ಶ್ರೀರಂಗಪಟ್ಟಣ: ತಾಲ್ಲೂಕಿನ ರಾಂಪುರ ಗ್ರಾಮದಲ್ಲಿ ರಾಸುಗಳಿಗೆ ಕಾಲುಬಾಯಿ ಜ್ವರ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದ್ದರೂ ರೋಗ ನಿಯಂತ್ರಣಕ್ಕೆ ಪಶುಪಾಲನಾ ಇಲಾಖೆ ಯಾವುದೇ ಕ್ರಮ ವಹಿಸುತ್ತಿಲ್ಲ ಎಂದು ಆರೋಪಿಸಿ ಗ್ರಾಮಸ್ಥರು ಬುಧವಾರ ಪಟ್ಟಣದ ಪಶುಪಾಲನಾ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ತಾ.ಪಂ.ಸದಸ್ಯ ಬಿ.ಎಸ್.ವಾಸು, ಮಾಜಿ ಸದಸ್ಯ ಬಿ.ಎಸ್.ಸಂದೇಶ್ ನೇತೃತ್ವದಲ್ಲಿ ಗ್ರಾಮಸ್ಥರು ಇಲಾಖೆಯ ಕಚೇರಿಗೆ ಮುತ್ತಿಗೆ ಹಾಕಿ, ಇಲಾಖೆಯ ಸಹಾಯಕ ನಿರ್ದೇಶಕ ಡಾ.ಲಕ್ಷ್ಮೀಕಾಂತ್ ಅವರನ್ನು ತರಾಟೆಗೆ ತೆಗೆದುಕೊಂಡರು. ರಾಂಪುರ ಗ್ರಾಮದ ಪಶುಪಾಲಕ ನರಸಿಂಹಮೂರ್ತಿ ಎಂಬವರು ರಾಸುಗಳಿಗೆ ಕಾಲುಬಾಯಿ ಜ್ವರ ಹರಡಿರುತ್ತಿರುವ ಸಂಗತಿಯನ್ನು ತಿಳಿಸಲು ಮೊಬೈಲ್ ಕರೆ ಮಾಡಿದಾಗ ಲಕ್ಷ್ಮೀಕಾಂತ್ ಅವರು ಬೇಜವಾಬ್ದಾರಿಯಿಂದ ಪ್ರತಿಕ್ರಿಯಿಸಿದರು ಎಂದು ಗ್ರಾಮಸ್ಥರು ದೂರಿದರು.
ಗ್ರಾಮದಲ್ಲಿ ಕಾಲುಬಾಯಿ ಜ್ವರ ದಿನೇ ದಿನ ಹೆಚ್ಚುತ್ತಿದೆ. ನಾಗರಾಜು ಎಂಬವರ ಹಸು ಮಂಗಳವಾರ ಮೃತಪಟ್ಟಿದ್ದು, ಇನ್ನೂ ಹತ್ತಾರು ಹಸುಗಳು ಅಸ್ವಸ್ಥಗೊಂಡಿವೆ. ಸಮಸ್ಯೆ ನಿವಾರಣೆಗೆ ಪಶು ವೈದ್ಯಕೀಯ ಇಲಾಖೆ ಸರಿಯಾಗಿ ಸ್ಪಂದಿಸದ ಕಾರಣ ಪಶುಪಾಲಕರು ಕಂಗಾಲಾಗಿದ್ದಾರೆ. ಖಾಸಗಿ ವೈದ್ಯರಿಗೆ ಸಾವಿರಾರು ರೂಪಾಯಿ ಹಣ ಕೊಟ್ಟು ಚಿಕಿತ್ಸೆ ಕೊಡಿಸುತ್ತಿದ್ದೇವೆ ಎಂದು ಗ್ರಾಮಸ್ಥರು ಸಮಸ್ಯೆ ತೋಡಿಕೊಂಡರು.
ರಾಂಪುರ ಗ್ರಾಮದಲ್ಲಿ ಜ್ವರದಿಂದ ಬಳಲುತ್ತಿರುವ ರಾಸುಗಳಿಗೆ ಬುಧವಾರದಿಂದಲೇ ಚಿಕಿತ್ಸೆ ಆರಂಭಿಸುವುದಾಗಿ ಲಕ್ಷ್ಮೀಕಾಂತ್ ಭರವಸೆ ನೀಡಿದರು. ಗ್ರಾಮ ಪಂಚಾಯಿತಿ ಸದಸ್ಯ ಶ್ರೀಕಂಠು, ಮೋಹನಕುಮಾರ್, ಯೋಗೇಶ್, ಅಭಿಷೇಕ್, ಸ್ವಾಮಿಗೌಡ, ರವಿಕುಮಾರ್, ಮಂಜು ಇದ್ದರು.
**
ಪಶುಭಾಗ್ಯ ಇತರ ಯೋಜನೆಗಳಡಿ ರಾಂಪುರ ಗ್ರಾಮಕ್ಕೆ ಯಾವುದೇ ಸವಲತ್ತುಗಳು ದೊರಕುತ್ತಿಲ್ಲ
–ಬಿ.ಎಸ್.ವಾಸು, ತಾ.ಪಂ ಸದಸ್ಯ
**
ನೇರಲಕೆರೆ, ಕೆ.ಶೆಟ್ಟಹಳ್ಳಿ, ಗಾಮನಹಳ್ಳಿಗಳಲ್ಲಿ ರಾಸುಗಳಿಗೆ ಅನಾರೋಗ್ಯ ಉಂಟಾಗಿದ್ದು, ಲಭ್ಯ ಇರುವ ಸಿಬ್ಬಂದಿಯನ್ನು ಬಳಸಿಕೊಂಡು ಚಿಕಿತ್ಸೆ ನೀಡುವುದು ಕಷ್ಟವಾಗುತ್ತಿದೆ
– ಡಾ.ಲಕ್ಷ್ಮೀಕಾಂತ್, ಸಹಾಯಕ ನಿರ್ದೇಶಕ, ಪಶುಪಾಲನಾ ಇಲಾಖೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.