ADVERTISEMENT

ನಗರಸಭೆಯಲ್ಲಿ ಸಿಬ್ಬಂದಿ ಕೊರತೆ!

ಬಸವರಾಜ ಹವಾಲ್ದಾರ
Published 26 ಡಿಸೆಂಬರ್ 2016, 8:22 IST
Last Updated 26 ಡಿಸೆಂಬರ್ 2016, 8:22 IST
ಮಂಡ್ಯ ನಗರಸಭೆಯ ಕಚೇರಿ ಕಟ್ಟಡ
ಮಂಡ್ಯ ನಗರಸಭೆಯ ಕಚೇರಿ ಕಟ್ಟಡ   

ಮಂಡ್ಯ: ಜನಪ್ರತಿನಿಧಿಗಳು ಅಧಿಕಾರ ಕ್ಕಾಗಿ ಕಿತ್ತಾಟ ನಡೆಸುವ ಕಾರಣಕ್ಕಾಗಿ ಒಂದೆಡೆ ನಗರಸಭೆ ಆಡಳಿತ ಕುಂಠಿತ ಗೊಂಡಿದ್ದರೆ, ಇನ್ನೊಂದೆಡೆ ಸಿಬ್ಬಂದಿ ಕೊರತೆಯಿಂದಾಗಿಯೂ ನಗರಸಭೆಯ ಆಡಳಿತ ಕುಂಠಿತಗೊಂಡಿದೆ.

ಸಿಬ್ಬಂದಿ ಭರ್ತಿಗೆ ಶ್ರಮಿಸಬೇಕಿದ್ದ ನಗರಸಭೆ ಜನಪ್ರತಿನಿಧಿಗಳು ಅಧಿಕಾರ ಕ್ಕಾಗಿ ರಾಜಕೀಯ ಚದುರಂಗದಾಟದಲ್ಲಿ ತೊಡಗಿಕೊಂಡಿದ್ದಾರೆ. ನಗರಸಭೆಯ ಅಧಿಕಾರಿಗಳು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಅಧಿಕಾರಿಗಳು ಮನವಿ ಮಾಡಿಕೊಳ್ಳಬಹುದು. ಜನಪ್ರತಿನಿಧಿ ಗಳಂತೆ ಒತ್ತಡ ಹಾಕಲು ಸಾಧ್ಯವಾಗು ವುದಿಲ್ಲ. ಒತ್ತಡ ಹಾಕಬೇಕಾಗಿದ್ದವರು ಗಮನ ಹರಿಸುತ್ತಿಲ್ಲ. ಹಾಗಾಗಿ ಸ್ವಚ್ಛತೆ ಸೇರಿದಂತೆ ಹಲವು ಕೆಲಸಗಳು ಆಮೆಗತಿಯಲ್ಲಿ ನಡೆದಿವೆ.

ಕಂದಾಯ, ಆರೋಗ್ಯ ಬಡತನ ನಿರ್ಮೂಲನಾ ಶಾಖೆಗಳ ಪ್ರಮುಖ ಹುದ್ದೆಗಳು ಸೇರಿದಂತೆ 200ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಅದರ ಪರಿಣಾಮ ಸಾರ್ವಜನಿಕರಿಗೆ ಸೇವೆ ಒದಗಿಸುವುದು ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಹಿನ್ನಡೆಯಾಗಿದೆ.

ಹಿರಿಯ, ಕಿರಿಯ ಆರೋಗ್ಯ ನಿರೀಕ್ಷಕರು, ಸಮುದಾಯ ಸಂಘಟನಾ ಧಿಕಾರಿ, ಸಮುದಾಯ ಸಂಘಟಕ ಪ್ರಥಮ ಮತ್ತು ದ್ವಿತೀಯ ದರ್ಜೆ ಸಹಾ ಯಕರು, ಪ್ರಥಮ ದರ್ಜೆ ಕಂದಾಯ ನಿರೀಕ್ಷಕರು, ಕರ ವಸೂಲಿಗಾರರು, ಪೌರ ಕಾರ್ಮಿಕರು, ವಾಹನ ಚಾಲಕರ ಹುದ್ದೆಗಳು ಖಾಲಿ ಇವೆ.

ಅಕ್ರಮ ಕಟ್ಟಡಗಳ ಗುರುತಿಸುವಿಕೆ, ಕಂದಾಯ ವಸೂಲಿ, ಇ–ಆಸ್ತಿಯಲ್ಲಿ ಫಾರಂ–3 ನೀಡುವುದು. ನಿಗದಿತವಾಗಿ ನಗರದ ಸ್ವಚ್ಛತಾ ಕಾರ್ಯವು ಸಕಾಲದಲ್ಲಿ ಮಾಡಲು ಸಾಧ್ಯವಾಗುತ್ತಿಲ್ಲ. ನಗರದಲ್ಲಿ ಅಕ್ರಮ ಕಟ್ಟಡಗಳು ತಲೆ ಎತ್ತುತ್ತಿದ್ದರೂ, ಎಲ್ಲೆಂದರಲ್ಲಿ ರಸ್ತೆ ಅಗೆಯುತ್ತಿದ್ದರೂ ಕೇಳುವವರಿಲ್ಲದಂತಾಗಿದೆ. ಸಿಬ್ಬಂದಿ ಕೊರತೆಯನ್ನೇ ನೆಪವಾಗಿಸಿಕೊಂಡು ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ.

ನಗರಸಭೆಯಲ್ಲಿ 225 ಪೌರಕಾರ್ಮಿಕರು ಇರಬೇಕಿತ್ತು. ಆ ಪೈಕಿ 83 ಮಂದಿ ಇದ್ದಾರೆ. ಉಳಿದ ಹುದ್ದೆಗಳು ಖಾಲಿ ಇವೆ. ಕೆಲ ವಾರ್ಡ್‌ಗಳನ್ನು ಟೆಂಡರ್‌ ಮೂಲಕ ನೀಡಲಾಗಿದೆ. ಆದರೂ, ಹಲವು ಸಲ ಸಾಮಾನ್ಯ ಸಭೆಯಲ್ಲಿ ಕಸ ವಿಲೇವಾರಿ ಸಮಸ್ಯೆ ಪ್ರಸ್ತಾಪ ಆದ್ದದ್ದು ಇದೆ.

ಉದ್ದಿಮೆಗಳ ಪರವಾನಗಿ, ಪ್ಲಾಸ್ಟಿಕ್‌ ನಿಷೇಧ, ಕಾಮಗಾರಿಗಳ ಪರಿಶೀಲನೆ, ನಗರವನ್ನು ಅಂದಗೆಡಿಸುವ ಬ್ಯಾನರ್‌, ಪೋಸ್ಟರ್‌ಗಳ ಹಾವಳಿಯನ್ನು ತಡೆ ಗಟ್ಟುವಲ್ಲಿ ನಗರಸಭೆಯು ವಿಫಲವಾಗಿದೆ.

ಖಾಲಿ ಇರುವ ಹುದ್ದೆಗಳ ನೇಮಕ ಮಾಡಬೇಕು ಎಂದು ನಗರಸಭೆ ಆಯುಕ್ತರು ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಆದರೆ, ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇರುವ ಸಿಬ್ಬಂದಿಯಿಂದಲೇ ಕೆಲಸ ಮಾಡಿಸಬೇಕಾದ ಅನಿವಾರ್ಯತೆ ಇದೆ.
ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದಾಗಿ ತೆರಿಗೆ ಪಾವತಿಸಿಯೂ ನಗರಸಭೆಯಿಂದ ಸೌಲಭ್ಯ ಪಡೆಯಲು ಮಂಡ್ಯದ ಜನತೆಗೆ ಸಾಧ್ಯವಾಗುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.