ಪಾಂಡವಪುರ: ಬರಗಾಲದಲ್ಲಿ ಜಾನು ವಾರುಗಳಿಗೆ ಸಂಗ್ರಹಿಸಿರುವ ಸುಮಾರು 100ಟನ್ ಮೇವನ್ನು ಏ.25ರಿಂದ ರೈತರಿಗೆ ವಿತರಿಸಲು ಕ್ರಮವಹಿಸಿ ಎಂದು ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ‘ತ್ರೈಮಾಸಿಕ ಕರ್ನಾಟಕ ಪ್ರಗತಿ ಪರಿಶೀಲನೆ ಸಭೆ’ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಷ್ಟ್ರೀಕೃತ ಬ್ಯಾಂಕ್ಗಳು ರೈತರಿಗೆ ಸಬ್ಸಿಡಿ ಸಾಲವನ್ನು ನೀಡದೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಅಲ್ಲದೆ, ಗ್ರಾಮೀಣ ಪ್ರದೇಶದಲ್ಲಿನ ರೈತರ ಹಾಲಿನ ಸರಬರಾಜು ಹಣ, ಸಾಮಾಜಿಕ ಭದ್ರತೆ ಯೋಜನೆ ಹಣವನ್ನು ಕೃಷಿ ಸಾಲಕ್ಕೆ ಮರುಪಾವತಿ ಮಾಡಿಕೊಳ್ಳುತ್ತಿದ್ದಾರೆ. ರೈತರಿಗೆ ಹೊಸ ಸಾಲ ನೀಡುತ್ತಿಲ್ಲ. ಈ ಸಂಬಂಧ ಬ್ಯಾಂಕ್ ಅಧಿಕಾರಿಗಳ ಸಭೆ ನಡೆಸಿ ಎಂದು ತಾ.ಪಂ.ಇಒ ಮಂಜುನಾ ಥಸ್ವಾಮಿ ಅವರಿಗೆ ಸೂಚಿಸಿದರು.
ತಾಲ್ಲೂಕಿನ ಡಾ.ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ ಮಂಜೂರಾ ಗಿದ್ದು, ನೂತನ ಕಟ್ಟಡ ನಿರ್ಮಾಣಕ್ಕೆ 10 ಎಕರೆ ಸರ್ಕಾರಿ ಜಾಗವನ್ನು ಮಂಜೂರು ಮಾಡಿಕೊಡಬೇಕು ಎಂದು ತಹಶೀಲ್ದಾರ್ ಡಿ.ಹನುಮಂತರಾಯಪ್ಪ ಅವರಿಗೆ ಸೂಚಿಸಿದರು. 2016–17ನೇ ಸಾಲಿನಲ್ಲಿ 23 ಅಂಬೇಡ್ಕರ್ ಭವನ ಮತ್ತು 4 ಬಾಬು ಜಗಜೀವನರಾಮ್ ಭವನಗಳು ಮಂಜೂರಾಗಿವೆ. ಇದರಲ್ಲಿ 14 ಅಂಬೇಡ್ಕರ್ ಭವನ ಮತ್ತು 2 ಜಗಜೀವನರಾಮ್ ಭವನಕ್ಕೆ ನಿವೇಶನ ದೊರೆತಿದೆ. ಉಳಿದವುಗಳಿಗೆ ನಿವೇಶನದ ಅಗತ್ಯವಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯ ನಿರ್ದೇಶಕ ರವಿಶಂಕರ್ ತಿಳಿಸಿದರು.
ಎಸ್ಸಿಪಿ ಮತ್ತು ಎಸ್ಟಿಪಿ ಯೋಜನೆಯಡಿ ದಲಿತ ಕಾಲೊನಿಗಳಿಗೆ ಸೌಲಭ್ಯ ಒದಗಿಸಲು ಸಾಕಷ್ಟು ಹಣ ಮಂಜೂರಾತಿ ಮಾಡಿಸಲಾಗಿದೆ. ಈಗ ಮತ್ತಷ್ಟು ಹಣವನ್ನು ಮಂಜೂರಾತಿ ಮಾಡಿಸಿಕೊಡಲಾಗುವುದು. ನಿಗದಿತ ವೇಳೆಯಲ್ಲಿ ಕಾಮಗಾರಿಗಳನ್ನು ಪೂರ್ಣ ಗೊಳಿಸಿ ಎಂದು ಎಂಜಿನಿಯರ್ಗಳಿಗೆ ಸೂಚಿಸಿದರು.
ಸಾರ್ವಜನಿಕರಲ್ಲಿ ಆರೋಗ್ಯ ಜಾಗೃತಿ ಮೂಡಿಸಬೇಕು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಎಂ.ಎನ್.ಆಶಾಲತಾ ಅವರಿಗೆ ಸೂಚಿಸಿದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ರಾಧಮ್ಮ ಕೆಂಪೇಗೌಡ, ಉಪಾಧ್ಯಕ್ಷೆ ಲಕ್ಷ್ಮಮ್ಮ ರಂಗಸ್ವಾಮಿ, ಜಿ.ಪಂ. ಸದಸ್ಯ ರಾದ ಎಚ್.ತ್ಯಾಗರಾಜು, ಸಿ.ಅಶೋಕ, ತಿಮ್ಮೇಗೌಡ, ಶಾಂತಲಾ ರಾಮಕೃಷ್ಣ, ಅನಸೂಯ ದೇವರಾಜು, ತಹಶೀಲ್ದಾರ್ ಡಿ.ಹನುಮಂತರಾಯಪ್ಪ, ತಾ.ಪಂ.ಇಒ ಮಂಜುನಾಥಸ್ವಾಮಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.