ADVERTISEMENT

ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿ

ಸ್ವಸಹಾಯ ಸಂಘದ ಪದಾಧಿಕಾರಿಗಳ ಪದಗ್ರಹಣ, ಧಾರ್ಮಿಕ ಸಭೆ; ಶಿವಮೂರ್ತಿ ಕೀಲಾರ ಸಲಹೆ

​ಪ್ರಜಾವಾಣಿ ವಾರ್ತೆ
Published 15 ಮೇ 2017, 7:09 IST
Last Updated 15 ಮೇ 2017, 7:09 IST
ಕೆರಗೋಡು: ಗ್ರಾಮೀಣ ಭಾಗದಲ್ಲಿ ಜನರು ಶಿಕ್ಷಣದ ಬಗ್ಗೆ ಹೆಚ್ಚಿನ ಗಮನ ನೀಡಬೇಕು.  ಮಕ್ಕಳಿಗೆ ಆಸ್ತಿ ಮಾಡುವ ಬದಲು ಅವರಿಗೆ ಉತ್ತಮ ಶಿಕ್ಷಣ ದೊರಕಲು ಯೋಜನೆ ರೂಪಿಸಬೇಕು ಎಂದು ಅನಿವಾಸಿ ಭಾರತೀಯ ಉದ್ಯಮಿ ಶಿವಮೂರ್ತಿ ಕೀಲಾರ ಹೇಳಿದರು.

ಸಮೀಪದ ಕೀಲಾರ ಗ್ರಾಮದಲ್ಲಿ ಭಾನುವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಯೋಜಿಸಿದ್ದ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸದಸ್ಯರು ಸಂಘದಿಂದ ಸಾಲ ಪಡೆದು ಆರ್ಥಿಕ ಅಭಿವೃದ್ಧಿ ಹೊಂದಿ ಸಶಕ್ತರಾಗುವ ಜತೆಗೆ ಸಾಲ ತೀರಿಸಲು ಬದ್ಧರಾಗಬೇಕು ಎಂದರು.

‘ಮಹಿಳೆಯರು ಆರೋಗ್ಯದ ಬಗ್ಗೆ ಹೆಚ್ಚು ನಿಗಾ ವಹಿಸಿ ಇಡೀ ಕುಟುಂಬದ ರಕ್ಷಣೆ ಮಾಡಬೇಕು. ಮುಂದಿನ ದಿನಗಳಲ್ಲಿ ಆರೋಗ್ಯ ಶಿಬಿರದ ವ್ಯವಸ್ಥೆ ಮಾಡಲಾಗುವುದು’ ಎಂದರು.
 
ಮಂಡ್ಯ ತಹಶೀಲ್ದಾರ್ ಮಾರುತಿ ಪ್ರಸನ್ನ, ‘ಜನರು ಉತ್ತಮ ಚಿಂತನೆಗಳನ್ನು ಅಳವಡಿಸಿಕೊಂಡರೆ ಗ್ರಾಮದ ಅಭಿವೃದ್ಧಿ ಸಾಧ್ಯವಾಗುತ್ತದೆ. ಇಂದು ದೇಶದಾದ್ಯಂತ ಬರಗಾಲ ಎದುರಾಗಿದ್ದು ಜೀವಜಲ ಉಳಿಸಲು ಗ್ರಾಮದ ಕೆರೆಗಳನ್ನು ಉಳಿಸಬೇಕು’ ಎಂದರು.
 
ಬಳಿಕ ಕೀಲಾರ ವಲಯದ 10 ಒಕ್ಕೂಟಗಳ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ನಡೆಯಿತು. ಇದಕ್ಕೂ ಮೊದಲು ಸತ್ಯನಾರಾಯಣ ಪೂಜೆ ನಡೆಯಿತು.
 
ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಕೆ.ರವಿಕುಮಾರ ಚಾಮಲಾಪುರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯೆ ರಾಣಿ ಸಿದ್ದರಾಜು, ಮಾಜಿ ಸದಸ್ಯ ಕೆ.ಎಸ್. ವಿಜಯಾನಂದ, ತಾಲ್ಲೂಕು ಪಂಚಾಯಿತಿ ಸದಸ್ಯ ಶಿವರುದ್ರ, ಎಪಿಎಂಸಿ ನಿರ್ದೇಶಕ ಕೆ.ಪಿ.ವೀರಪ್ಪ, ಆರ್ಗ್ಯಾನಿಕ್ ಸಂಸ್ಥೆ ಅಧ್ಯಕ್ಷ ಎಸ್.ಸಿ. ಮಧುಚಂದನ್, ಗ್ರಾಮ ಪಂಚಾಯಿತಿ ಅಧ್ಯಕ್ಷ  ಕೆ.ಎಸ್. ರಮೇಶ್, ಜೆ.ಸಿ. ಸೌಮ್ಯಾ, ಸದಸ್ಯ ಶಿವಕುಮಾರ್, ಶಾರದಾ, ಸದಾನಂದ ಬಂಗೇರಾ, ಮೇಲ್ವಿಚಾರಕರಾದ ಮುದ್ದುರಾಜು, ಸೌಮ್ಯಾ ಶೆಟ್ಟಿ, ಅನಿತಾ, ಶಿಕ್ಷಕ ಕೆ.ಆರ್. ಶಶಿಧರ ಈಚಗೆರೆ, ಪ್ರೇಮಾ ಮತ್ತು ಸೇವಾ ಪ್ರತಿನಿಧಿಗಳು  ಇದ್ದರು. ಬಳಿಕ ಸಂಘದ ಸದಸ್ಯರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.