ಮೈಸೂರು: ಬಹು ನಿರೀಕ್ಷಿತ ಮೈಸೂರು– ಬೆಂಗಳೂರು ದ್ವಿಪಥ ರೈಲು ಯೋಜನೆ ಪೂರ್ಣಗೊಂಡಿದ್ದು, ನ. 19ರಂದು ರೈಲುಗಳ ಸಂಚಾರ ಆರಂಭವಾಗಲಿದೆ. 2008ರಲ್ಲಿ ಆರಂಭವಾದ ಈ ಯೋಜನೆಯು 2011ಕ್ಕೆ ಮುಗಿಯಬೇಕಿತ್ತು. ಶ್ರೀರಂಗಪಟ್ಟಣದಲ್ಲಿ ಟಿಪ್ಪು ಶಸ್ತ್ರಾಗಾರ ಅಡ್ಡಿಯಾಗಿದ್ದ ಕಾರಣ, 1.7 ಕಿಲೋಮೀಟರ್ ಉದ್ದದ ಮಾರ್ಗದಲ್ಲಿ ದ್ವಿಪಥ ರೈಲು ಮಾರ್ಗ ಕಾಮಗಾರಿ ಮುಗಿದಿರಲಿಲ್ಲ.
ಅಮೆರಿಕದ ವೂಲ್ಫ್ ಹಾಗೂ ನವದೆಹಲಿಯ ಪಿಎಸ್ಎಲ್ ಎಂಜಿನಿಯರಿಂಗ್ ಕಂಪೆನಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ, 1 ಸಾವಿರ ಟನ್ ತೂಕದ ಶಸ್ತ್ರಾಗಾರವನ್ನು ಸ್ಥಳಾಂತರ ಮಾಡಿದ ನಂತರ, ದ್ವಿಪಥ ಕಾಮಗಾರಿ ಪೂರ್ಣಗೊಂಡಿದೆ.
‘ಈ ಹಿನ್ನೆಲೆಯಲ್ಲಿ ರೈಲ್ವೆ ಸುರಕ್ಷಾ ಕಮಿಷನರ್ ದ್ವಿಪಥ ಮಾರ್ಗ ಪರಿಶೀಲನೆ ನಡೆಸಿದ್ದು, ರೈಲು ಸಂಚಾರಕ್ಕೆ ಯೋಗ್ಯ ಎಂದು ಹಸಿರು ನಿಶಾನೆ ನೀಡಿದ್ದಾರೆ. ಹೀಗಾಗಿ, ನ. 19ರಿಂದಲೇ ರೈಲುಗಳ ಸಂಚಾರ ಆರಂಭವಾಗಲಿದೆ ಎಂದು ನೈರುತ್ಯ ರೈಲ್ವೆ ಉಪ ಪ್ರಧಾನ ವ್ಯವಸ್ಥಾಪಕಿ ಹಾಗೂ ಕೇಂದ್ರೀಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಇ.ವಿಜಯಾ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.