ಕೆ.ಆರ್.ಪೇಟೆ: ಬಹುಮಹಡಿ ಕಟ್ಟಡಗಳು, ಕೈಗಾರಿಕೆಗಳು, ಸಿನಿಮಾ ಮಂದಿರಗಳು, ಪೆಟ್ರೋಲ್ ಬಂಕ್ಗಳು, ರೈತರ ಜಮೀನುಗಳಲ್ಲಿ ಬೆಳೆದಿರುವ ಬೆಳೆಗಳಿಗೆ ಬೆಂಕಿ ಬಿದ್ದ ಸಂದರ್ಭಗಳಲ್ಲಿ ಶಮನ ಮಾಡುವ ಪ್ರಾತ್ಯಕ್ಷಿಕೆಯನ್ನು ಅಗ್ನಿಶಾಮಕ ದಳ ಸಿಬ್ಬಂದಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಹಾಗೂ ಮಹಿಳಾ ಕಾಲೇಜಿನಲ್ಲಿ ಈಚೆಗೆ ಪ್ರದರ್ಶಿಸಿದರು.
ಅಗ್ನಿಶಾಮಕ ದಳದ ಸಹಾಯಕ ಠಾಣಾಧಿಕಾರಿ ಶ್ರೀನಿವಾಸರಾವ್ ಮಹಾಡಿಕ್ ಮಾತನಾಡಿ, ಜಿಲ್ಲೆಯಲ್ಲಿ ಅತಿ ಹೆಚ್ಚು ಬೆಂಕಿ ಅನಾಹುತ ನಡೆದಿರುವುದು ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ. ನಾಲ್ಕು ತಿಂಗಳುಗಳಲ್ಲಿ 84 ಪ್ರಕರಣಗಳು ದಾಖಲಾಗಿವೆ. ಆದ್ದರಿಂದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಲ್ಲಿ ತಿಳಿವಳಿಕೆ ಅವಶ್ಯ ಎಂದು ಅವರು ಹೇಳಿದರು.
ಬೆಂಕಿ ಅನಾಹುತಗಳು ನಡೆದಾಗ ತಕ್ಷಣ ಕರೆ ಮಾಡಿ ಅಗ್ನಿಶಾಮಕ ದಳದವರಿಗೆ ತಿಳಿಸಬೇಕು. ಮುಂಜಾಗ್ರತಾ ಕ್ರಮಗಳನ್ನು ವಹಿಸುವುದು ಸೂಕ್ತ ಎಂದು ಅವರು ಹೇಳಿದರು.
ಹೆಚ್ಚು ಗಾಳಿ–ಬೆಳಕು ಮನೆಗೆ ಬರುವಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ನಾಗರಿಕರು ಮತ್ತು ಮಾಲೀಕರ ಕರ್ತವ್ಯ. ವಿದ್ಯುತ್ ಅಡಚಣೆಯಿಂದ, ಗ್ಯಾಸ್ ಅಜಾಗರೂಕತೆಯಿಂದ ಬೆಂಕಿ ಅವಘಡ ಸಂಭವಿಸಿದಾಗ ಯಾವುದೇ ರೀತಿಯ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಬಾರದು ಎಂದು ಸಲಹೆ ನೀಡಿದರು. ಅಗ್ನಿಶಾಮಕ ಸಿಬ್ಬಂದಿಯಾದ ಸಚಿನ್ ಶೆಟ್ಟಿ, ಎಸ್.ಎಂ. ಪ್ರಮೋದ್, ಅವಿನಾಶ್, ಕಾಲೇಜಿನ ಪ್ರಾಧ್ಯಾಪಕರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.