ADVERTISEMENT

ಸಂಭ್ರಮದ ದೊಡ್ಡಹೆಜ್ಜೂರು ಆಂಜನೇಯಸ್ವಾಮಿ ಜಾತ್ರೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2017, 6:33 IST
Last Updated 16 ಜನವರಿ 2017, 6:33 IST

ಹುಣಸೂರು: ತಾಲ್ಲೂಕಿನ ದೊಡ್ಡಹೆಜ್ಜೂರು ಗ್ರಾಮದ ಆಂಜನೇಯ ಜಾತ್ರೆ ಭಾನುವಾರಸಂಭ್ರಮದಿಂದ  ನಡೆಯಿತು. ಸುಮಾರು 25 ಅಡಿ ಎತ್ತರದ ತೇಗದ ರಥದಲ್ಲಿ ಆಂಜನೇಯ ಉತ್ಸವ ಮೂರ್ತಿಯನ್ನು ಕೂರಿಸಿ, ದೊಡ್ಡಹೆಜ್ಜೂರು ಕೆರೆಗೆ ಹೊಂದಿಕೊಂಡಿರುವ ಆಂಜನೇಯ ದೇವಸ್ಥಾನದ ಸುತ್ತಲೂ ಭಕ್ತರು ಮೂರು ಸುತ್ತು ಎಳೆದರು.
ರಥ ಎಳೆಯುತ್ತಿದ್ದಂತೆ ಹರಕೆ ಹೊತ್ತವರು ಬಾಳೆ ಹಣ್ಣು ಮತ್ತು ಜವನ ಎಸೆದರು.

ನೂತನ ದಂಪತಿಗಳು ಈ ಜಾತ್ರೆಗೆ ವಿಶೇಷವಾಗಿ ಬಂದು ದೇವರ ದರ್ಶನ ಪಡೆಯುವುದು ಸ್ಥಳೀಯ ಪದ್ಧತಿ.  ರಥ ಎದುರಾಗುತ್ತಿದ್ದಂತೆ ದಂಪತಿ ಜವನ ಹಾಗೂ ಹಣ್ಣು ಎಸೆದು ತಮ್ಮ ಭಕ್ತಿಯನ್ನು ವ್ಯಕ್ತಪಡಿಸುತ್ತಿದ್ದ ದೃಶ್ಯ ಸಾಮಾನ್ಯ ವಾಗಿತ್ತು.

ಸಂಭ್ರಮ: ಈ ಜಾತ್ರೆ ನಾಲ್ಕು ದಿನಗಳು ನಡೆದಿದ್ದು, ರೈತಾಪಿ ವರ್ಗದವರು ಜಾತ್ರೆಗೆ ಕುಟುಂಬ ಸಮೇತವಾಗಿ ಬಂದು ಸಂಭ್ರಮಿಸಿ ತೆರಳುತ್ತಾರೆ. ನೂಕುನುಗ್ಗಲು: ಜಾತ್ರೆಗೆ ಬರದ ಛಾಯೆ ಬೀಸಿದಂತೆ ಕಾಣುತ್ತಿರಲಿಲ್ಲ. ಸುತ್ತಲಿನ 16 ಗ್ರಾಮಗಳಿಂದ ಜಾತ್ರೆ ನೋಡಲೆಂದೇ ಸ್ಥಳೀಯ ವಾಹನಗಳಿಂದ ಬಂದಿದವರ ಸಂಖ್ಯೆ ಕನಿಷ್ಠ 6 ರಿಂದ 7 ಸಾವಿರ ಇತ್ತು ಎಂದು ಅಂದಾಜಿಸಲಾಗಿದೆ.

ಜಾತ್ರೆಯಲ್ಲಿ ಈ ಬಾರಿ ಮಿಠಾಯಿ ಅಂಗಡಿಗಳ ಸಾಲು ಹೆಚ್ಚಾಗಿತ್ತು. ಗಣ್ಯರು:  ಜಾತ್ರೆಗೆ ಶಾಸಕರಾದ ಮಂಜುನಾಥ್‌, ಜಿ.ಟಿ.ದೇವೇಗೌಡ, ಮಾಜಿ ಜಿ.ಪಂ ಸದಸ್ಯೆ ಲಲಿತಾ ಜಿ.ಟಿ.ದೇವೇಗೌಡ,  ಹನಗೋಡು ಜಿ.ಪಂ ಸದಸ್ಯ ಅನಿಲ್‌ಕುಮಾರ್‌, ತಾ.ಪಂ ಸದಸ್ಯ ಪುಷ್ಪಲತಾ ಗಣಪತಿ, ರೂಪಾ ನಂದೀಶ್‌ ಸೇರಿದಂತೆ ಸ್ಥಳಿಯ ಮುಖಂಡರು ಭಾಗವಹಿಸಿದ್ದರು. 

ಕೆರೆ ಖಾಲಿ ಖಾಲಿ...: ದೊಡ್ಡಹೆಜ್ಜೂರು ಕೆರೆ ಈ ಸಾಲಿನಲ್ಲಿ ಸಂಪೂರ್ಣ ಖಾಲಿ ಆಗಿ ಜಾತ್ರೆಗೆ ಬಂದ ಭಕ್ತರ ವಾಹನಗಳ ನಿಲ್ದಾಣವಾಗಿ ಬಳಸಿಕೊಳ್ಳುವ ಮೂಲಕ ಬರಕ್ಕೆ ಕೈಗನ್ನಡಿ ಹಿಡಿದಂತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.