್ಲಿ ನಡೆಯುತ್ತಿವೆ. ಅಲ್ಪಸಂಖ್ಯಾತರು, ಹಿಂದುಳಿದವರು ಸೇರಿದಂತೆ ಎಲ್ಲ ವರ್ಗದ ಜನರ ಬೇಡಿಕೆಗಳನ್ನು ಆದ್ಯತೆ ಮೇಲೆ ಈಡೇರಿಸಲಾಗುತ್ತಿದ್ದು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಂಘ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯಲು ಅಗತ್ಯ ಸಹಕಾರ ನೀಡಬೇಕು’ ಎಂದು ಕೋರಿದರು.

‘ಗಂಜಾಂನ ಪ್ರಮುಖ ಖಬರಸ್ತಾನ್‌ ಸುತ್ತ ಕಾಂಪೌಂಡ್‌ ನಿರ್ಮಾಣಕ್ಕೆ ವಕ್ಫ್‌ ಸಚಿವಾಲಯದಿಂದ ₹ 32 ಲಕ್ಷ ಹಣ ಬಿಡುಗಡೆಯಾಗಿದೆ. ಸಮಾಜದ ಮುಖಂಡರ ಕೋರಿಕೆಯಂತೆ ಅನುದಾನ ಕೊಡಿಸಲಾಗಿದೆ. ಆದಷ್ಟು ಶೀಘ್ರ ಕಾಮಗಾರಿಯನ್ನು ಮುಗಿಸುವಂತೆ, ಗುಣಮಟ್ಟ ಕಾಪಾಡುವಂತೆ ಸಂಬಂಧಿಸಿದವರಿಗೆ ತಿಳಿಸಿದ್ದೇನೆ’ ಎಂದರು.

ADVERTISEMENT

ಖಬರಸ್ತಾನ್‌ ಆವರಣದಲ್ಲಿ ಶೆಡ್‌ ನಿರ್ಮಿಸಿಕೊಡುವಂತೆ ಸ್ಥಳೀಯರು ಶಾಸಕರಿಗೆ ಮನವಿ ಮಾಡಿದರು. ಟಿಪ್ಪು ವಕ್ಫ್‌ ಎಸ್ಟೇಟ್‌ ಕಾರ್ಯದರ್ಶಿ ಇರ್ಫಾನ್‌ ಅಹಮದ್‌, ಸದಸ್ಯ ಇಕ್ಬಾಲ್‌ ಪಾಷ, ಮುಖಂಡರಾದ ಮಜರ್‌ಪಾಷ, ರವೂಫ್‌, ಮಹಮದ್‌ ಗೌಸ್‌, ಎಂ.ಎಲ್‌. ದಿನೇಶ್‌, ಸಲೀಂ, ಚಂದ್ರು, ಗುಂಬಸ್‌ನ ಇಮಾಂ ಇನಾಯತ್‌– ಉರ್‌– ರೆಹಮಾನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.