ಮೈಸೂರು: ಇಲ್ಲಿನ ಒಲ್ಡ್ ಬ್ಯಾಂಕ್ ರಸ್ತೆಯ ‘ಆನಂದ್ ಬ್ರದರ್್್ಸ’ ಎಂಬ ನಾಲ್ಕು ಮಹಡಿಯ ಬಟ್ಟೆ ಅಂಗಡಿಗೆ ಬುಧವಾರ ರಾತ್ರಿ ಗ್ರಾಹಕರ ಸೋಗಿನಲ್ಲಿ ಪ್ರವೇಶಿಸಿ ಅವಿತುಕೊಂಡ ದುಷ್ಕರ್ಮಿ, ಮೂರು ಅಂಗಡಿಗಳಿಗೆ ನುಗ್ಗಿ ಕ್ಯಾಷ್ ಕೌಂಟರ್ನಲ್ಲಿದ್ದ ₹ 19 ಲಕ್ಷವನ್ನು ದೋಚಿದ್ದಾನೆ.
ಪ್ರಭಾ ಚಿತ್ರಮಂದಿರದ ಸಮೀಪದ ಎರಡು ಬಟ್ಟೆ ಅಂಗಡಿ ಹಾಗೂ ವಿದ್ಯುತ್ ಉಪಕರಣಗಳ ಒಂದು ಮಳಿಗೆಯಲ್ಲಿ ನಡೆದ ಕೃತ್ಯ ಗುರುವಾರ ಬೆಳಕಿಗೆ ಬಂದಿದೆ. ಸತೀಶ್, ಸಂತೋಷ್ ಹಾಗೂ ಆನಂದ್ ಸಹೋದರರ ಒಡೆತನದ ‘ಆನಂದ್ ಬ್ರದರ್್ಸ’ನಲ್ಲಿ ₹ 12 ಲಕ್ಷ, ನವೀನಕುಮಾರ್ ಎಂಬುವರಿಗೆ ಸೇರಿದ ‘ಓಶ್ವಾಲ್ ಫ್ಯಾಷನ್ಸ್’ನಲ್ಲಿ ₹ 4 ಲಕ್ಷ ಮತ್ತು ಉತ್ತಮ್ಕುಮಾರ್ ಎಂಬುವರ ‘ಜಿ.ಎಂ.ಲೈಟ್ಸ್’ ಮಳಿಗೆಯಲ್ಲಿ ₹ 3 ಲಕ್ಷ ದರೋಡೆಯಾಗಿದೆ.
‘ಗ್ರಾಹಕನ ಸೋಗಿನಲ್ಲಿ ‘ಆನಂದ್ ಬ್ರದರ್್ಸ’ ಮಳಿಗೆಗೆ ಬುಧವಾರ ರಾತ್ರಿ ಪ್ರವೇಶ ಪಡೆದ ದುಷ್ಕರ್ಮಿ ಅವಿತುಕೊಂಡಿದ್ದಾನೆ. ನಾಲ್ಕು ಮಹಡಿಯ ಕಟ್ಟಡದಲ್ಲಿ ಇದು ಕೆಲಸಗಾರರ ಗಮನಕ್ಕೆ ಬಂದಿಲ್ಲ. ತಡರಾತ್ರಿ ಸಿ.ಸಿ.ಟಿ.ವಿ ಕ್ಯಾಮೆರಾ ಧ್ವಂಸಗೊಳಿಸಿದ್ದಾನೆ.
ಬಳಿಕ ಕ್ಯಾಷ್ಕೌಂಟರ್ಗೆ ಧಾವಿಸಿ, ಬೀಗ ಹಾಕದ ಪೆಟ್ಟಿಗೆಯಲ್ಲಿದ್ದ ಹಣ ದೋಚಿದ್ದಾನೆ. ನಾಲ್ಕನೇ ಮಹಡಿಯಲ್ಲಿ ಒಳಗಿನಿಂದ ಬೀಗ ಮುರಿದಿದ್ದಾನೆ. ದೃಶ್ಯವನ್ನು ಸೆರೆ ಹಿಡಿದಿದ್ದ ಸಿಸಿಟಿವಿ ಉಪಕರಣ ಹೊತ್ತು ಪರಾರಿಯಾಗಿ ದ್ದಾನೆ’ ಎಂದು ಲಷ್ಕರ್ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ.
‘ಅಕ್ಕಪಕ್ಕದಲ್ಲೇ ಇರುವ ಅಂಗಡಿಗಳಿಗೆ ಮಹಡಿಯಿಂದ ಸುಲಭವಾಗಿ ಪ್ರವೇಶಿಸುವ ಅವಕಾಶವಿದೆ. ‘ಓಶ್ವಾಲ್ ಫ್ಯಾಷನ್ಸ್’ನ ಕಿಟಕಿ ಮುರಿದು ಒಳನುಗ್ಗಿ, ಕ್ಯಾಷ್ ಕೌಂಟರ್ನಲ್ಲಿದ್ದ ಹಣ ದೋಚಿದ್ದಾನೆ. ಅಲ್ಲಿಂದ ‘ಎಂ.ಜಿ.ಲೈಟ್ಸ್’ ಅಂಗಡಿಗೆ ನುಗ್ಗಿದ್ದಾನೆ. ಹಣ ಕಳವು ಮಾಡಿ ಪರಾರಿಯಾಗಿದ್ದಾನೆ’ ಎಂದು ವಿವರಿಸಿದ್ದಾರೆ.
‘ಗುರುವಾರ ಬೆಳಿಗ್ಗೆ ಅಂಗಡಿಗಳ ಬಾಗಿಲು ತೆರೆದು ಪರಿಶೀಲಿಸಿದಾಗ ಹಣ ಕಳುವಾಗಿದ್ದು ಬೆಳಕಿಗೆ ಬಂದಿದೆ. ಬೆರಳಚ್ಚು ಹಾಗೂ ಶ್ವಾನದಳ ಧಾವಿಸಿ ಪರಿಶೀಲನೆ ನಡೆಸಿದವು. ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದವರೇ ಕೃತ್ಯ ಎಸಗಿರಬಹುದು. ಇಲ್ಲವೇ ನೆರವು ನೀಡಿರಬಹುದು’ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.