ಎಚ್.ಡಿ. ಕೋಟೆ: ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹರಿಯ ಬಿಟ್ಟಾಗ ಉಂಟಾಗುತ್ತಿದ್ದ ಸಂಚಾರ ಸಮಸ್ಯೆಯನ್ನು ನೀಗಿಸುವ ನಿಟ್ಟಿನಲ್ಲಿ ಸದ್ಯದಲ್ಲೇ ಜಲಾಶಯದ ಮುಂಭಾಗ ಸೇತುವೆಯನ್ನು ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು. ತಾಲ್ಲೂಕಿನ ಕಬಿನಿ ಜಲಾಶಯಕ್ಕೆ ಗುರುವಾರ ಬಾಗಿನ ಅರ್ಪಿಸಿ ಅವರು ಮಾತನಾಡಿದರು.
ಕಳೆದೆರಡು ವರ್ಷಗಳಿಂದ ಜಲಾಶಯ ಭರ್ತಿಯಾಗದೆ ಇದ್ದುದ ರಿಂದ ಕುಡಿಯುವ ನೀರಿಗೆ ಮತ್ತು ಬೇಸಾಯಕ್ಕೆ ಸಮಸ್ಯೆ ಉಂಟಾಗಿತ್ತು. ರಾಜ್ಯದಲ್ಲಿ ಮುಂಗಾರು ಕೈಕೊಟ್ಟರೂ ಹಿಂಗಾರು ಉತ್ತಮವಾಗಿರುವುದರಿಂದ ಕೆರೆಕಟ್ಟೆಗಳು ತುಂಬಿವೆ. ಇದರಿಂದ ಸಂತಸವಾಗಿದೆ ಎಂದರು.
ಕಬಿನಿ ಜಲಾಶಯದ ಮುಂಭಾಗದ ಉದ್ಯಾನವನ್ನು ಸುಮಾರು ₹55 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು. ಇದರಿಂದ ಈ ಭಾಗದ ಪ್ರವಾಸೋದ್ಯಮ ಬೆಳೆಯಲು ಅನುಕೂಲವಾಗಲಿದೆ ಎಂದು ಹೇಳಿದರು.
ಕಬಿನಿ ಜಲಾಶಯದಿಂದ ಈ ಭಾಗದ ಅಚ್ಚುಕಟ್ಟು ರೈತರಿಗೆ ಬೇಸಿಗೆ ಬೆಳೆಗೆ ನೀರನ್ನು ಹರಿಸಲಾಗುವುದು ಎಂದ ಅವರು, ‘ಕಾವೇರಿ ನೀರು ನಿರ್ವಹಣಾ ಸಮಿತಿ ರಚನೆಗೆ ನನ್ನ ವಿರೋಧವಿದ್ದು, ಇದರಿಂದ ರಾಜ್ಯಕ್ಕೆ ಅನ್ಯಾಯವಾಗಲಿದೆ’ ಎಂದರು.
ಈ ಭಾಗದ ಜನರ ಬಹುದಿನಗಳ ಬೇಡಿಕೆಯಾದ ಸರಗೂರು ತಾಲ್ಲೂಕು ರಚನೆ ಪ್ರಕ್ರಿಯೆಗೆ ಜನವರಿಯಲ್ಲಿ ನಾನೇ ಚಾಲನೆ ನೀಡುತ್ತೇನೆ. ಸರಗೂರಿನ ಪ್ರಥಮದರ್ಜೆ ಕಾಲೇಜು ಕಟ್ಟಡ ನಿರ್ಮಾಣಕ್ಕೆ ನೀರಾವರಿ ಇಲಾಖೆಯ ನಾಲ್ಕು ಎಕರೆ ಜಾಗವನ್ನು ನೀಡಲಾಗಿದೆ ಎಂದು ಅವರು ತಿಳಿಸಿದರು.
ಸಚಿವರಾದ ಎಚ್. ಸಿ.ಮಹದೇವಪ್ಪ, ಎಂ.ಸಿ. ಮೋಹನಕುಮಾರಿ , ಸಂಸದ ಆರ್. ಧ್ರುವನಾರಾಯಣ್, ಶಾಸಕರಾದ ಎಂ.ಕೆ.ಸೋಮ ಶೇಖರ್, ಕಳಲೆ ಕೇಶವಮೂರ್ತಿ, ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನ, ರಾಜ್ಯ ಭೋವಿ ನಿಗಮದ ಅಧ್ಯಕ್ಷ ಜಿ.ವಿ. ಸೀತಾರಾಮ್, ಜಿಲ್ಲಾಧಿಕಾರಿ ರಂದೀಪ್, ಐಜಿ ವಿಫುಲ್ ಕುಮಾರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಯಿಮಾ ಸುಲ್ತಾನ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮಂಜುಳಾ ದೇವಣ್ಣ , ಉಪಾಧ್ಯಕ್ಷೆ ಮಂಜುಳಾ ಚಂದ್ರೇಗೌಡ, ಮುಖಂಡರಾದ ಎಸ್. ವಿ.ವೆಂಕಟೇಶ್, ಶ್ರೀಕೃಷ್ಣ ವೆಂಕಟಸ್ವಾಮಿ, ಎಂ.ಪಿ. ನಾಗರಾಜು, ಡಿ.ಸುಂದರದಾಸ್, ಎಸ್.ಆರ್.ಜಯಮಂಗಳ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.