ADVERTISEMENT

ಕಾಂಗ್ರೆಸ್‌ ಪಕ್ಷದಲ್ಲಿ ಸಿಗದ ಸ್ಥಾನಮಾನ: ಆನ್ವರಿ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2017, 6:25 IST
Last Updated 10 ಸೆಪ್ಟೆಂಬರ್ 2017, 6:25 IST
ಬಸವರಾಜ ಪಾಟೀಲ ಆನ್ವರಿ
ಬಸವರಾಜ ಪಾಟೀಲ ಆನ್ವರಿ   

ಲಿಂಗಸುಗೂರು: ‘ರಾಜ್ಯದಲ್ಲಿ ಸೈದ್ದಾಂತಿಕ ನೆಲೆಗಟ್ಟಿನಲ್ಲಿ ಆಡಳಿತ ನಡೆಸದೆ, ಎಲ್ಲ ಹಂತದಲ್ಲಿ ಜಾತಿ ಆಧಾರದಲ್ಲಿ ಲೆಕ್ಕಾಚಾರ ನಡೆದಿರುವುದು ನೋವಿನ ಸಂಗತಿ. ತಮಗೆ ಪಕ್ಷದಲ್ಲಿ ಸ್ಥಾನಮಾನ ದೊರೆಯುತ್ತಿಲ್ಲ’ ಎಂದು ಕೇಂದ್ರದ ಮಾಜಿ ಸಚಿವ ಬಸವರಾಜ ಪಾಟೀಲ ಆನ್ವರಿ ಅಸಮಾಧಾನ ವ್ಯಕ್ತಪಡಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ದಿ. ಇಂದಿರಾಗಾಂಧಿ ಕಾಲದಿಂದ ಸೈದ್ದಾಂತಿಕ ಏರು ಪೇರುಗಳ ತೊಳಲಾಟ ಕಾಂಗ್ರೆಸ್‌ ಪಕ್ಷದಲ್ಲಿ ನಡೆಯುತ್ತ ಬಂದಿವೆ. ರಾಯಚೂರು ಜಿಲ್ಲೆಗೆ ಇದೇನು ಹೊಸದಲ್ಲ. ಗುಂಪುಗಾರಿಕೆ ಪಾರಂಪರಿಕವಾಗಿ ಮುಂದುವರೆಯುತ್ತ ಬಂದಿರುವುದೆ ಇಂದಿನ ಈ ಸ್ಥಿತಿಗೆ ಕಾರಣವಾಗಿದೆ’ ಎಂದು ಲೇವಡಿ ಮಾಡಿದರು.

‘ರಾಜ್ಯ ಸರ್ಕಾರದ ಯೋಜನೆಗಳನ್ನು ಗ್ರಾಮೀಣ ಜನತೆ ಮನೆ ಬಾಗಿಲಿಗೆ ತಲುಪಿಸುವಲ್ಲಿ ವಿಫಲರಾಗಿದ್ದೇವೆ. ರಾಯಚೂರು ಜಿಲ್ಲೆಗೆ ಸಚಿವ ಸ್ಥಾನ ನೀಡದೆ ಹೋಗಿರುವುದು ಜಿಲ್ಲೆಯ ಮಟ್ಟಿಗೆ ಶಾಪವಾಗಿದೆ. ಪಕ್ಷದಲ್ಲಿ ಹಿರಿಯರು, ಕಿರಿಯರು ಎಂಬುದು ಮಾಯವಾಗುತ್ತಿದೆ. ಜಾತಿ ಆಧಾರಿತ ಬೆಳವಣಿಗೆ ಮುಂದೊಂದು ದಿನ ಅಪಾಯಕ್ಕೆ ಸಿಲುಕಿಸುತ್ತದೆ’ ಎಂದು ಅನುಭವ ಹಂಚಿಕೊಂಡರು.

ADVERTISEMENT

‘ವೈಚಾರಿಕತೆ, ಸೈದ್ದಾಂತಿಕ ಹೊರಾಟಗಳು ಕಾಲ ಕಾಲದಿಂದ ನಡೆಯುತ್ತ ಬಂದಿವೆ. ವಿಚಾರವಾದಿಗಳ ಹತ್ಯೆ, ಹಲ್ಲೆ, ದೌರ್ಜನ್ಯ ಎಲ್ಲ ಕಾಲದಲ್ಲಿಯು ನಡೆದಿದೆ. ಗೌರಿ ಲಂಕೇಶ ಅವರಂತ ದಿಟ್ಟ ಹೋರಾಟಗಾರ್ತಿ ಮೇಲೆ ನಡೆದಿರುವ ಗೋಲಿಬಾರ ಪ್ರಕರಣ ಖಂಡನೀಯ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಆರೋಪಿಗಳ ಬಂಧನಕ್ಕೆವಿಶೇಷ ಆದ್ಯತೆ ನೀಡಬೇಕು’ ಎಂದು ಮನವಿ ಮಾಡಿದರು.

ಕೆಪಿಸಿಸಿ ಕಾರ್ಯದರ್ಶಿ ಎಚ್‌.ಬಿ. ಮುರಾರಿ, ಮುಖಂಡರಾದ ಚಂದ್ರಪ್ಪಗೌಡ ಪಾಟೀಲ ಯರದಿಹಾಳ, ಪ್ರಮೋದ ಕುಲಕರ್ಣಿ, ಚೆನ್ನಬಸವ ವಿಠಲಾಪುರ, ಎಂ.ಎ. ಬಾಳೆಗೌಡ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.