ADVERTISEMENT

ಪರಭಾಷಿಗರ ಕೈಯಲ್ಲಿ ವ್ಯಾಪಾರ ವಹಿವಾಟು

​ಪ್ರಜಾವಾಣಿ ವಾರ್ತೆ
Published 11 ಜನವರಿ 2017, 9:54 IST
Last Updated 11 ಜನವರಿ 2017, 9:54 IST

ತಿ.ನರಸೀಪುರ: ಬೆಂಗಳೂರಿನ ವ್ಯಾಪಾರ, ವಹಿವಾಟು ಈಗ ಬೇರೆ ಭಾಷೆ ಜನರ ಕೈಯಲ್ಲಿದ್ದು, ಉದ್ಯೋಗವಕಾಶ ಕೂಡ ಪರಕೀಯರ ಪಾಲಾಗುತ್ತಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತ ಹೆಳವರಹುಂಡಿ ಸಿದ್ದಪ್ಪ  ವಿಷಾದ ವ್ಯಕ್ತಪಡಿಸಿದರು.

ತಿರುಮಕೂಡಲಿನಲ್ಲಿ ಸೋಮವಾರ ನಡೆದ 4ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಡೆದ ತಿ.ನರಸೀಪುರ ತಾಲ್ಲೂಕು ದರ್ಶನ ವಿಚಾರ ಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

ಬೆಂಗಳೂರಿನಲ್ಲಿ ಮಾಸಿಕ ಕೋಟ್ಯಂತರ ರೂಪಾಯಿ ವಹಿವಾಟು ನಡೆಯುತ್ತಿದ್ದು, ಅದರ  ಪೂರ್ಣ ಪಾಲು  ಗುಜರಾತಿ, ಮರಾಠಿ, ರಾಜಸ್ತಾನಿಗಳ ಕೈಯಲ್ಲಿದೆ. ಕನ್ನಡಿಗರಿಗೆ ಇಲ್ಲಿ ಹೆಚ್ಚಿನ ಅವಕಾಶ ಲಭ್ಯವಾಗಿಲ್ಲ. ಕನ್ನಡಿಗರು ಆರ್ಥಿಕ ವಹಿವಾಟು ನಡೆಸುವತ್ತ ಹೆಚ್ಚು ಸಕ್ರಿಯರಾಗಬೇಕಿದೆ.  ಖಾಸಗಿ ಕ್ಷೇತ್ರಗಳ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗಾವಕಾಶ ಅಗತ್ಯವಿದೆ. ಸರ್ಕಾರ ಈ ನಿಟ್ಟಿನಲ್ಲಿ ಸೂಕ್ತ ಕಾನೂನು ಆದೇಶ ಮಾಡಬೇಕಿದೆ ಎಂದರು.

ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಕೆ.ನಾಗರತ್ನಮ್ಮ ಅವರು ತಿ.ನರಸೀಪುರ ತಾಲ್ಲೂಕಿನ ಐತಿಹಾಸಿಕ ಕ್ಷೇತ್ರಗಳು ಹಾಗೂ ಸಾಧಕರ ಕಿರು ಪರಿಚಯ ನೀಡಿದರು. ತಾಲ್ಲೂಕು ಪಂಚಾಯಿತಿ ಇಒ ಬಿ.ಎಸ್‌.ರಾಜು ಮಾತನಾಡಿದರು.

ವರ್ತಮಾನ ಮತ್ತು ಕನ್ನಡ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಕೊಡುಗೆ ಕುರಿತ ಮತ್ತೊಂದು ವಿಚಾರ ಗೋಷ್ಠಿ  ಉದ್ಘಾಟಿಸಿದ ಜಿ.ಪಂ. ಮಾಜಿ ಅಧ್ಯಕ್ಷ ಕೆ.ಸಿ. ಬಲರಾಂ, ಕನ್ನಡ ಉಳಿಸಿ ಬೆಳೆಸಲು ಕನ್ನಡಿಗರು ಕಂಕಣಬದ್ಧರಾಗ ಬೇಕು ಎಂದು ಮನವಿ ಮಾಡಿದರು.

ಮೈಸೂರು ವಿಶ್ವವಿದ್ಯಾನಿಲಯ ಸ್ಥಾಪನೆ, ಕೆಆರ್‌ಎಸ್‌ ನಿರ್ಮಾಣ ಹೀಗೆ ಹತ್ತು ಹಲವು ಸೇವೆಗಳ ಮೂಲಕ ಜನರ ಮನಸ್ಸಿನಲ್ಲಿ ನಾಲ್ವಡಿ ಅವರು ಶಾಶ್ವತವಾಗಿ ಉಳಿದಿದ್ದಾರೆ ಎಂದರು.

ಪತ್ರಕರ್ತ ಎಂ.ಮಹಾದೇವ್‌ ನಾಲ್ವಡಿ ಅವರ ಕೊಡುಗೆ ಬಗ್ಗೆ ಉಪ ನ್ಯಾಸ ನೀಡಿದರೆ, ಸಾಹಿತಿ ಮಂಜುಳಾ ಹುಲ್ಲಹಳ್ಳಿ ಅವರು ವರ್ತಮಾನ ಕನ್ನಡದ ಬಗ್ಗೆ ಪ್ರಸ್ತಾಪಿಸಿದರು. ಅಧ್ಯಕ್ಷತೆ ವಹಿಸಿ ಮತ್ತೊಬ್ಬ ಲೇಖಕಿ ಶಾಂತಕುಮಾರಿ ಅವರು ಕನ್ನಡ ಭಾಷಾ ಮಿಶ್ರಣದ ಪ್ರಯೋಗದ ಕುರಿತು ಮಾತನಾಡಿದರು.

ಸಮ್ಮೇಳನಾಧ್ಯಕ್ಷೆ ಡಾ.ಟಿ.ಸಿ. ಪೂರ್ಣಿಮಾ, ಜಿ.ಪಂ. ಮಾಜಿ ಸದಸ್ಯರಾದ ಕೆ.ಮಹಾದೇವ್‌, ರೇಣುಕಾ ನಾಗರಾಜು, ವೈ. ಎಸ್‌. ರಾಮಸ್ವಾಮಿ, ತಾಲ್ಲೂಕು ಅಧ್ಯಕ್ಷ ಎಂ. ರಾಜು, ನಾರಾಯಣಸ್ವಾಮಿ, ಎಂ.ಡಿ.ಬಸವ ರಾಜು. ಬಿ.ಮರಯ್ಯ, ಮಹಾದೇವಶೆಟ್ಟಿ, ಕಿರಗಸೂರು ಮಹಾದೇವಯ್ಯ, ಪ್ರಗತಿ ಪರ ರೈತ ಮಾಡ್ರಹಳ್ಳಿ ಶಂಕರ್‌ ಗುರು ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.