ಮಂಡ್ಯ: ಕಾವೇರಿ ವಿಚಾರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಿಂದ ಕರ್ನಾಟಕಕ್ಕೆ ಅನ್ಯಾಯ ಆಗಿದೆ. ಅದು ನಿರಂತರವಾಗಿ ಆಗುತ್ತಿರುವುದು ದುರಂತ ಎಂದು ಜೆಡಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ತ್ಯಾಗಿ ಬೇಸರ ವ್ಯಕ್ತಪಡಿಸಿದರು.
ನಗರದ ಮಾದೇಗೌಡ ಸಭಾಂಗಣ ದಲ್ಲಿ ಜನತಾದಳ (ಸಂಯುಕ್ತ)ದಿಂದ ಭಾನುವಾರ ನಡೆದ ಜಿಲ್ಲಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದ ಜನತೆಗೆ ನೀರಿನ ವಿಷಯ ದಲ್ಲಿ ಅನ್ಯಾಯ ಆಗುತ್ತಿದೆ. ಸರಿಪಡಿಸುವ ಕೆಲಸಕ್ಕೆ ಬಿಜೆಪಿ, ಕಾಂಗ್ರೆಸ್ ಹೋಗಲಿಲ್ಲ. ಇದರಿಂದ ರೈತರು ಕಂಗಾಲಾಗಿದ್ದಾರೆ. ರೈತರ ಬಗ್ಗೆ ಕಾಳಜಿ ವಹಿಸದ ಸರ್ಕಾರಗಳನ್ನು ಅಧಿಕಾರದಿಂದ ದೂರ ಇಡುವ ಕೆಲಸವನ್ನು ಮತದಾರರು ಮಾಡಬೇಕು ಎಂದರು.
ಪ್ರಾದೇಶಿಕ ಪಕ್ಷಗಳು ಒಂದಾಗಬೇಕು. ಆ ಮೂಲಕ ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಬೇಕು. ಉತ್ತಮ ಸಮಾಜ ನಿರ್ಮಾಣದ ದೃಷ್ಟಿಯಿಂದ ಒಗ್ಗೂಡು ವುದು ಅನಿವಾರ್ಯವಾಗಿದೆ ಎಂದು ಹೇಳಿದರು.
ಬಿಹಾರದಲ್ಲಿ ನಿತೀಶ್ಕುಮಾರ್ ನೇತೃತ್ವದ ಸರ್ಕಾರ ಜಾರಿಗೆ ಬಂದಿತು. ಕಾಂಗ್ರೆಸ್ಗೆ ಜನರು ಮಣೆ ಹಾಕಲಿಲ್ಲ. ಬಿಜೆಪಿಯನ್ನೂ ಒಪ್ಪಿಕೊಳ್ಳ ಲಿಲ್ಲ. ಆದರೆ, ದೇಶದಲ್ಲಿ ಬಿಜೆಪಿ ಇಷ್ಟ ಪಡುತ್ತಿದ್ದಾರೆ. ಜನರಿಗೆ ಸ್ಪಂದಿಸಿದರೆ ಪ್ರಾದೇಶಿಕ ಪಕ್ಷ ಬೆಂಬಲಿಸುತ್ತಾರೆ ಎಂದು ಹೇಳಿದರು.
ಜೆಡಿಯು ಮುಖಂಡ ಮಹಿಮಾ ಜೆ. ಪಟೇಲ್ ಮಾತನಾಡಿ, ರಾಜ್ಯ ಹಾಗೂ ದೇಶಕ್ಕೆ ದೊಡ್ಡ ಕಂಟಕವಿದೆ. ರಾಜಕಾರಣದಲ್ಲಿ ಸ್ಪಷ್ಟತೆ ಇಲ್ಲ. ಜನರಿಗೆ ಏನು ಬೇಕು ಎಂಬ ಅರಿವು ನಮ್ಮನ್ನಾಳು ತ್ತಿರುವ ಪಕ್ಷಗಳಿಗೆ ಇಲ್ಲ. ಅಧಿಕಾರಕ್ಕೆ ತರಲು ವಾಮಮಾರ್ಗ ಅನುಸರಿಸಿ ಆ ಮೂಲಕ ಹಣ ಗಳಿಸುವ ಕೆಲಸದಲ್ಲಿ ತೊಡಗಿಕೊಂಡಿವೆ ಎಂದು ಟೀಕಿಸಿದರು.
ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಎಂ.ಪಿ.ನಾಡಗೌಡ ಮಾತನಾಡಿ, ನಿಷ್ಠಾವಂತರು ರಾಜಕೀಯಕ್ಕೆ ಬರಬೇಕು ಕಾಂಗ್ರೆಸ್, ಬಿಜೆಪಿ ಮೇಲೆ ಜನರಿಗೆ ನಂಬಿಕೆ ಹೋಗುತ್ತಿದೆ. ಜನಸಾಮನ್ಯರ ಸಮಸ್ಯೆಗೆ ಸ್ಪಂದಿಸುವ ಪಕ್ಷಗಳಿಗೆ ಮತದಾರರು ಮಣೆ ಹಾಕಲಿದ್ದಾರೆ ಎಂದು ಹೇಳಿದರು.
ರಾಜ್ಯ ಹಾಗೂ ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಮಾಡಬೇಕು. ಮದ್ಯ ನಿಷೇಧ, ರೈತರ ಸಮಸ್ಯೆ ಬಗೆಹರಿಸಲು ಜೆಡಿಯು ಪಕ್ಷ ಹೆಚ್ಚು ಒತ್ತು ನೀಡಲಿದೆ ಎಂದರು.
ಲೇಖಕಿ ಮಂಜುಳಾ ಉಮೇಶ್ ಹಾಗೂ ಅವರ ಬೆಂಬಲಿಗರು ಜೆಡಿಯು ಪಕ್ಷಕ್ಕೆ ಸೇರ್ಪಡೆಗೊಂಡರು.
ಪಕ್ಷದ ಅಲ್ಪಸಂಖ್ಯಾತರ ರಾಜ್ಯ ಘಟಕದ ಅಧ್ಯಕ್ಷ ಸಯ್ಯದ್ ಮಹಬೂಬ್, ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಸ್. ಗೌಡ, ಮುಖಂಡರಾದ ರಮೇಶ್ಗೌಡ, ಲಿಂಗರಾಜು, ವರದರಾಜು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.