ಕೊಪ್ಪ: ‘ನಾನು ಯಾರಿಂದಲೂ ರಾಜಕೀಯ ಪಾಠ ಕಲಿಯಬೇಕಾದ ಅವಶ್ಯಕತೆ ಇಲ್ಲ. ನಾನು ಯಾರಿಗೂ ತೊಂದರೆ ಕೊಟ್ಟಿಲ್ಲ’ ಎಂದು ಜೆಡಿಎಸ್ ವರಿಷ್ಠರಿಗೆ ಶಾಸಕ ಎನ್.ಚಲುವ ರಾಯಸ್ವಾಮಿ ತಿರುಗೇಟು ನೀಡಿದರು.
ಕೊಪ್ಪದ ಕಾರ್ಯಕ್ರಮವೊಂದರಲ್ಲಿ ಭಾನುವಾರ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಜಿಲ್ಲೆಯ ರಾಜಕಾರಣವನ್ನು ಹೈಜಾಕ್ ಮಾಡಲು ಮುಂದಾಗಿದ್ದಾರೆ. ಜಿಲ್ಲೆಯ ಜನ ದಡ್ಡರಲ್ಲ, ಪ್ರಜ್ಞಾವಂತರಿದ್ದಾರೆ. ಚುನಾವಣೆ ವೇಳೆಗೆ ಎಲ್ಲರ ಬಣ್ಣ ಬಯಲಾಗಲಿದೆ’ ಎಂದು ಹೇಳಿದರು.
‘ನನ್ನ 25 ವರ್ಷಗಳ ರಾಜಕೀಯ ಜೀವನದಲ್ಲಿ ಒಂದು ಕಪ್ಪು ಚುಕ್ಕೆ ಇಲ್ಲ. ನನ್ನ ವ್ಯಕ್ತಿತ್ವ, ನಡವಳಿಕೆ, ಸ್ವಭಾವ ಹಾಗೂ ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳು ಏನು? ಎಂಬು ದನ್ನು ಜಿಲ್ಲೆಯ ಜನರು ಅರಿತಿ ದ್ದಾರೆ. ಜಿಲ್ಲೆ ಯಲ್ಲಿ ಪಕ್ಷವನ್ನು ಸಂಘಟಿಸಲು ಅವಿರತವಾಗಿ ದುಡಿದಿದ್ದೇನೆ.
ಅದರ ಅರಿವಿಲ್ಲದೆ ಮಾತ ನಾಡುವವರಿಗೆ ಇತಿಹಾಸ ತಿಳಿಯದು. ನನಗೆ ಗ್ರಾಮೀಣ ಪ್ರದೇಶದಲ್ಲಿರುವ ಪಂಚೆ ಮತ್ತು ಟವಲ್ ಹಾಕಿಕೊಂಡಿರುವ ಸಾಮಾನ್ಯ ಜನರೇ ಶಕ್ತಿ. ಅವರ ಜತೆಯಲ್ಲೆ ಇದ್ದುಕೊಂಡು ನಾನು ಹೋರಾಟ ಮಾಡುತ್ತೇನೆ. ಅವರೇ ನನಗೆ ಶ್ರೀರಕ್ಷೆ. 2018 ಚುನಾವಣೆಯಲ್ಲಿ ಜನರೇ ಫಲಿತಾಂಶ ನೀಡಲಿದ್ದಾರೆ’ ಎಂದರು.
‘ಕುಮಾರಸ್ವಾಮಿ ಹೇಳಿಕೆಗಳನ್ನು ಗಮನಿಸುತ್ತಿದ್ದೇವೆ. ನಮಗೇನು ಹೊಟ್ಟೆ ಉರಿಯಿಲ್ಲ. ಒಬ್ಬರು ಮಾತ್ರ ಮುಖ್ಯ ಮಂತ್ರಿಯಾಗಲು ಸಾಧ್ಯ. ಮುಂದಿನ ಮುಖ್ಯಮಂತ್ರಿ ಯಾರಾಗ ಬೇಕು ಎಂಬು ದನ್ನು ರಾಜ್ಯದ ಜನತೆ ತಿರ್ಮಾನಿಸ ಲಿದ್ದಾರೆ.ಹಗಲುಗನಸು ಕಾಣುವ ಪ್ರವೃತ್ತಿಯನ್ನು ಬಿಡಬೇಕು’ ಎಂದು ಜೆಡಿಎಸ್ ನಾಯಕರಿಗೆ ಕುಟುಕಿದರು.
‘ಜಿಲ್ಲೆಯಲ್ಲಿ ನಮ್ಮ ವಿರುದ್ಧ ಕುಮಾರಸ್ವಾಮಿ ಒಂದು ದಂಡನ್ನು ಕಟ್ಟಿ ಕಳುಹಿಸಿದ್ದಾರೆ. ಆ ದಂಡಿಗೆ ನಾವು ಹೆದರುವುದಿಲ್ಲ. ಗ್ರಾಮಾಂತರ ಪ್ರದೇಶದಲ್ಲಿರುವ ಜನರೇ ನಮ್ಮ ದಂಡು. ಅವರ ನಡುವೆ ನಾನು ಸದಾ ಇರುತ್ತೇನೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.