ADVERTISEMENT

ಇಲಿ–ಹೆಗ್ಗಣ ತಾಣ ಗಾಂಧಿನಗರ ಮಾರುಕಟ್ಟೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2015, 11:21 IST
Last Updated 27 ಮಾರ್ಚ್ 2015, 11:21 IST

ಮೈಸೂರು: ಮೂರೂವರೆ ದಶಕಗಳಿಗೂ ಹಳೆಯದಾದ ಗಾಂಧಿನಗರದ ತರಕಾರಿ ಮಾರುಕಟ್ಟೆ ಅಭಿವೃದ್ಧಿ ಕಾಣದೇ ಸೊರಗಿದೆ. ಮಾರುಕಟ್ಟೆಯಲ್ಲಿ ಛಾವಣಿ ಇಲ್ಲ. ಇಲ್ಲಿ ಇಲಿ–ಹೆಗ್ಗಣಗಳಿಗೆ ಬರವಿಲ್ಲ!

ಗಾಂಧಿನಗರ, ಅಣ್ಣಮ್ಮಕೇರಿ, ಮಹಮ್ಮದ್‌ ಸೇಟ್‌ ಬ್ಲಾಕ್‌, ವೀರನಗೆರೆ ನಿವಾಸಿಗಳು ಈ ಮಾರುಕಟ್ಟೆಯ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಗಾಂಧಿನಗರದಲ್ಲಿ ಸುಮಾರು 30 ಸಾವಿರ ಜನಸಂಖ್ಯೆ ಇದ್ದು, ಈ ಬಡಾವಣೆ ವ್ಯಾಪ್ತಿಯಲ್ಲಿ ಇರುವುದು ಇದೊಂದೇ ಮಾರುಕಟ್ಟೆ. ಸುಮಾರು ಎರಡು ವರ್ಷಗಳಿಂದ ಈ ಮಾರುಕಟ್ಟೆ ಸರಿಯಾದ ವ್ಯಾಪಾರ ಇಲ್ಲದೆ ಕುಂಟುತ್ತಾ ಸಾಗಿದೆ. ವ್ಯಾಪಾರವನ್ನೇ ನಂಬಿ ಬದುಕುತ್ತಿದ್ದ ಕುಟುಂಬಗಳು ಇದೀಗ ಬೀದಿಗೆ ಬೀಳುವ ಸ್ಥಿತಿ ತಲುಪಿವೆ.

ಸುಡುವ ಬಿಸಿಲು, ಮಳೆಯಿಂದ ರಕ್ಷಣೆ ಇಲ್ಲದೆ ವ್ಯಾಪಾರಿಗಳು ಪರಿತಪಿಸುತ್ತಿದ್ದಾರೆ. ಗೋಣಿಚೀಲ, ಪ್ಲಾಸ್ಟಿಕ್‌ ಚೀಲ ಕಟ್ಟಿಕೊಂಡು ದಿನ­ದೂಡು­ತ್ತಿ­ದ್ದಾರೆ. ಇರುವ ಪಾಳು ಗೋಡೆ­ಗಳು ಎಂದಾದರು ಬಿದ್ದು ಅನಾಹುತ ಸಂಭವಿಸುತ್ತದೆಂದು ವ್ಯಾಪಾರಿಗಳು ಆತಂಕಗೊಂಡಿದ್ದಾರೆ. ಮಾರುಕಟ್ಟೆ ಅಭಿವೃದ್ಧಿ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ.

ಜಿಲ್ಲಾ ಉಸ್ತುವಾರಿ ಸಚಿವರು ವಾರದ ಒಳಗೆ ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲಿಸಿ, ನೂತನ ಮಾರುಕಟ್ಟೆ ನಿರ್ಮಾಣಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ದಲಿತ ಮಹಾಸಭಾ ಅಧ್ಯಕ್ಷ ಎಸ್‌. ರಾಜೇಶ್‌ ಒತ್ತಾಯಿಸಿದ್ದಾರೆ.

ವಾರದೊಳಗೆ ಸ್ಥಳ ಪರಿಶೀಲಿಸದೇ ಇದ್ದಲ್ಲಿ ಅವರ ನಿವಾಸದ ಎದುರು ಧರಣಿ ನಡೆಸಲಾಗುವುದು ಎಂದು ದಲಿತ ಮಹಾಸಭಾ ಪದಾಧಿಕಾರಿಗಳಾದ ರಾಮಕೃಷ್ಣ, ಪುಟ್ಟಯ್ಯ, ಶ್ರೀನಿವಾಸ್‌, ಕಿರಣ್‌, ಜೋಶಿ, ಶಂಕರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.