ADVERTISEMENT

ತಿಗಣೆ ಔಷಧ ಕುಡಿದಿದ್ದ ವ್ಯಕ್ತಿ ಸಾವು

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2017, 6:28 IST
Last Updated 24 ಏಪ್ರಿಲ್ 2017, 6:28 IST

ಮೈಸೂರು: ಬೇಸರಗೊಂಡು ತಿಗಣೆ ಔಷಧ ಕುಡಿದ ವ್ಯಕ್ತಿ ಭಾನುವಾರ ಮೃತಪಟ್ಟಿದ್ದಾರೆ.

ಉದಯಗಿರಿಯ ನಿವಾಸಿ ಸೈಯದ್ ಅಫ್ಜಲ್ (48) ಮೃತರು.

ಇವರು ತಮ್ಮ ಮನೆ ಬಳಿಯ ಮುಕ್ತಾರುನ್ನೀಸಾ, ಫಾತಿಮಾ ಬೀ, ನೂರಿ, ವಾಸಿಕ್ ಮತ್ತು ತಬ್ರೀಜ್‌ ಅವರ ಬಳಿ ಸಾಲ ಪಡೆದಿದ್ದರು. ಸಾಲ ತೀರಿಸದೆ ಇದ್ದ ಕಾರಣ, ಇವರಿಗೆ ಈ ಐವರು ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಇದರಿಂದ ಬೇಸರಗೊಂಡಿದ್ದ ಅಫ್ಜಲ್‌, ಏ.15ರಂದು ತಿಗಣೆ ಔಷಧಿ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದರು. ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ರಾತ್ರಿ ಮೃತಪಟ್ಟಿದ್ದಾರೆ.

ADVERTISEMENT

ಮೃತರ ಪುತ್ರ ಸೈಯದ್ ಅರಾಫತ್ ನೀಡಿದ ದೂರಿನ ಮೇರೆಗೆ ಎನ್.ಆರ್.ಠಾಣೆ ಪೊಲೀಸರು ಬೆದರಿಕೆ ಹಾಕಿದ್ದ ಐವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅತ್ಯಾಚಾರ: ಬಂಧನ
ಮೈಸೂರು: ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಮಾಡಿದ್ದ ಯುವಕನನ್ನು ಇಲವಾಲ ಠಾಣೆ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಇಲವಾಲ ಹೋಬಳಿಯ ಹೊಸ ಕಾಮನಕೊಪ್ಪಲು ಗ್ರಾಮದ ದಿನೇಶ್ (22) ಎಂಬಾತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇದೇ ಗ್ರಾಮದ 17 ವರ್ಷದ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಮಾಡಿದ್ದ. ಬಾಲಕಿ ನಾಪತ್ತೆಯಾಗಿದ್ದಾಳೆಂದು ಆಕೆಯ ಪೋಷಕರು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ದಿನೇಶ್ ವಿರುದ್ಧ ಅಪಹರಣ, ಅತ್ಯಾಚಾರ ಮತ್ತು ಪೋಕ್ಸೊ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಳವು: ಬಂಧನ
ಮೈಸೂರು: ನಗರದ ಉದಯಗಿರಿ ಮುಖ್ಯರಸ್ತೆಯಲ್ಲಿ ಆಟೊರಿಕ್ಷಾ ಕಳ್ಳನನ್ನು ಮೈಸೂರು ದಕ್ಷಿಣ ಪೊಲೀಸರು ವಾಹನ ಸಮೇತ ಬಂಧಿಸಿದ್ದಾರೆ.

ಏ. 17ರಂದು ಉದಯಗಿರಿಯಲ್ಲಿ ಆಟೊರಿಕ್ಷಾ ಕಳುವಾಗಿದ್ದ ಬಗ್ಗೆ ದೂರು ದಾಖಲಾಗಿತ್ತು. ಕಾರ್ಯಾಚರಣೆ ನಡೆಸುತ್ತಿದ್ದ ಪೊಲೀಸರು ಭಾನುವಾರ ಮಧ್ಯಾಹ್ನ ಉದಯಗಿರಿ ಮುಖ್ಯರಸ್ತೆ ಯಲ್ಲಿ ವಾಹನವನ್ನು ಗುರುತಿಸಿ, ಚಾಲನೆ ಮಾಡುತ್ತಿದ್ದ ಮಹದೇವನನ್ನು ವಿಚಾರಿಸಿದಾಗ ಕಳುವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಮೈಸೂರು ದಕ್ಷಿಣ ಠಾಣೆ ಇನ್‌ಸ್ಪೆಕ್ಟರ್‌ ಗೋಪಾಲಕೃಷ್ಣ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಬ್‌ ಇನ್‌ಸ್ಪೆಕ್ಟರ್‌ ರಾಜಪ್ಪ, ಸಿಬ್ಬಂದಿ ಹರೀಶಕುಮಾರ್‌, ಜಹೂರ್‌ ಅಹಮದ್‌, ಮಹಮದ್‌ ಇಸ್ಮಾಯಿಲ್‌, ಚಾಲಕ ಭೈರಪ್ಪ ಭಾಗಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.