ADVERTISEMENT

ಚಿತ್ರ ಪ್ರದರ್ಶನ ರದ್ದು: ಪರದಾಡಿದ ಪ್ರೇಕ್ಷಕ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2018, 9:11 IST
Last Updated 10 ಮಾರ್ಚ್ 2018, 9:11 IST
ಮೈಸೂರಿನ ಗಾಯತ್ರಿ ಚಿತ್ರಮಂದಿರದ ಗೇಟಿನಲ್ಲಿ ‘ಈ ದಿನ ಚಿತ್ರಪ್ರದರ್ಶನ ಇರುವುದಿಲ್ಲ’ ಎಂಬ ನಾಮಫಲಕ ನೇತಾಡುತ್ತಿತ್ತು
ಮೈಸೂರಿನ ಗಾಯತ್ರಿ ಚಿತ್ರಮಂದಿರದ ಗೇಟಿನಲ್ಲಿ ‘ಈ ದಿನ ಚಿತ್ರಪ್ರದರ್ಶನ ಇರುವುದಿಲ್ಲ’ ಎಂಬ ನಾಮಫಲಕ ನೇತಾಡುತ್ತಿತ್ತು   

ಮೈಸೂರು: ಡಿಜಿಟಲ್‌ ಸೇವಾ ದರ ಏರಿಕೆ ವಿರೋಧಿಸಿ ನಿರ್ಮಾಪಕರು ಮುಷ್ಕರಕ್ಕೆ ಕರೆ ನೀಡಿದ್ದರಿಂದ ಜಿಲ್ಲೆಯ ಚಿತ್ರಮಂದಿರಗಳಲ್ಲಿ ಶುಕ್ರವಾರ ಕನ್ನಡ ಸಿನಿಮಾ ಪ್ರದರ್ಶನಗೊಳ್ಳಲಿಲ್ಲ.

ನಗರ ವ್ಯಾಪ್ತಿಯ 14 ಚಿತ್ರಮಂದಿರ ಗಳ ಪೈಕಿ ಮೂರರಲ್ಲಿ ಹಿಂದಿ ಭಾಷೆ, ಡಿಆರ್‌ಸಿ ಹಾಗೂ ಐನಾಕ್ಸ್‌ ಮಲ್ಟಿಫ್ಲೆಕ್ಸ್‌ಗಳಲ್ಲಿ ಬಾಲಿವುಡ್‌ ಮತ್ತು ಹಾಲಿವುಡ್‌ ಚಿತ್ರಗಳು ಮಾತ್ರ ಚಿತ್ರ ರಸಿಕರನ್ನು ರಂಜಿಸಿದವು.

ಯುಎಫ್‌ಒ ಮತ್ತು ಕ್ಯೂಬ್‌ ಸಂಸ್ಥೆಗಳು ಡಿಜಿಟಲ್‌ ಸೇವಾ ದರವನ್ನು ಏರಿಕೆ ಮಾಡಿದ್ದನ್ನು ವಿರೋಧಿಸಿ ದಕ್ಷಿಣ ಭಾರತದ ಚಲನಚಿತ್ರ ವಾಣಿಜ್ಯ ಮಂಡಳಿ ಸಿನಿಮಾ ಪ್ರದರ್ಶನ ರದ್ದುಗೊಳಿಸಲು ಸೂಚಿಸಿತ್ತು. ನಿರ್ಮಾಪಕರು ಹಾಗೂ ಹಂಚಿಕೆದಾರರ ಬೇಡಿಕೆಗಳಿಗೆ ಒಪ್ಪಿದ ಸೇವಾ ಸಂಸ್ಥೆಗಳು ದರವನ್ನು ಕಡಿಮೆ ಮಾಡಿತು. ಹೀಗಾಗಿ, ಆಂಧ್ರಪ್ರದೇಶ ಸೇರಿ ವಿವಿಧೆಡೆ ಈ ಹೋರಾಟವನ್ನು ಕೈಬಿಡಲಾಯಿತು. ಆದರೆ, ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕನ್ನಡ ಸಿನಿಮಾ ಚಿತ್ರ ನಿರ್ಮಾಪಕರು ಹೋರಾಟ ಮುಂದುವರಿಸಿದರು.

ADVERTISEMENT

‘ಓ ಪ್ರೇಮವೆ’ ಸೇರಿ ಮೂರು ಕನ್ನಡ ಚಿತ್ರಗಳು ಶುಕ್ರವಾರ ತೆರೆಕಾಣಬೇಕಿತ್ತು. ಮುಷ್ಕರದ ಪರಿಣಾಮವಾಗಿ ಇವು ತೆರೆಗೆ ಬರಲಿಲ್ಲ. ಈ ಸಿನಿಮಾಗಳಿಗೆ ಕಾಯ್ದಿರಿಸಿದ್ದ ಚಿತ್ರಮಂದಿರಗಳಿಗೆ ಪ್ರದರ್ಶನದ ಹಕ್ಕನ್ನು ನಿರ್ಮಾಪಕರು ನೀಡಲಿಲ್ಲ. ಬಹುತೇಕ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ ನಟ ಶಿವರಾಜಕುಮಾರ್‌ ಅಭಿನಯದ ‘ಟಗರು’ ಚಿತ್ರದ ವೀಕ್ಷಣೆಗೆ ಬಂದಿದ್ದ ಪ್ರೇಕ್ಷಕರು ನಿರಾಸೆಯಿಂದ ಮರಳಿದರು.

ಹೊಸ ಚಿತ್ರಗಳು ಬಿಡುಗಡೆಯಾಗುವ ದಿನವಾದ ಶುಕ್ರವಾರ ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರ ಸಂಖ್ಯೆಯೂ ಹೆಚ್ಚು. ಆದರೆ, ಚಿತ್ರಮಂದಿರಗಳ ಗೇಟಿಗೆ ಅಳವಡಿಸಿದ್ದ ‘ಪ್ರದರ್ಶನರದ್ದು’ ಎಂಬ ನಾಮಫಲಕ ಅನೇಕರಲ್ಲಿ ನಿರಾಸೆ ಮೂಡಿಸಿತು ಎಂದು ಚಿತ್ರಮಂದಿರಗಳ ಮಾಲೀಕರ ಸಂಘದ ಉಪಾಧ್ಯಕ್ಷ ಎಂ.ಆರ್‌.ರಾಜಾರಾಮ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.