ಶಕ್ತಿನಗರ: ಬಿ.ಟಿ.ಹತ್ತಿಯಲ್ಲಿ ಗುಲಾಬಿ ಕಾಯಿಕೊರಕ ನಿರ್ಮೂಲನೆಗೆ ಸಂಬಂಧಿಸಿದಂತೆ ದೇವಸೂಗೂರು ಹೋಬಳಿ ಮಟ್ಟದ ಹನುಮಪುರ, ಎಚ್.ತಿಮ್ಮಾಪುರ, ಜೆ.ಮಲ್ಲಾಪುರ, ಹೊಸಪೇಟೆ, ಆಶಾಪುರ ಗ್ರಾಮಗಳಿಗೆ ರಾಯಚೂರು ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡವು ಭೇಟಿ ನೀಡಿ ರೈತರಲ್ಲಿ ಅರಿವು ಮೂಡಿಸಿದರು.
ಕಡಿಮೆ ಅವಧಿಯ ಬಿ.ಟಿ.ಹತ್ತಿ ಹೈಬ್ರಿಡ್ ತಳಿಗಳನ್ನು ಆಯ್ಕೆ ಮಾಡಿ ಸೂಕ್ತ ಸಮಯದಲ್ಲಿ ಬಿತ್ತನೆ ಮಾಡಬೇಕು. ಹತ್ತಿಯ ಜೊತೆಗೆ ಬಿ.ಟಿ.ರಹಿತ ಹತ್ತಿಯನ್ನು ಆಶ್ರಯ ಬೆಳೆಯಾಗಿ ಎಕರೆಗೆ 4 ರಿಂದ 5 ಸಾಲುಗಳನ್ನು ಬೆಳೆಯಬೇಕು. ಹತ್ತಿ ಬಿತ್ತಿದ 40 ರಿಂದ 45 ದಿನಗಳ ನಂತರ ಗುಲಾಬಿ ಕಾಯಿಕೊರಕ ವೀಕ್ಷಣೆ ಮಾಡುವುದಕ್ಕೆ ಎಕರೆಗೆ ಕನಿಷ್ಠ ಎರಡು ಲಿಂಗಾಕರ್ಷಕ ಬಲೆಗಳನ್ನು ನೆಡಬೇಕು. ಸತತ ಮೂರು ದಿನವರೆಗೆ ಪ್ರತಿ ಲಿಂಗಾಕರ್ಷಕ ಬಲೆಗಳಲ್ಲಿ 8 ಗಂಡು ಪತಂಗಗಳು ಬಿದ್ದಲ್ಲಿ ಅಥವಾ 60 ಹೂವುಗಳಲ್ಲಿ 6 ಹೂವುಗಳು ಹಾನಿಗೊಳಗಾದರೆ ಸಸ್ಯ ಸಂರಕ್ಷಣೆ ಕ್ರಮಗಳನ್ನು ಅನುಸರಿಸಬೇಕು ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಜಿ.ಆರ್. ಸಂದೀಪ್ ಅವರು ರೈತರಿಗೆ ವಿವರಿಸಿದರು.
ಕೀಟನಾಶಕ ಸಿಂಪರಣೆ: 2 ಮಿ.ಲೀ. ಪ್ರೊಫೆನೋಫಾಸ್, 50ಇ.ಸಿ. ಅಥವಾ 0.5 ಮಿ.ಲೀ. ಲಾಂಬ್ಡಸೈಯಾಲೋಥ್ರೀನ್ ಅಥವಾ 0.5 ಮಿ.ಲೀ. ಡೆಕಾಮೆತ್ರಿನ್, 2.8 ಇ.ಸಿ. ಅಥವಾ 0.5 ಮಿ.ಲೀ. ಸೈಪರ್ಮೆಥ್ರಿನ್ 10 ಇ.ಸಿ. ಅಥವಾ 1 ಗ್ರಾಂ. ಥೈಯೋಡಿಕಾರ್ಬ್ 75 ಡಬ್ಲ್ಯು.ಪಿ. ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಅವಶ್ಯಕತೆ ಅನುಸಾರವಾಗಿ ಸಿಂಪಡಿಸಬೇಕು.
ಕೀಟದ ಹತೋಟಿಗಾಗಿ ಕೀಟನಾಶಕ ಸಿಂಪರಣೆ ಮಾಡುವಾಗ, ಸಿಂಪರಣಾ ದ್ರಾವಣವು ಎಲ್ಲ ಭಾಗಗಳಿಗೆ ತಲುಪುವಂತೆ ಸಿಂಪರಣೆ ಮಾಡಬೇಕು. ಪ್ರಮುಖವಾಗಿ ಗುಲಾಬಿ ಕಾಯಿ ಕೊರಕ ಕೀಟವು ಮೊಗ್ಗು, ಹೂವು, ಕಾಯಿಗಳನ್ನು ಹಾನಿ ಮಾಡುವುದರಿಂದ ಈ ಭಾಗಗಳಿಗೆ ಸರಿಯಾಗಿ ತಲುಪುವಂತೆ ಎಚ್ಚರ ವಹಿಸಿ ಸಿಂಪಡಿಸಿದರೆ ಮಾತ್ರ ರೋಗವನ್ನು ಪರಿಣಾಮಕಾರಿಯಾಗಿ ಹತೋಟಿ ಮಾಡಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.