ADVERTISEMENT

ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸುದರ್ಶನ್ ಬೈಕ್‌ ಚಾಲನೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2017, 7:26 IST
Last Updated 16 ಸೆಪ್ಟೆಂಬರ್ 2017, 7:26 IST

ಮೈಸೂರು: ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ದ್ವಿಚಕ್ರ ವಾಹನ ಚಾಲನೆ ಮಾಡುವ ಮೂಲಕ ಸುದರ್ಶನ್‌ ಜಾದೂಗಾರ್‌ ಅವರು ಸ್ವಚ್ಛ ಭಾರತದ ಕುರಿತು ನಗರ ದಲ್ಲಿ ಶುಕ್ರವಾರ ಅರಿವು ಮೂಡಿಸಿದರು. ಅರಮನೆ ಉತ್ತರ ದ್ವಾರದ ಕೋಟೆ ಆಂಜನೇಯಸ್ವಾಮಿ ದೇಗುಲದಿಂದ ಹೊರಟು, ಕೆ.ಆರ್‌.ವೃತ್ತ, ಸಯ್ಯಾಜಿರಾವ್‌ ರಸ್ತೆ, ಹೈವೆ ವೃತ್ತ, ಬನ್ನಿಮಂಟಪದ ಮೂಲಕ ಸಿದ್ಧಲಿಂಗಪುರ ತಲುಪಿದರು.

‘ಸ್ವಚ್ಛ ಭಾರತ’ದ ಪ್ರಾಮುಖ್ಯತೆ ಕುರಿತು ಮುದ್ರಿಸಿದ ಕರಪತ್ರಗಳನ್ನು ಜಾಥಾದಲ್ಲಿ ಸಾಗಿದ ಇತರರು ಸಾರ್ವಜನಿಕರಿಗೆ ವಿತರಿಸಿದರು. ‘ಮನೆಗೊಂದು ಮರ ಊರಿಗೊಂದು ವನ’, ‘ಇದು ನನ್ನ ನಗರ, ಸ್ವಚ್ಛತೆ ಕಾಪಾಡುವುದು ನನ್ನ ಧರ್ಮ’ ಎಂಬ ಪ್ಲೆಕಾರ್ಡ್‌ಗಳು ಸಾರ್ವಜನಿಕರ ಗಮನ ಸೆಳೆದವು.

ಜಾಥಾ ಹೊರಡುವುದಕ್ಕೂ ಮುನ್ನ ಕಪ್ಪು ಬಣ್ಣದ ಬಟ್ಟೆಯನ್ನು ಸಾರ್ವಜನಿಕರ ಕಣ್ಣಿಗೆ ಕಟ್ಟಿ ಪರೀಕ್ಷಿಸಲಾಯಿತು. ಬಳಿಕ ದ್ವಿಚಕ್ರ ವಾಹನದಲ್ಲಿ ಕುಳಿತ ಸುದರ್ಶನ್‌, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಹೆಲ್ಮೆಟ್‌ ಧರಿಸಿದರು. ಐದಾರು ಬೈಕುಗಳಲ್ಲಿ ಸ್ನೇಹಿತರು ಇವರನ್ನು ಹಿಂಬಾಲಿಸಿದರು. ಆಂಬುಲೆನ್ಸ್‌, ಪೊಲೀಸ್ ವಾಹನ ಕೂಡ ಇವರೊಂದಿಗೆ ಸಾಗಿತು. ಸಿಗ್ನಲ್‌ಗಳಲ್ಲಿ ರಸ್ತೆ ನಿಯಮಗಳನ್ನು ಪಾಲಿಸಿದರು. 40 ನಿಮಿಷಗಳಲ್ಲಿ ಸಿದ್ಧಲಿಂಗಪುರ ತಲುಪಿದರು. ಮಾಜಿ ಶಾಸಕ ಬಾಲರಾಜ್‌ ಜಾಥಾ ಸ್ವಾಗತಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.