ADVERTISEMENT

ಮಿಥ್ಯಾವಾಸ್ತವ ಪ್ರಪಂಚದ ಗುಂಗು: ಕಾಯ್ಕಿಣಿ

‘ನಿರಂತರ ರಂಗ ಉತ್ಸವ’; ಧಾರವಾಡದ ಆಟಮಾಟ ತಂಡದವರಿಂದ ‘ಬಾರಿಗಿಡ’ ನಾಟಕ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2017, 7:54 IST
Last Updated 8 ಫೆಬ್ರುವರಿ 2017, 7:54 IST
ಮೈಸೂರಿನಲ್ಲಿ ಮಂಗಳವಾರ ಏರ್ಪಡಿಸಿದ್ದ ನಿರಂತರ ರಂಗ ಉತ್ಸವವನ್ನು ರಂಗಕರ್ಮಿ ಚಿದಂಬರರಾವ್‌ ಜಂಬೆ ಉದ್ಘಾಟಿಸಿದರು. ಜಯಂತ ಕಾಯ್ಕಿಣಿ, ಪ್ರಸಾದ್‌ ಕುಂದೂರು ಇದ್ದಾರೆ
ಮೈಸೂರಿನಲ್ಲಿ ಮಂಗಳವಾರ ಏರ್ಪಡಿಸಿದ್ದ ನಿರಂತರ ರಂಗ ಉತ್ಸವವನ್ನು ರಂಗಕರ್ಮಿ ಚಿದಂಬರರಾವ್‌ ಜಂಬೆ ಉದ್ಘಾಟಿಸಿದರು. ಜಯಂತ ಕಾಯ್ಕಿಣಿ, ಪ್ರಸಾದ್‌ ಕುಂದೂರು ಇದ್ದಾರೆ   

ಮೈಸೂರು: ‘ಮಿಥ್ಯಾವಾಸ್ತವ ಪ್ರಪಂಚವು ಜನರನ್ನು ಅತಿಯಾಗಿ ಸೆಳೆಯುತ್ತಿದ್ದು, ಮನುಷ್ಯರನ್ನು ವಿಂಗಡಿಸುವ ಕಾಲಘಟ್ಟದಲ್ಲಿ ಇದ್ದೇವೆ’ ಎಂದು ಸಾಹಿತಿ ಜಯಂತ ಕಾಯ್ಕಿಣಿ ಬೇಸರ ವ್ಯಕ್ತಪಡಿಸಿದರು.

ಇಲ್ಲಿನ ರಂಗಾಯಣದ ವನರಂಗ ದಲ್ಲಿ ನಿರಂತರ ಫೌಂಡೇಷನ್‌ ಮಂಗಳ ವಾರ ಏರ್ಪಡಿಸಿದ್ದ ‘ನಿರಂತರ ರಂಗ ಉತ್ಸವ’ ಉದ್ಘಾಟಿಸಿ ಮಾತನಾಡಿದರು.
‘ವೈಚಾರಿಕತೆ, ಚಿಂತನೆಗಳ ಗೇಲಿಯ ಅಟ್ಟಹಾಸ ನಡೆಯುತ್ತಿದೆ. ಮನಷ್ಯನ ವಿಕಾಸವನ್ನು ಹಾವು–ಏಣಿ ಆಟದ ರೂಪಕಕ್ಕೆ ಹೋಲಿಸಬಹುದು. ಜಾತೀ ಯತೆ, ಅಸಮಾನತೆ ಮೊದಲಾದವು ರೂಪಕದಲ್ಲಿ ಹಾವುಗಳು.

ಸಮಾಜ ಸುಧಾರಕರು, ಸಂತರು ಅದರಲ್ಲಿ ಏಣಿ ಗಳು. ಈ ವಿಕಾಸದ ಕಾಲಘಟ್ಟದಲ್ಲಿ ಧರ್ಮ, ಜಾತಿ, ಸಂಸ್ಕೃತಿ ದೊಡ್ಡಹಾವು ಎದುರಾಗಿದೆ. ಈ ದೈತ್ಯ ಹಾವು ವೈಚಾರಿಕ ಶಕ್ತಿಯನ್ನು ನುಂಗದಂತೆ ಎಚ್ಚರ ವಹಿಸಬೇಕಿದೆ’ ಎಂದು ಸಲಹೆ ನೀಡಿದರು.

‘ಸಮಾಜವನ್ನು ಕುಟುಂಬವಾಗಿ ಪರಿವರ್ತಿಸುವಲ್ಲಿ ಕಲೆಯು ಮಹತ್ವದ ಪಾತ್ರ ವಹಿಸುತ್ತದೆ. ಜನರ ತುಡಿತವನ್ನು ಹಿಡಿಯಲು ಕಲೆ ಪ್ರಯತ್ನಿಸುತ್ತದೆ. ಜನರನ್ನು ಒಗ್ಗೂಡಿಸುವ ಶಕ್ತಿ ಈ ಕಲೆಗೆ ಇದೆ. ನಾಟಕ, ಸಿನಿಮಾ, ಜಾತ್ರೆ ಮೊದ ಲಾದ ಪ್ರದರ್ಶಕ ಕಲೆಗಳು ಎಲ್ಲರನ್ನೂ ಒಟ್ಟುಗೂಡಿಸುತ್ತವೆ’ ಎಂದರು.

ನಮ್ಮನ್ನು ಅಹಂಕಾರಿಗಳನ್ನಾಗಿ ಮಾಡುವುದು ಜ್ಞಾನವಾಗಲು ಸಾಧ್ಯ ಇಲ್ಲ. ಶಿಕ್ಷಣವೇ ಧರ್ಮ, ಸಮಾನತೆಯೇ ಅಧ್ಯಾತ್ಮ. ‘ಫೇಸ್‌ ಬುಕ್‌’, ‘ವಾಟ್ಸ್ಆ್ಯಪ್‌’ ಗುಂಗಿನಲ್ಲಿ, ಆಧುನಿಕತೆಯ ಭರಾಟೆ ಯಲ್ಲಿ ಕಲೆಗಳನ್ನು ಮರೆಯಬಾರದು. ಒಗ್ಗೂಡಿ ಸಾಗುವ ಮನೋಭಾವವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ರಂಗಕರ್ಮಿ ಚಿದಂಬರರಾವ್‌ ಜಂಬೆ ಮಾತನಾಡಿ, ರಂಗಾಯಣದಲ್ಲಿ ಕಿರು ರಂಗಮಂದಿರ ಇನ್ನೂ ಕಿರಿದಾಗಿಯೇ ಉಳಿದಿರುವುದು ಬೇಸರದ ಸಂಗತಿ. ಅದರ ವಿಸ್ತರಣೆಗೆ ಸಂಬಂಧಪಟ್ಟವರು ತ್ವರಿತವಾಗಿ ಗಮನ ಹರಿಸಬೇಕು ಎಂದು ಹೇಳಿದರು.

ರಂಗಾಯಣದಲ್ಲಿ ರಂಗಭೂಮಿಗೆ ಸಂಬಂಧಿಸಿದ ವಸ್ತುಸಂಗ್ರಹಾಲಯವನ್ನು ಸ್ಥಾಪಿಸುವ ಪ್ರಸ್ತಾವ ನನೆಗುದಿಗೆ ಬಿದ್ದಿದೆ. ಈ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸಿ ಇಲ್ಲಿ ಒಂದು ವಸ್ತುಸಂಗ್ರಹಾಲಯ ಆರಂಭಿಸಲು ಕ್ರಮ ವಹಿಸಬೇಕು. ಇದರಿಂದ ರಂಗಭೂಮಿ ಅಧ್ಯಯನ, ಸಂಶೋಧನೆಗಳಲ್ಲಿ ತೊಡಗುವವರಿಗೆ ಬಹಳ ಅನುಕೂಲವಾಗುತ್ತದೆ ಎಂದರು.

ನಿರಂತರ ರಂಗ ಉತ್ಸವದ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ನಿರಂತರ ಫೌಂಡೇಷನ ಸ್ಥಾಪಕ ಸದಸ್ಯ ಪ್ರಸಾದ್‌ ಕುಂದೂರು ಇದ್ದರು.
ಧಾರವಾಡದ ಆಟಮಾಟ ತಂಡದವರು ಚಿದಾನಂದ ಸಾಲಿ ರಚಿತ, ಮಹಾದೇವ ಹಡಪದ ನಿರ್ದೇಶನದ ‘ಬಾರಿಗಿಡ’ ನಾಟಕ ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.