ಮೇಲುಕೋಟೆ: ಹೊಸ ವರ್ಷದ ಮೊದಲ ದಿನವಾದ ಸೋಮವಾರ ಚೆಲುವನಾರಾಯಣಸ್ವಾಮಿ ದರ್ಶನಕ್ಕೆ ಸಾವಿರಾರು ಭಕ್ತರು ಬಂದಿದ್ದರು. ಇಲ್ಲಿಯ ಎಲ್ಲ ದೇವಾಲಯಗಳು, ಕಲ್ಯಾಣಿಗಳ ಬಳಿ ಜನಸಂದಣಿ ಕಂಡು ಬಂತು. ಚೆಲುವನಾರಾಯಣ ಸ್ವಾಮಿಯ ದರ್ಶನಕ್ಕೆ ಸುಡು ಬಿಸಿಲನ್ನೂ ಲೆಕ್ಕಿಸದೇ ಸರತಿಸಾಲಿನಲ್ಲಿ ಗಂಟೆಗಟ್ಟಲೆ ಕಾದು ನಿಂತರು.
ನಿರೀಕ್ಷೆಗೂ ಮೀರಿ ಭಕ್ತರು ಬಂದಿದ್ದರಿಂದ ಬೆರಳೆಣಿಕೆಯಷ್ಟಿದ್ದ ಮೇಲುಕೋಟೆ ಠಾಣೆಯ ಪೊಲೀಸರು ವಾಹನ ದಟ್ಟಣೆ ನಿಯಂತ್ರಿಸಲು ಪರದಾಡಿದರು. ಮಧ್ಯಾಹ್ನವಂತೂ ದೇವಾಲಯದ ಬಳಿ ದ್ವಿಚಕ್ರವಾಹಗಳ ದಟ್ಟಣೆ ಉಂಟಾಗಿ ಕೆಲಕಾಲ ಗೊಂದಲದ ವಾತಾವರಣ ಉಂಟಾಗಿತ್ತು.
ಭಕ್ತರು ಮೇಲುಕೋಟೆಯ ಕಲ್ಯಾಣಿಯಲ್ಲಿ ಪೂಜೆ ಸಲ್ಲಿಸಿ ಯೋಗನರಸಿಂಹಸ್ವಾಮಿ ಮತ್ತು ಚೆಲುವ ನಾರಾಯಣಸ್ವಾಮಿ ದೇವಾಲಯಕ್ಕೆ ಬಂದು ಗೋವಿಂದ ಗೋವಿಂದ ಎಂದು ಘೋಷ ಮೊಳಗಿಸುತ್ತ ದೇವರದರ್ಶನ ಪಡೆದರು. ದೇವಾಲಯದ ಬಳಿಗೆ ಬೈಕ್ ಸವಾರರಿಗೆ ಮಾತ್ರ ಅವಕಾಶ ನೀಡಿ, ಇತರ ವಾಹನಗಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು. ಮೇಲುಕೋಟೆ ಎಸ್.ಐ ಮೋಹನ್, ಎಎಸ್ಐ ಮಲ್ಲಪ್ಪ ನೇತೃತ್ವದಲ್ಲಿ ಪೊಲೀಸ್ ಭದ್ರತೆ ಮಾಡಲಾಗಿತ್ತು. ದೇವಾಲಯದ ಹಿರಿಯ ಗುಮಾಸ್ತ ಶ್ರೀರಂಗರಾಜನ್ , ಭಗವಾನ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.