ರಾಯಚೂರು: ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಆಹಾರ ಧಾನ್ಯಗಳನ್ನು ನೀಡುವ ಬದಲಿಗೆ ನಗದು ವರ್ಗಾಯಿಸುವ ಯೋಜನೆ ಮತ್ತು ಕೂಪನ್ ಪದ್ಧತಿ ಕೈಬಿಡಬೇಕು ಎಂದು ಸೂಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) (ಎಸ್ಯುಸಿಐ–ಸಿ) ಪಕ್ಷದ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.
ನಗರದ ಭಗತ್ ಸಿಂಗ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಬಿಪಿಎಲ್ ಕಾರ್ಡು ಇಲ್ಲದ ಬಡವರಿಗೆ ಪಡಿತರ ಚೀಟಿ ನೀಡಲು ತಕ್ಷಣವೇ ಕ್ರಮಕೈಗೊಳ್ಳಬೇಕು. ಅಕ್ಕಿ, ಗೋಧಿ, ಸಕ್ಕರೆ, ಸೀಮೆಎಣ್ಣೆಯನ್ನು ಯಾವುದೇ ತೊಂದರೆಯಾಗದಂತೆ ವಿತರಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾಕಾರನ್ನು ಉದ್ದೇಶಿಸಿ ಮಾತನಾಡಿದ ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಎನ್.ಎಸ್. ವೀರೇಶ್, ಕೆಲವು ತಿಂಗಳಿಂದ ಸೀಮೆಎಣ್ಣೆ ವಿತರಣೆ ನಿಲ್ಲಿಸಲಾಗಿದೆ. ಅಡುಗೆ ಅನಿಲವೂ ಇಲ್ಲ. ಸೀಮೆಎಣ್ಣೆಯೂ ಇಲ್ಲ ಎಂಬ ಪರಿಸ್ಥಿತಿ ಎದುರಾಗಿದೆ. ಪಡಿತರ ಚೀಟಿದಾರರು ಪ್ರತಿ ತಿಂಗಳು ಕೂಪನ್ ಪಡೆಯಬೇಕೆಂಬ ನಿಯಮ ವಿಧಿಸಿರುವ ಕಾರಣ ಬಡ ರೈತರು, ಕಾರ್ಮಿಕರು ಕೆಲಸ ಬಿಟ್ಟು ಕೂಪನ್ ಪಡೆಯಲು ಮತ್ತು ಪಡಿತರಕ್ಕಾಗಿ ಸಾಲಿನಲ್ಲಿ ನಿಲ್ಲುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಜನವರಿಯಿಂದ ಪಡಿತರ ಧಾನ್ಯ ವಿತರಣೆ ಬದಲು ನಗದು ವರ್ಗಾವಣೆ ಮಾಡುವ ಹೊಸ ಯೋಜನೆಯನ್ನು ಆರಭಿಸಲಾಗಿದೆ. ಐದು ಜನರ ಕುಟಂಬಕ್ಕೆ ತಿಂಗಳಿಗೆ ₹ 800 ಅನ್ನು ಮನೆಯ ಯಜಮಾನನ ಖಾತೆಗೆ ನೀಡಲಾಗುವುದಂತೆ. ಇದೇ ಯೋಜನೆಯನ್ನು ಎಲ್ಲ ಬಿಪಿಎಲ್ ಕಾರ್ಡುದಾರರಿಗೆ ಅನ್ವಯಿಸಿದರೆ ಸರ್ಕಾರಕ್ಕೆ ದವಸ-ಧಾನ್ಯಗಳನ್ನು ಕೊಳ್ಳುವ, ನ್ಯಾಯಬೆಲೆ ಅಂಗಡಿಗಳನ್ನು ನೋಡಿಕೊಳ್ಳುವ ಯಾವ ಜವಾಬ್ದಾರಿಯೂ ಇರುವುದಿಲ್ಲ. ಆದರೆ ಈ ಹಣದಲ್ಲಿ ಅವಶ್ಯಕ ವಸ್ತುಗಳನ್ನು ಕೊಳ್ಳಲು ಸಾಧ್ಯವೇ? ಎಂದು ಪ್ರಶ್ನಿಸಿದರು.
ನಂತರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಪತ್ರಸಲ್ಲಿ ಸಲ್ಲಿಸಲಾಯಿತು. ಈ ಪತ್ರವನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಸ್ವೀಕರಿಸಿದರು.
ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಸುನೀತಕುಮಾರ್, ಮಹೇಶ್, ಚನ್ನಬಸವ ಜಾನೇಕಲ್, ರಾಮಣ್ಣ, ಚಂದ್ರಗಿರೀಶ್, ಚೇತನಾ ಭಾಗವಹಿಸಿದ್ದರು.
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.