ಶ್ರೀರಂಗಪಟ್ಟಣ: ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ, ಪಡಿತರ ವಿತರಕರ ಸಂಘದ ರಾಷ್ಟ್ರೀಯ ಉಪಾಧ್ಯಕ್ಷ ಪ್ರಹ್ಲಾದ ಮೋದಿ ಕುಟುಂಬ ಸದಸ್ಯರ ಜತೆಯಲ್ಲಿ ಬುಧವಾರ ಇಲ್ಲಿ ಶ್ರೀರಂಗನಾಥಸ್ವಾಮಿಯ ದರ್ಶನ ಪಡೆದರು.ಬೆಳಿಗ್ಗೆ 10ರ ಸುಮಾರಿಗೆ ಪತ್ನಿ ಭಗವತಿ ಮತ್ತಿತರರ ಜತೆ ಪಟ್ಟಣಕ್ಕೆ ಬಂದ ಅವರು ಶ್ರೀರಂಗನಾಥಸ್ವಾಮಿ, ರಂಗನಾಯಕಿ ಅಮ್ಮನವರು, ವೆಂಕಟೇಶ್ವರ ಮತ್ತು ಹನುಮಾನ್ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ನಡೆಯಲು ಅಸಹಾಯಕರಾಗಿದ್ದ ಪ್ರಹ್ಲಾದ ಅವರ ಪತ್ನಿ ಭಗವತಿ ಅವರನ್ನು ವ್ಹೀಲ್ಚೇರ್ನಲ್ಲಿ ದೇವಾಲಯದ ಒಳಕ್ಕೆ ಕರೆದೊಯ್ಯಲಾಯಿತು.
ಅವರು ಸುಮಾರು 30 ನಿಮಿಷಗಳ ಕಾಲ ದೇವಾಲಯದಲ್ಲಿ ಇದ್ದರು. ಪಡಿತರ ವಿತರಕರ ಸಂಘದ ರಾಜ್ಯ ಘಟಕ ಅಧ್ಯಕ್ಷ ಟಿ.ಕೃಷ್ಣಪ್ಪ, ತಾಲ್ಲೂಕು ಘಟಕ ಅಧ್ಯಕ್ಷ ದೇವರಾಜು, ಬಿಜೆಪಿ ಸ್ಥಳೀಯ ಮುಖಂಡರಾದ ಜಿ.ಉಮಾಶಂಕರ್, ಕೆ.ಆರ್.ಸೊಸೈಟಿ ಉಪಾಧ್ಯಕ್ಷ ಉಮೇಶಕುಮಾರ್, ಪುಟ್ಟರಾಮು ಇದ್ದರು.
ಮೋದಿ ಅವರ ತಂಡ ಸಮೀಪದ ಚಂದ್ರವನ ಆಶ್ರಮಕ್ಕೆ ಭೇಟಿ ನೀಡಿತ್ತು. ಬೇಬಿ ಮಠದ ಪೀಠಾಧ್ಯಕ್ಷ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಜತೆ ಕೆಲಕಾಲ ಚರ್ಚಿಸಿದರು.ಆಶ್ರಮದಲ್ಲಿ ಕಾಫಿ ಸೇವಿಸಿದ ತಂಡ ನಂತರ ಮೈಸೂರು ಕಡೆಗೆ ತೆರಳಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.