ADVERTISEMENT

‘ಜೆಡಿಎಸ್‌ ಗೆಲ್ಲಿಸುವ ಹೊಣೆ ಜನರದು’

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2018, 7:08 IST
Last Updated 10 ಫೆಬ್ರುವರಿ 2018, 7:08 IST

ಪಾಂಡವಪುರ:‘ರೈತರು ಮತ್ತು ರಾಜ್ಯದ ಹಿತದೃಷ್ಟಿಯಿಂದ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ತರುವ ಹೊಣೆಗಾರಿಕೆ ಎಲ್ಲರ ಮೇಲಿದೆ’ ರಾಜ್ಯ ಜೆಡಿಎಸ್ ಅಧ್ಯಕ್ಷ ಎಚ್.ಡಿ.ಕುಮಾಸ್ವಾಮಿ ಶುಕ್ರವಾರ ಪ್ರತಿಪಾದಿಸಿದರು. ಪಟ್ಟಣದ ಪಾಂಡವ ಕ್ರೀಡಾಂಗಣಲ್ಲಿ ಶುಕ್ರವಾರ ಸಂಜೆ ‘ಕುಮಾರಪರ್ವ’ ಕಾರ್ಯಕ್ರಮವನ್ನು ಉದ್ಫಾಟಿಸಿ ಅವರು ಮಾತನಾಡಿದರು.

ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷವನ್ನು ಬೇಡುವ ಬದಲು ಜೆಡಿಎಸ್‌ಗೆ ಪೂರ್ಣ ಬಹುಮತ ನೀಡಬೇಕು. ರಾಷ್ಟ್ರೀಕೃತ, ಸಹಕಾರ ಸೇರಿದಂತೆ ಎಲ್ಲ ರೀತಿ ಕೃಷಿ ಸಾಲಮನ್ನಾ ಭರವಸೆ ಇದೆ. ಇದು ನನ್ನ ಮೇಲಿನ ಸವಾಲು ಹೌದು’ ಎಂದರು.

ಮೇಲುಕೋಟೆ ಕ್ಷೇತ್ರದಲ್ಲಿ ಸಿ.ಎಸ್.ಪುಟ್ಟರಾಜು ಶಾಸಕರಾಗಿದ್ದಾಗ ನಡೆದ ಅಭಿವೃದ್ಧಿ ಕೆಲಸಗಳು ಈಗಿನ ಶಾಸಕರ ಅವಧಿಯಲ್ಲಿ ಏಕೆ ಆಗುತ್ತಿಲ್ಲ ಎಂಬುದನ್ನು ಜನತೆ ಅರಿಯಬೇಕು ಎಂದು ಅವರು ಪರೋಕ್ಷವಾಗಿ ಕೆ.ಎಸ್‌.ಪುಟ್ಟಣ್ಣಯ್ಯ ಅವರನ್ನು ಟೀಕಿಸಿದರು.

ADVERTISEMENT

ಸಿ.ಎಸ್. ಪುಟ್ಟರಾಜುಗೆ ಜನರ ಮೇಲೆ ಕಳಕಳಿ ಇದೆ. ನಾನು ಇದನ್ನು ಹತ್ತಿರದಿಂದ ಬಲ್ಲೆ. ಅವರನ್ನು ಗೆಲ್ಲಿಸಿಕೊಡಿ’ ಎಂದು ಕೋರಿದರು. ಮುಖಂಡ ಎಚ್.ವಿಶ್ವನಾಥ್ ಅವರು, ‘ರೆಡ್ಡಿ ಗಣಿದಣಿಗಳ ವಿರುದ್ಧ 330 ಕಿ.ಮೀ ಕಾಲ್ನಡಿಗೆ ಜಾಥಾ ಮಾಡಿದ್ದ ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಮೇಲೆ ಭ್ರಷ್ಟಾಚಾರ ಹೊದ್ದುಮಲಗಿದ್ದಾರೆ’ ಎಂದು ಆರೋಪಿಸಿದರು. ಲೋಕಾಯುಕ್ತ ವ್ಯವಸ್ಥೆಗೆ ಬಲ ನೀಡುವ ಬದಲು ಎಸಿಬಿ ಜಾರಿಗೆ ತಂದು ಅದನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದಾರೆ ಎಂದು ಟೀಕಿಸಿದರು.

ಸಂಸದ ಸಿ.ಎಸ್‌.ಪುಟ್ಟರಾಜು ಅವರು, ‘ರೈತರ ಸರ್ಕಾರ ತರಲು ಎಚ್.ಡಿ. ದೇವೇಗೌಡರು ಪಣತೊಟ್ಟಿದ್ದಾರೆ. ಕುಮಾರಸ್ವಾಮಿ ಇಸ್ರೇಲ್‌ ಮಾದರಿ ರೈತ ಪರ ಸರ್ಕಾರವನ್ನು ತರಲು ನಿರ್ಧರಿಸಿದ್ದಾರೆ. ನನ್ನ ಆಯ್ಕೆಯಿಂದ ಕುಮಾರಸ್ವಾಮಿ ಅವರಿಗೆ ಬೆಂಬಲ ಸಿಕ್ಕಾಂತಾಗುತ್ತದೆ’ ಎಂದು ಮನವಿ ಮಾಡಿದರು. ಜೆಡಿಎಸ್‌ ಪಕ್ಷದ ವಿವಿಧ ಮುಖಂಡರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.