ಭಾರತೀನಗರ (ಮಂಡ್ಯ ಜಿಲ್ಲೆ): ಪ್ರಸಿದ್ಧ ಪಕ್ಷಿಧಾಮ ಕೊಕ್ಕರೆ ಬೆಳ್ಳೂರಿನಲ್ಲಿ ಕೊಕ್ಕರೆಗಳ ಸಾವಿನ ಸರಣಿ ಮುಂದುವರಿದಿದ್ದು, ಸೋಮವಾರ 2 ಕೊಕ್ಕರೆಗಳು ಸಾವನ್ನಪ್ಪಿವೆ.
ಇದುವರೆಗಿನ ಕೊಕ್ಕರೆಗಳ ಸಾವಿನ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ಈಚೆಗೆ ಸೂಳೆಕೆರೆ ಹಾಗೂ ಮಾದರಹಳ್ಳಿ ಕೆರೆಗಳಲ್ಲಿ ಕೊಕ್ಕರೆಗಳು ಸತ್ತಿರುವ ಘಟನೆಯಿಂದ ಜನರು ಭಯಭೀತರಾಗಿದ್ದಾರೆ. ವಿವಿಧೆಡೆ ಹಕ್ಕಿ ಜ್ವರ ಹರಡುತ್ತಿರುವ ಹಿನ್ನೆಲೆಯಲ್ಲಿ ಕೊಕ್ಕರೆಗಳ ಸಾವು ಜನರಲ್ಲಿ ಆತಂಕ ಮೂಡಿಸಿದೆ.
ಈಗಾಗಲೇ ಸತ್ತಿರುವ ಕೊಕ್ಕರೆಗಳು ಹಕ್ಕಿಜ್ವರದಿಂದಲ್ಲ ಎಂದು ಪ್ರಯೋಗಾಲಯದ ವರದಿ ಆಧಾರದ ಮೇಲೆ ಅಧಿಕಾರಿಗಳು ಹೇಳುತ್ತಿದ್ದಾರೆ. ಪೆಲಿಕಾನ್ಗಳಲ್ಲದೇ ಪೇಂಟೆಡ್ ಸ್ಟಾರ್ಕ್ ಗಳು (ಬಣ್ಣದ ಕೊಕ್ಕರೆ) ಈಗಾಗಲೇ ಗ್ರಾಮಕ್ಕೆ ಬಂದಿವೆ. ಇವಕ್ಕೂ ಕೂಡ ತೊಂದರೆಯಾಗಬಹುದು ಎಂದು ಗ್ರಾಮದ ಯುವ ಮುಖಂಡ ಸ್ವಾಮಿ ಆತಂಕ ವ್ಯಕ್ತಪಡಿಸುತ್ತಾರೆ.
ಸತ್ತಿರುವ ಕೊಕ್ಕರೆಗಳ ಕಳೇಬರವನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗುವುದು. ಮತ್ತೊಮ್ಮೆ ಕೊಕ್ಕರೆಗಳ ವಾಸಸ್ಥಳಗಳಿಗೆ ಆ್ಯಂಟಿವೈರಲ್ ಔಷಧಿ ಸಿಂಪಡಿಸುವಂತೆ ಅರಣ್ಯ ಅಧಿಕಾರಿಗಳನ್ನು ಕೋರಲಾಗುವುದು ಎಂದು ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಲ್.ಹನುಮೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.
‘ಅಧಿಕಾರಿಗಳು ಸ್ಥಳದಲ್ಲಿ ವಾಸ್ತವ್ಯ ಮಾಡಿ, ಕೊಕ್ಕರೆಗಳ ಆರೋಗ್ಯ ಸ್ಥಿತಿಗತಿ ಗಮನಿಸಬೇಕು. ಗ್ರಾಮದ ಜನರ ಆತಂಕ ನಿವಾರಣೆ ಮಾಡಬೇಕು. ಕೊಕ್ಕರೆಗಳ ಸಾವು ತಡೆಗಟ್ಟಬೇಕು’ ಎಂದು ಹೆಜ್ಜಾರ್ಲೆ ಬಳಗದ ಅಧ್ಯಕ್ಷ ಬಿ.ಲಿಂಗೇಗೌಡ ಆಗ್ರಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.