ADVERTISEMENT

ಗಾಂಧಿ, ಅಂಬೇಡ್ಕರ್‌ ಸಾರ್ವಕಾಲಿಕ

ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಎಸ್‌. ತುಕಾರಾಂ ಅಭಿಮತ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2017, 8:14 IST
Last Updated 14 ಏಪ್ರಿಲ್ 2017, 8:14 IST
ಮಂಡ್ಯದ ಗಾಂಧಿ ಭವನದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ರಾಜು ಬಿ ಕನ್ನಲಿ ಅವರ ‘ಗಾಂಧೀಜಿ ಹೋರಾಟದ ಬಹುರೂಪಗಳು’ ಕೃತಿಯನ್ನು ಮಹಾತ್ಮಾಗಾಂಧಿ ಸ್ಮಾರಕ ಟ್ರಸ್ಟ್‌ ಅಧ್ಯಕ್ಷ ಜಿ. ಮಾದೇಗೌಡ  ಬಿಡುಗಡೆ ಮಾಡಿದರು
ಮಂಡ್ಯದ ಗಾಂಧಿ ಭವನದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ರಾಜು ಬಿ ಕನ್ನಲಿ ಅವರ ‘ಗಾಂಧೀಜಿ ಹೋರಾಟದ ಬಹುರೂಪಗಳು’ ಕೃತಿಯನ್ನು ಮಹಾತ್ಮಾಗಾಂಧಿ ಸ್ಮಾರಕ ಟ್ರಸ್ಟ್‌ ಅಧ್ಯಕ್ಷ ಜಿ. ಮಾದೇಗೌಡ ಬಿಡುಗಡೆ ಮಾಡಿದರು   

ಮಂಡ್ಯ: ಅಸ್ಪೃಶ್ಯತೆ ನಿವಾರಣೆಗೆ ಶ್ರಮಿಸಿದ ಬಸವಣ್ಣ, ಸರಳತೆಗೆ ಹೆಸರುವಾಸಿಯಾದ ಗಾಂಧಿ ಹಾಗೂ ಅಸಮಾನತೆ ವಿರುದ್ಧ ಹೋರಾಡಿದ ಅಂಬೇಡ್ಕರ್‌ ಅವರ ಆದರ್ಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಮೈಸೂರಿನ ರಾಜ್ಯ ಸಂಪನ್ಮೂಲ ಕೇಂದ್ರದ ನಿರ್ದೇಶಕ ಎಸ್‌.ತುಕಾರಾಂ ಹೇಳಿದರು.

ನಗರದ ಗಾಂಧಿ ಭವನದಲ್ಲಿ ಮಹಾತ್ಮ ಗಾಂಧಿ ಸ್ಮಾರಕ ಟ್ರಸ್ಟ್‌ ವತಿಯಿಂದ ಗುರುವಾರ ನಡೆದ ರಾಜು ಬಿ. ಕನ್ನಲಿ ಅವರ ‘ಗಾಂಧೀಜಿಯ ಹೋರಾಟದ ಬಹುರೂಪಗಳು’ ಕೃತಿ ಬಿಡುಗಡೆ ಹಾಗೂ ಗಾಂಧಿ ಭವನ ಕಟ್ಟಡದ 11ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಮಾಜದಲ್ಲಿ ಮಾತಿಗೆ ಮೌಲ್ಯ ಕಡಿಮೆ ಆಗುತ್ತಿದ್ದು, ಅದು ಸೋತಿದೆ ಎಂದರೆ ತಪ್ಪಾಗಲಾರದು. ನೈತಿಕತೆ ಹೊಂದಿದವರ ಮಾತಿಗೆ ಮೌಲ್ಯವಿತ್ತು. ಸಮಾಜದಲ್ಲಿ ಅವರ ಮಾತಿಗೆ ಗೌರವವನ್ನೂ ಕೊಡಲಾಗುತ್ತಿತ್ತು. ಈಗ ಅದು ಮರೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಬಸವಣ್ಣ, ಗಾಂಧಿ, ಅಂಬೇಡ್ಕರ್‌ ಸೇರಿದಂತೆ ಇತರ ಮಹನೀಯರ ಆದರ್ಶಗಳನ್ನು ವಿದ್ಯಾರ್ಥಿಗಳು ಹಾಗೂ ಯುವ ಜನರಿಗೆ ತಿಳಿಸಿಕೊಡುವ ಕೆಲಸ ಮಾಡಬೇಕು. ಸಮಾಜದಲ್ಲಿ ಜಾತಿ ಭೇದ,  ಅಸಮಾನತೆ, ಅಸ್ಪೃಶ್ಯತೆ ವಿರೋಧಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪುಸ್ತಕ ಬಿಡುಗಡೆ ಮಾಡಿದ ಮಹಾತ್ಮಗಾಂಧಿ ಸ್ಮಾರಕ ಟ್ರಸ್ಟ್‌ ಅಧ್ಯಕ್ಷ ಜಿ. ಮಾದೇಗೌಡ ಮಾತನಾಡಿ, ಗಾಂಧಿ ಅವರು ಹೋರಾಟದ ಮೂಲಕವೇ ಮಹಾತ್ಮ ಎನಿಸಿಕೊಂಡಿದ್ದರು. ಅಂತಹವರ ಮೌಲ್ಯವನ್ನು ಎಲ್ಲರೂ ತಿಳಿದುಕೊಳ್ಳಬೇಕು. ಮಹಿಳೆಯರ ಬಗ್ಗೆ ಅಪಾರ ಕಾಳಜಿ ಇಟ್ಟುಕೊಂಡಿದ್ದರು. ಮಹಿಳೆಯರು ಸ್ವಾವಲಂಬಿ ಬದುಕು ನಡೆಸಬೇಕು ಎಂದು ಕರೆ ನೀಡಿದ್ದರು ಎಂದು ತಿಳಿಸಿದರು. ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಪ್ರಸನ್ನ ಎನ್‌.ಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.