ADVERTISEMENT

‘ಜಲಾಶಯದ ಹೂಳು ತೆಗೆಯಲು ನಿರಾಸಕ್ತಿ’

​ಪ್ರಜಾವಾಣಿ ವಾರ್ತೆ
Published 23 ಮೇ 2017, 7:00 IST
Last Updated 23 ಮೇ 2017, 7:00 IST

ರಾಯಚೂರು: ‘ತುಂಗಭದ್ರಾ ಜಲಾಶಯ ದಲ್ಲಿ ತುಂಬಿರುವ ಹೂಳು ತೆಗೆಯಲು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರು ಕಳೆದ ಐದು ದಿನಗಳಿಂದ ನಡೆಸಿರುವ ಪ್ರಾಯೋಗಿಕ ಪ್ರಯತ್ನಕ್ಕೆ ಬೆಂಬಲ ವ್ಯಕ್ತವಾಗಿದೆ. ಆದರೆ, ಜಲ ಸಂಪನ್ಮೂಲ ಸಚಿವ ಹಾಗೂ ಸರ್ಕಾರ ನಿರಾಸಕ್ತಿ ತಾಳಿದೆ’ ಎಂದು ಸಂಘದ ಗೌರವ ಅಧ್ಯಕ್ಷ ಚಾಮರಸ ಮಾಲಿಪಾಟೀಲ ಆರೋಪಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಜನರ ಧನಸಹಾಯ ದಿಂದ ಜಲಾಶಯದ ಒಂದು ಭಾಗದಲ್ಲಿ ಹೂಳು ತೆಗೆಯ ಲಾಗುತ್ತಿದೆ. ಜಲಾಶಯದ ವ್ಯಾಪ್ತಿಗೆ ಬರುವ ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಯ ಜನಪ್ರತಿನಿಧಿಗಳಿಗೆ ಹಾಗೂ ಸರ್ಕಾರಕ್ಕೆ ಹೂಳೆತ್ತಲು ಕಾಳಜಿಯಿಲ್ಲ’ ಎಂದು ದೂರಿದರು.

‘ಜಲಾಶಯದ ಹೂಳು ರೈತರ ಹೊಲಗಳಿಗೆ ಹಾಕಿದರೆ ಭೂಮಿಯ ಫಲವತ್ತತೆ ಕಾಪಾಡಲು ಅನುಕೂಲ ವಾಗಲಿದೆ. ಇದಕ್ಕೆ ರೈತರು ಆಸಕ್ತಿ ತೋರಿದ್ದಾರೆ. ಸರ್ಕಾರ ಅಗತ್ಯ ಸೌಲಭ್ಯ ಒದಗಿಸಬೇಕು. ಸರ್ಕಾರ ಸ್ಪಂದಿಸದಿದ್ದರೆ ಮುಂದಿನ ವರ್ಷದಿಂದ ರೈತರ ಹಸಿರು ಶಲ್ಯವನ್ನು ಜೋಳಿಗೆ ಯನ್ನಾಗಿ ಮಾಡಿಕೊಂಡು ನೆರವು ಸಂಗ್ರಹಿಸಿ ಹೂಳು ತೆಗೆಯಲು ಮುಂದಾಗ ಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ADVERTISEMENT

‘ನವಲಿ ಬಳಿ 40 ಟಿಎಂಸಿ ನೀರು ಸಂಗ್ರಹಿಸಲು ಜಲಾಶಯ ನಿರ್ಮಿಸಲು ಸರ್ಕಾರ ಮುಂದಾಗಿದೆ. ಅದು ಸುಲಭದ ಕೆಲಸವಲ್ಲ. ರೈತರಿಂದ ಭೂಮಿ ಸ್ವಾಧೀನ ಪಡಿಸಿಕೊಂಡು ಜಲಾಶಯ ನಿರ್ಮಿಸಲು ದಶಕಗಳ ಕಾಲ ಕಾಯಬೇಕಾಗುತ್ತದೆ. ಆದ್ದರಿಂದ ಹೂಳು ತೆಗೆಯಲು ಕ್ರಮ ವಹಿಸುವುದು ಸೂಕ್ತ’ ಎಂದರು. ಭೀಮೇಶ್ವರರಾವ್, ನರಸಪ್ಪ, ತಿಮ್ಮಪ್ಪ, ಬಸವರಾಜ, ಹನುಮಂತು, ಹುಲಿಗೆಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.