ಕೆ.ಆರ್.ಪೇಟೆ: ದೇಶದ ಭವಿಷ್ಯ ಯುವಜನರ ಕೈಯಲ್ಲಿದ್ದು, ಜ್ಞಾನ ವೃದ್ಧಿಸಿಕೊಂಡು ದೇಶ ಹಿತಕಾಯುವ ಜವಾಬ್ದಾರಿಯನ್ನು ವಿದ್ಯಾರ್ಥಿಗಳು ಹೊರಬೇಕು ಎಂದು ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಅಭಿಪ್ರಾಯಪಟ್ಟರು.
ಪಟ್ಟಣದ ಕೃಷ್ಣರಾಜ ಪದವಿಪೂರ್ವ ಕಾಲೇಜು ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಕಾಲೇಜು ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಉತ್ತಮ ಅಂಕ ತೆಗೆದು ಜ್ಞಾನ ಸಂಪಾದಿಸಿದರೆ ಮಾತ್ರ ಉದ್ಯೋಗ ಲಭಿಸುತ್ತದೆ. ರಾಜಕಾರಣಿಗಳ, ಉನ್ನತ ಅಧಿಕಾರಿಗಳ ಪ್ರಭಾವ ಬಳಸಿ ಅಥವಾ ಹಣಬಲದಿಂದ ಉದ್ಯೋಗ ಪಡೆಯುವ ಕಾಲ ಈಗಿಲ್ಲ. ಈಗ ಏನಿದ್ದರೂ ಸ್ಪರ್ಧಾಯುಗ. ಅದಕ್ಕೆ ನೀವು ಸಿದ್ಧರಾಗಬೇಕು ಎಂದರು.
ಸಿಪಿಐ ಎಚ್.ಬಿ.ವೆಂಕಟೇಶಯ್ಯ ಮಾತನಾಡಿ, ವಿದ್ಯಾರ್ಥಿಗಳು ಕಾನೂನಿನ ಅರಿವು ಮೂಡಿಸಿಕೊಳ್ಳಬೇಕು. ಮೊಬೈಲ್ ಅವಲಂಬನೆ ಬಿಡಬೇಕು. ಹದಿ ವಯಸ್ಸಿನಲ್ಲಿಯೇ ಪ್ರೀತಿ-ಪ್ರೇಮದ ಬಲೆಗೆ ಸಿಲುಕಿ ಭವಿಷ್ಯಕ್ಕೆ ಕುತ್ತು ತಂದುಕೊಳ್ಳಬಾರದು ಎಂದು ಕಿವಿ ಮಾತು ಹೇಳಿದರು. ಕಾಲೇಜಿನ ಹಿರಿಯ ವಿದ್ಯಾರ್ಥಿ ತಾಲ್ಲೂಕು ಪಂಚಾಯತಿ ಸದಸ್ಯ ಬಿ.ಎನ್.ದಿನೇಶ್ ಅವರನ್ನು ವಿದ್ಯಾರ್ಥಿ ಸಂಘದ ವತಿಯಿಂದ ಗೌರವಿಸಲಾಯಿತು.
ಅಧ್ಯಕ್ಷತೆಯನ್ನು ಬಂಡಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ರಾಮಯ್ಯ ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ಜಿ.ಬಿ.ಮಲ್ಲಪ್ಪ, ಕೆ.ಬಿ.ನಂದೀಶ್, ಕೆ.ಸಿ.ರಾಮ ಚಂದ್ರೇ ಗೌಡ, ಎಸ್.ಬಿ.ಲೋಕೇಶ್, ಹರಿಚರಣ ತಿಲಕ್, ಹರೀಶ್ ಬಾಬು, ರಾಮ ಲಿಂಗು, ಕೃಷ್ಣಪ್ಪ, ಸಿ.ಕೆ.ನಂಜೇಗೌಡ ಇದ್ದರು.