ADVERTISEMENT

‘ಆರ್ಥಿಕ ಅಭಿವೃದ್ಧಿಗೆ ಜಿಎಸ್‌ಟಿ ಸಹಕಾರಿ’

​ಪ್ರಜಾವಾಣಿ ವಾರ್ತೆ
Published 8 ಜುಲೈ 2017, 5:50 IST
Last Updated 8 ಜುಲೈ 2017, 5:50 IST
ಲಿಂಗಸುಗೂರು ಪಟ್ಟಣದ ಭ್ರಮರಾಂಭ ಚಾರಿಟಬಲ್‌ ಟ್ರಸ್ಟ್‌ ಗುರುವಾರ ಆಯೋಜಿಸಿದ್ದ ಜಿಎಸ್‌ಟಿ ಕಾರ್ಯಾಗಾರವನ್ನು  ಬಿ.ವಿ.ರವೀಂದ್ರನಾಥ್‌ ಉದ್ಘಾಟಿಸಿದರುs
ಲಿಂಗಸುಗೂರು ಪಟ್ಟಣದ ಭ್ರಮರಾಂಭ ಚಾರಿಟಬಲ್‌ ಟ್ರಸ್ಟ್‌ ಗುರುವಾರ ಆಯೋಜಿಸಿದ್ದ ಜಿಎಸ್‌ಟಿ ಕಾರ್ಯಾಗಾರವನ್ನು ಬಿ.ವಿ.ರವೀಂದ್ರನಾಥ್‌ ಉದ್ಘಾಟಿಸಿದರುs   

ಲಿಂಗಸುಗೂರು: ‘ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪದ್ಧತಿಗೆ ಸಾರ್ವಜನಿಕರು ಹೆದರುವ ಅಗತ್ಯವಿಲ್ಲ. ಇದು ರಾಷ್ಟ್ರದ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಿದೆ’ ಎಂದು ಚಾರ್ಟ್‌ರ್ಡ್‌ ಅಕೌಂಟೆಂಟ್‌ ಬಿ.ವಿ.ರವೀಂದ್ರನಾಥ್‌ ಹೇಳಿದರು.

ಭ್ರಮರಾಂಭ ಚಾರಿಟಬಲ್‌ ಟ್ರಸ್ಟ್‌ ಗುರುವಾರ  ಆಯೋಜಿಸಿದ್ದ ಜಿಎಸ್‌ಟಿ ಮತ್ತು ನಗದು ರಹಿತ ವ್ಯವಹಾರ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ‘ಈ ಹಿಂದಿನ ವ್ಯವಸ್ಥೆಯಲ್ಲಿ ವಿವಿಧ ಹಂತಗಳಲ್ಲಿ ತೆರಿಗೆ ಸಂಗ್ರಹಣೆ ನಡೆಯುತಿತ್ತು. ಈಗ ರಾಷ್ಟ್ರವ್ಯಾಪಿ ಒಂದೇ ರೀತಿಯ ತೆರಿಗೆ ಸಂಗ್ರಹಣೆ ಆಗುತ್ತಿರುವುದರಿಂದ ಗ್ರಾಹಕರಿಗೆ ಹೆಚ್ಚಿನ ಉಳಿತಾಯ ಆಗಲಿದೆ’ ಎಂದು ವಿವರಿಸಿದರು.

‘ಬಹುತೇಕ ಸರಕುಗಳ ಮೇಲೆ ಶೇ 18ರಷ್ಟು ತೆರಿಗೆ ಮಾತ್ರ ವಿಧಿಸಲಾಗುತ್ತಿದೆ. ಈ ಮುಂಚೆ ಶೇ 5, 12, 18, 23, 33ರಂತೆ ವಿವಿಧ ಹಂತದಲ್ಲಿ ತೆರಿಗೆ ಸಂಗ್ರಹಣೆ ಮಾಡಲಾಗುತ್ತಿತ್ತು. ಜಿಎಸ್‌ಟಿ ಅನುಷ್ಠಾನದಿಂದ ಗ್ರಾಹಕರ ಹೊರೆ ಕಡಿಮೆಯಾಗುತ್ತಿದೆ. ಅಲ್ಲದೆ, ನೋಂದಣಿ, ಪರವಾನಗಿ, ಮಾರಾಟ ವಿವರ ನೀಡಲು ಅನುಕೂಲವಾಗಿದೆ’ ಎಂದರು.

ADVERTISEMENT

ಬೆಂಗಳೂರಿನ ಈಡ್ಗರ್‌ ಇಂಟರೆಕ್ಟಿವ್‌ ಪ್ರೈವೇಟ್‌ ಲಿಮಿಟೆಡ್‌ನ ನಿರ್ದೇಶಕ ಸುರೇಶ ಮಾತನಾಡಿ, ‘ನಗದು ರಹಿತ ವ್ಯವಹಾರ ಮಾಡುವುದರಿಂದ ಭವಿಷ್ಯದಲ್ಲಿ ಆಗಬಹುದಾದ ಲಾಭಗಳು ಹಾಗೂ ಜಿಎಸ್‌ಟಿ ಸಂಗ್ರಹಣೆ ಪರಿಣಾದ ಬಗ್ಗೆ ಮಾಹಿತಿ ನೀಡಿ, ಈ ವ್ಯವಸ್ಥೆಗೆ ಬಳಸಬಹುದಾದ ವಿವಿಧ ಬಗೆಯ ಯಂತ್ರಗಳ ಸಮಗ್ರ ಮಾಹಿತಿ ನೀಡಿದರು.

ಭ್ರಮರಾಂಭ ಚಾರಿಟಬಲ್‌ ಟ್ರಸ್ಟ್‌ ಅಧ್ಯಕ್ಷ ಡಾ. ಶಿವಶರಣಪ್ಪ ಇತ್ಲಿ ಅಧ್ಯಕ್ಷತೆ ವಹಿಸಿದ್ದರು. ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ಮಹ್ಮದ್‌ ನೂರ್‌ಅಲಿ, ಮುಖ್ಯ ಸಂಯೋಜಕ ಡಾ. ಎನ್‌.ಎಲ್‌. ನಡುವಿನಮನಿ, ಟ್ರಸ್ಟ್‌ ಉಪಾಧ್ಯಕ್ಷ ಪಂಪಣ್ಣ ಗುಂಡಳ್ಳಿ, ಸಹಕಾರಿ ಕಾರ್ಯನಿರ್ವಾಹಕ ಅಧಿಕಾರಿ ವಿರೇಶ ಹಿರೇಮಠ, ವ್ಯವಸ್ಥಾಪಕ ಖಾಜಾಹುಸೇನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.