ADVERTISEMENT

ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2017, 11:21 IST
Last Updated 30 ನವೆಂಬರ್ 2017, 11:21 IST
ಸಿಂಧನೂರು ಮತ್ತು ತುರ್ವಿಹಾಳ ಯೋಜನೆಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಬುಧವಾರ ಶಿರಸ್ತೇದಾರ ಅಂಬಾದಾಸ್ ಅವರಿಗೆ  ಮನವಿ ಸಲ್ಲಿಸಿದರು.
ಸಿಂಧನೂರು ಮತ್ತು ತುರ್ವಿಹಾಳ ಯೋಜನೆಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಬುಧವಾರ ಶಿರಸ್ತೇದಾರ ಅಂಬಾದಾಸ್ ಅವರಿಗೆ ಮನವಿ ಸಲ್ಲಿಸಿದರು.   

ಸಿಂಧನೂರು: ಐಸಿಡಿಎಸ್ ಯೋಜನೆ ಯಡಿ ಗರ್ಭಿಣಿ ಮತ್ತು ಬಾಣಂತಿಯರಿಗೆ ಮಾತೃಪೂರ್ಣ ಯೋಜನೆಯನ್ನು ರಾಜ್ಯ ಸರ್ಕಾರವು ಸಮರ್ಪಕವಾಗಿ ಜಾರಿಗೊಳಿಸಿಲ್ಲ ಮತ್ತು ರಾಜ್ಯ ಸರ್ಕಾರವು ಸಮರ್ಪಕ ಸಿದ್ಧತೆ ಮಾಡಿಕೊಂಡಿಲ್ಲ ಎಂದು ಆರೋಪಿಸಿ ಎಐಟಿಯುಸಿ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ಸಿಂಧನೂರು ಹಾಗೂ ತುರ್ವಿಹಾಳ ಘಟಕದ ಸದಸ್ಯೆಯರು ಪ್ರತಿಭಟನೆ ನಡೆಸಿದರು.

ಸಂಘಟನೆಯ ಅಧ್ಯಕ್ಷೆ ಅಮರಮ್ಮ ಮಾತನಾಡಿ, ‘ಗರ್ಭಿಣಿಯರಿಗೆ, ಬಾಣಂತಿಯರಿಗೆ ಮತ್ತು ಮಕ್ಕಳಿಗೆ ಕೊಡುವ ಮೊಟ್ಟೆಗಳನ್ನು ಸರ್ಕಾರವೇ ಖರೀದಿಸಬೇಕು. ಮೊಟ್ಟೆ ಮತ್ತು ತರಕಾರಿ ಹಣವನ್ನು ಮಹಿಳಾ ಸಲಹಾ ಸಮಿತಿಯ ಅಧ್ಯಕ್ಷರು ಹಾಗೂ ಕಾರ್ಯಕರ್ತೆಯರ ಹೆಸರಿನಲ್ಲಿ ಜಂಟಿ ಖಾತೆ ತೆರೆಯಲು ಆದೇಶಿಸಿರುವುದನ್ನು ಕೈ ಬಿಡಬೇಕು. ನೇರವಾಗಿ ಸ್ವಂತ ಖಾತೆಗೆ ಮೊಟ್ಟೆ ಮತ್ತು ತರಕಾರಿ ಹಣವನ್ನು ಜಮಾ ಮಾಡಬೇಕು’ ಎಂದರು.

ಸಂಘಟನೆಯ ನಾಯಕಿ ಪ್ರಭಾವತಿ ಮಾತನಾಡಿ, ‘ಸಿಲಿಂಡರ್‌ಗಳನ್ನು ನೇರವಾಗಿ ಕೇಂದ್ರಗಳಿಗೆ ಕಳಿಸುವ ವ್ಯವಸ್ಥೆ ಮಾಡಬೇಕು. ಸೆಪ್ಟೆಂಬರ್ ತಿಂಗಳಿನಿಂದ ಅಡುಗೆ ಮಾಡಲು ಪಾತ್ರೆ ಕೊಡುವುದಾಗಿ ಹೇಳಿದ ಇಲಾಖೆಯು ಡಿಸೆಂಬರ್ ಬಂದರೂ ಸಹ ಪಾತ್ರೆಗಳು ವಿತರಿಸಿಲ್ಲ. ಮಕ್ಕಳಿಗೆ, ಗರ್ಭಿಣಿ ಮತ್ತು ಬಾಣಂತಿಯರಿಗೆ ಅಹಾರ ಬೇಯಿಸಲು ತೊಂದರೆಯಾಗಿದೆ’ ಎಂದರು.

ADVERTISEMENT

ರಾಜ್ಯ ಸಮಿತಿ ಸದಸ್ಯ ಎಂ.ತಿಪ್ಪಯ್ಯ ಶೆಟ್ಟಿ ಮಾತನಾಡಿ, ‘ಸರ್ಕಾರವು ಕಾರ್ಯಕರ್ತೆಯರನ್ನು ಮತ್ತು ಸಹಾಯಕಿ ಯರನ್ನು ಮಾನವೀಯತೆ ದೃಷ್ಠಿಯಿಂದ ಕಾಣಬೇಕು. ಅಂಗನವಾಡಿ ಕೇಂದ್ರಗಳಲ್ಲಿ ದಾಖಲಾತಿ ಪುಸ್ತಕಗಳು ಇಲ್ಲ. ವಿದ್ಯುತ್ ವ್ಯವಸ್ಥೆ ಇಲ್ಲ. ಇದ್ದಂತಹ ಕೇಂದ್ರಗಳಿಗೆ ವಿದ್ಯುತ್ ಬಿಲ್ ಕಟ್ಟದೆ ಇರುವುದರಿಂದ ಸಂಪರ್ಕ ಕಡಿತಗೊಳಿಸಲಾಗಿದೆ. ನೀರಿನ ವ್ಯವಸ್ಥೆ ಮತ್ತು ಶೌಚಾಲಯದ ವ್ಯವಸ್ಥೆ ಕಲ್ಪಿಸಬೇಕು. ಪ್ರತಿ ತಿಂಗಳ ಗೌರವಧನವನ್ನು 5ನೇ ತಾರೀಖುನೊಳಗಾಗಿ ನೀಡಬೇಕು. ಕೇಂದ್ರಗಳ ದುರಸ್ತಿ, ಹೊಸ ಕೇಂದ್ರಗಳ ನಿರ್ಮಾಣ, ಮಕ್ಕಳಿಗೆ ಮಲಗಲು ಜಮಖಾನೆ ವಿತರಿಸಬೇಕು’ ಎಂದರು.

ಎಐಟಿಯುಸಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಭಾಷುಮಿಯಾ, ತಾಲ್ಲೂಕು ಘಟಕದ ಕಾರ್ಯದರ್ಶಿ ವೆಂಕನಗೌಡ ಗದ್ರಟಗಿ, ಮುಖಂಡರಾದ ರತ್ನಮ್ಮ ವಕ್ರಾಣಿ, ಲಕ್ಷ್ಮೀ ದಢೇಸೂಗುರು, ಗಿರಿಜಮ್ಮ ದಢೇಸೂಗುರು, ನಿಂಗಮ್ಮ, ಹರಳಮ್ಮ ವಗರನಾಳ, ಆದಿಲಕ್ಷ್ಮೀ, ಸವಿತಾ, ದೇವಮ್ಮ, ಪ್ರಭಾವತಿ ಬಳಗಾನೂರು, ಶಾಂತಾ ಗೊರೇಬಾಳ, ಮೇರಿ, ಬಸ್ಸಮ್ಮ, ವಜ್ರಮ್ಮ, ಶಿವಮ್ಮ ಕ್ಯಾತ್ನಟ್ಟಿ, ಗಂಗಮ್ಮ ಜವಳಗೇರಾ, ಮೌಲಾಬಿ ದಿದ್ದಗಿ,
ಶಿಶು ಅಭಿವೃದ್ಧಿ ಯೋಜನೆ ಮೇಲ್ವಿಚಾರಕಿಯರಾದ ಸರಸ್ವತಿ ಪಾಟೀಲ, ವಿದ್ಯಾವತಿ, ಶಾಂತಾ, ಸವಿತಾ, ಶೈಲಾ ಸಾಲಿಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.