ಭಾರತೀನಗರ: ನನ್ನ ಮದುವೆಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬರಬೇಕು. ನನ್ನ ತಲೆಯ ಮೇಲೆ ಅಕ್ಷತೆ ಹಾಕುವವರೆಗೂ ನಾನು ತಾಳಿ ಕಟ್ಟುವುದಿಲ್ಲ... ಹಸೆಮಣೆ ಏರಲು ಸಿದ್ಧನಾಗಿರುವ ಸಮೀಪದ ಕೊಕ್ಕರೆಬೆಳ್ಳೂರು ಗ್ರಾಮದ ಬಿ.ವಿ. ರವಿ ಅವರ ಸ್ಪಷ್ಟ ನುಡಿಗಳಿವು.
ಮಾಲಗಾರನಹಳ್ಳಿ ಗ್ರಾಮದ ಸಮುದಾಯ ಭವನದಲ್ಲಿ ನ.30 ಹಾಗೂ ಡಿ.1 ರಂದು ವಿವಾಹ ನಡೆಯಲಿದೆ. ಮದುವೆಗೆ ಕುಮಾರಸ್ವಾಮಿ ಬಂದೇ ಬರುತ್ತಾರೆ ಎಂಬ ಸಂಭ್ರಮದಿಂದ ರವಿ ಮದುವೆ ಸಿದ್ಧತೆಯಲ್ಲಿ ತೊಡಗಿದ್ದಾರೆ. ಮದ್ದೂರು ತಾಲ್ಲೂಕಿನ ಮಾಲಗಾರನಹಳ್ಳಿ ಗ್ರಾಮದ ಪುತ್ರಿ ಎಂ. ಸೌಮ್ಯಾ ಅವರೊಂದಿಗೆ ವಿವಾಹ ನಿಶ್ಚಯವಾಗಿದೆ.
ರವಿ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ಅಭಿಮಾನಿ. ಈಗಾಗಲೇ ಕುಮಾರಸ್ವಾಮಿ ಅವರಿಗೆ ಆಹ್ವಾನ ಪತ್ರಿಕೆ ಕೊಟ್ಟಿದ್ದಾರೆ. ‘ನಿನ್ನ ಮದುವೆಗೆ ಖಂಡಿತಾ ಬರುತ್ತೇನೆ ಎಂದು ಕುಮಾರಣ್ಣ ಮಾತು ಕೊಟ್ಟಿದ್ದಾರೆ. ಆದರೆ ಸ್ಥಳೀಯರು ಅವರನ್ನು ಕರೆತರಲು ಮೀನಾಮೇಷ ಎಣಿಸುತ್ತಿದ್ದಾರೆ. ನನ್ನ ಮದುವೆಗೆ ಕುಮಾರಣ್ಣ ಬಾರದಿದ್ದರೆ ನಾನು ತಾಳಿಯನ್ನೇ ಕಟ್ಟುವುದಿಲ್ಲ’ ಎಂದು ರವಿ ಹಟ ಹಿಡಿದಿದ್ದಾರೆ.
ಲಗ್ನಪತ್ರಿಕೆಯಲ್ಲಿ ಎಚ್.ಡಿ. ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ ಹೆಸರನ್ನು ಭಾವಚಿತ್ರ ಸಮೇತ ಮುದ್ರಿಸಿ ಬಂಧು ಬಳಗಕ್ಕೆ, ಸ್ನೇಹಿತರಿಗೆ ವಿತರಣೆ ಮಾಡಲಾಗಿದೆ. ತಾವು ಧರಿಸುವ ಟಿ–ಶರ್ಟ್, ಅಂಗಿಗಳ ಮೇಲೆ ಕುಮಾರಸ್ವಾಮಿ ಭಾವಚಿತ್ರ ಹಾಕಿಸಿಕೊಂಡಿದ್ದಾರೆ. ಬೈಕ್ ಮೇಲೂ ಕುಮಾರಸ್ವಾಮಿ ಭಾವಚಿತ್ರ ಇದೆ. ಎಡಗೈ ಮೇಲೂ ಎಚ್.ಡಿ. ಕುಮಾರಸ್ವಾಮಿ ಅವರ ಹೆಸರಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.