ADVERTISEMENT

ಹೂಗಳಲ್ಲಿ ಚೆನ್ನಕೇಶವ ದೇಗುಲ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2017, 7:02 IST
Last Updated 19 ಸೆಪ್ಟೆಂಬರ್ 2017, 7:02 IST
ಮೈಸೂರಿನ ಕುಪ್ಪಣ್ಣ ಉದ್ಯಾನದಲ್ಲಿ ನಡೆಯುತ್ತಿರುವ ಸಿದ್ಧತೆ
ಮೈಸೂರಿನ ಕುಪ್ಪಣ್ಣ ಉದ್ಯಾನದಲ್ಲಿ ನಡೆಯುತ್ತಿರುವ ಸಿದ್ಧತೆ   

ಮೈಸೂರು: ಒಂದೇ ಸೂರಿನಲ್ಲಿ ಸೋಮ ನಾಥಪುರದ ಚೆನ್ನಕೇಶವ ದೇಗುಲ, ಫ್ರಾನ್ಸಿನ ಐಫೆಲ್‌ ಗೋಪುರ, ಬಾರ್ಬಿ ಗರ್ಲ್‌, ದೊಡ್ಡ ಗಡಿಯಾರ, ಬುದ್ಧ, ಬಸವಣ್ಣ, ಅಂಬೇಡ್ಕರ್‌ ಪ್ರತಿಮೆ, ಆನೆಗಳು, ನವಿಲುಗಳ ಅಲಂಕಾರ..!

ಇವೆಲ್ಲವೂ ಸೆ.21ರಿಂದ ಕುಪ್ಪಣ್ಣ ಉದ್ಯಾನದಲ್ಲಿ ವೀಕ್ಷಿಸಲು ಲಭ್ಯವಾಗಲಿವೆ. ದಸರಾ ಮಹೋತ್ಸವ ಅಂಗವಾಗಿ ತೋಟಗಾರಿಕೆ ಇಲಾಖೆ ಆಯೋಜಿಸಲಿರುವ ದಸರಾ ಫಲಪುಷ್ಪ ಪ್ರದರ್ಶನದಲ್ಲಿ ಹೂಗಳಿಂದ ಇವುಗಳನ್ನು ನಿರ್ಮಿಸಲಾಗುತ್ತಿದೆ.

ಗ್ಲಾಸ್‌ಹೌಸ್‌ನೊಳಗೆ ಚೆನ್ನಕೇಶವ ದೇಗುಲವನ್ನು ಸುಮಾರು 3 ಲಕ್ಷ ಗುಲಾಬಿ ಹೂವುಗಳಿಂದ ನಿರ್ಮಿಸಲಾಗುತ್ತಿದೆ. 10 ದಿನಗಳ ಅವಧಿಗೆ ಗ್ಲಾಸ್‌ಹೌಸ್‌ನ ಕಾಮಗಾರಿ ಸ್ಥಗಿತಗೊಳಿಸಲಾಗಿದೆ ಎಂದು ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್ ಇಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

ಆರ್ಕಿಡ್ಸ್‌ ಹೂಗಳಿಂದ 12 ಅಡಿ ಎತ್ತರದ ಬಾರ್ಬಿ ಗರ್ಲ್‌, 10 ಅಡಿ ಎತ್ತರದ ನವಿಲು, ಸೇವಂತಿಗೆ ಹೂವುಗಳಿಂದ 25 ಅಡಿ ಎತ್ತರದ ಐಫೆಲ್‌ ಗೋಪುರ, 17 ಅಡಿ ಎತ್ತರದ ದೊಡ್ಡ ಗಡಿಯಾರ, ಎಲೆಗಳಿಂದ 10 ಅಡಿ ಎತ್ತರದ ಗಂಡಾನೆ, 8 ಅಡಿ ಎತ್ತದ ಹೆಣ್ಣಾನೆ ಹಾಗೂ 5 ಅಡಿ ಎತ್ತರದ ಮರಿಯಾನೆ ನಿರ್ಮಿಸಲಾಗುತ್ತಿದೆ.

ಮಕ್ಕಳ ಮನರಂಜನೆಗಾಗಿ ಅಮ್ಯೂ ಸ್‌ಮೆಂಟ್‌ ಪಾರ್ಕ್‌ ಇರಲಿದೆ. ನಿತ್ಯ ಸಂಜೆ 7ರಿಂದ ರಾತ್ರಿ 9 ಗಂಟೆವರೆಗೆ ಲೇಸರ್‌ ಷೋ ನಡೆಯಲಿದೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುವುದು. ಗಾಯಕರಾದ ಅರ್ಜಿತ್‌ ಸಿಂಗ್‌ ಹಾಗೂ ಶ್ರೇಯಾ ಘೋಷಾಲ್‌ ಅವರನ್ನು ಆಹ್ವಾನಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಗುತ್ತಿಗೆದಾರರು ತಿಳಿಸಿದರು.

ಉದ್ಯಾನದಲ್ಲಿಯೇ 50 ಆಹಾರ ಮಳಿಗೆಗಳನ್ನು ತೆರೆಯಲಾಗುತ್ತಿದೆ. ವಿವಿಧ ರಾಜ್ಯಗಳ ಪ್ರತಿನಿಧಿಗಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಡಿ.ಮಂಜುನಾಥ್‌ ಮಾತನಾಡಿ, ‘ಸುಮಾರು ₹ 70 ಲಕ್ಷ ಮೊತ್ತಕ್ಕೆ ಟೆಂಡರ್‌ ನೀಡಲಾಗಿದೆ. 2 ಲಕ್ಷ 15 ಸಾವಿರ ಹೂವಿನ ಗಿಡಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತಿದೆ. ನಿತ್ಯ ಒಂದು ಗಂಟೆ ಸಂಗೀತ ನೃತ್ಯ ಕಾರಂಜಿ ಏರ್ಪಡಿಸಲಾಗುವುದು. ಸಾರ್ವಜನಿಕರ ಪ್ರತಿಕ್ರಿಯೆ ಪಡೆಯಲು ವೆಬ್‌ಸೈಟ್‌ ಅಭಿವೃದ್ಧಿಪಡಿಸಲಾಗಿದೆ’ ಎಂದರು.

ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಜಿ.ಡಿ.ದಿನೇಶಕುಮಾರ್‌, ಜಿಲ್ಲಾ ತೋಟಗಾರಿಕೆ ಸಂಘದ ಉಪಾ ಧ್ಯಕ್ಷ ಡಿ.ಪ್ರಭಾಮಂಡಲ್‌, ಜಂಟಿ ಕಾರ್ಯದರ್ಶಿ ಎಚ್.ಹನುಮಂತಯ್ಯ, ಖಜಾಂಚಿ ಎಂ.ವಿಜಯಕುಮಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.