ADVERTISEMENT

ಜನಪ್ರತಿನಿಧಿಗಳು ಬಂಡವಾಳಶಾಹಿಗಳ ಕೈಗೊಂಬೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2017, 6:26 IST
Last Updated 15 ಜುಲೈ 2017, 6:26 IST

ಭಾರತೀನಗರ: ‘ಜನಪ್ರತಿನಿಧಿಗಳು ಬಂಡವಾಳಶಾಹಿಗಳ  ಕೈಗೊಂಬೆಗಳಾಗಿ ದ್ದಾರೆ’ ಎಂದು ಸಾಹಿತಿ ದೇವನೂರ ಮಹಾದೇವ ಶುಕ್ರವಾರ ಹೇಳಿದರು.
ಸಮೀಪದ ಹನುಮಂತನಗರದಲ್ಲಿ ರೈತಸಂಘ, ಹಸಿರು ಸೇನೆ ಆಯೋಜಿಸಿದ್ದ ಎರಡು ದಿನಗಳ ಮೈಸೂರು ವಿಭಾಗ ಮಟ್ಟದ ಅಧ್ಯಯನ ಶಿಬಿರ ಉದ್ಘಾಟಿಸಿ  ಮಾತನಾಡಿದರು.

ಬಂಡವಾಳ ಶಾಹಿಗಳ ತಾಳಕ್ಕೆ ಕುಣಿದು ಇಷ್ಟ ಬಂದಂತೆ ಅಧಿಕಾರ ನಡೆಸುತ್ತಿರುವ ಸರ್ಕಾರಗಳು ರೈತರ ಮೇಲಿನ ಜವಾಬ್ದಾರಿ ಮರೆತಿವೆ. ರಾಜಕಾರಣಿಗಳು ಮತ್ತು ಬಂಡವಾಳ ಶಾಹಿಗಳು ರೈತರನ್ನು ಜೀತದಾಳುಗಳನ್ನಾಗಿ ನಡೆಸಿಕೊಳ್ಳುತ್ತಿವೆ. ರೈತ ತಾನು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗದೆ ಕಂಗಾಲಾಗಿದ್ದಾನೆ. ಆದರೂ ಸರ್ಕಾರಗಳು ಆತನ ಬೆನ್ನೆಲುಬಾಗಿ ನಿಲ್ಲದೆ ಇರುವುದು ವಿಪರ್ಯಾಸ ಎಂದರು.

ಶಾಸಕ ಕೆ.ಎಸ್. ಪುಟ್ಟಣ್ಣಯ್ಯ, ಪ್ರತಿ ಹಂತದಲ್ಲೂ ರೈತ ಸಂಕಷ್ಟದಲ್ಲಿದ್ದು ಸರ್ಕಾರಗಳು ರೈತರ ಬದುಕು ಹಸನು ಮಾಡಲು ಪಣ ತೊಡಬೇಕು. ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ನೀಡಬೇಕು. ಆತ್ಮಹತ್ಯೆ ಮಾಡಿಕೊಳ್ಳದಂತೆ ಆತ್ಮ ಸ್ಥೈರ್ಯ ತುಂಬಬೇಕು ಎಂದರು.

ADVERTISEMENT

ತಮಿಳುನಾಡಿಗೆ ನೀರು ಹರಿಸುವುದನ್ನು ಖಂಡಿಸಿದ ಅವರು, ಸರ್ಕಾರ ಅಸ್ತಿತ್ವ ಉಳಿಸಿಕೊಳ್ಳಲು ಅನ್ನದಾತನ ಬಲಿಕೊಡುತ್ತಿರುವುದು ನಿಜಕ್ಕೂ ತಿಳಿಗೇಡಿತನ ಎಂದರು. ಕೆ.ಟಿ. ಗಂಗಾಧರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪಾಧ್ಯಕ್ಷ ಪ್ರೊ.ಕೆ.ಸಿ. ಬಸವರಾಜು, ಹಾವೇರಿ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ಅಕ್ಕಿ ಮಾತನಾಡಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಮಧು ಜಿ. ಮಾದೇಗೌಡ, ಜಿ.ಪಂ  ಮಾಜಿ ಸದಸ್ಯ ಕೆಂಪೂಗೌಡ, ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ, ಜಿಲ್ಲಾ ಘಟಕದ ಅಧ್ಯಕ್ಷ ಶಂಭೂನಹಳ್ಳಿ ಸುರೇಶ್,  ಉಪಾಧ್ಯಕ್ಷ ಅಣ್ಣೂರು ಮಹೇಂದ್ರ, ಪ್ರಧಾನ ಕಾರ್ಯದರ್ಶಿ ಬಿ. ಬೊಮ್ಮೇಗೌಡ, ವಿಭಾಗೀಯ ಉಪಾಧ್ಯಕ್ಷ ಕೋಣಸಾಲೆ ನರಸರಾಜು, ಕಾರ್ಯದರ್ಶಿ ರಾಮ ಕೃಷ್ಣಯ್ಯ, ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಎ. ಶಂಕರ್, ಕಾರ್ಯದರ್ಶಿ ಶೆಟ್ಟಹಳ್ಳಿ ರವಿಕುಮಾರ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.