ರಾಯಚೂರು: ‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ವಹಿಸಿಕೊಂಡು ನಾಲ್ಕು ವರ್ಷಗಳಾದರೂ ಜಿಲ್ಲೆಗೆ ಒಂದು ಸಚಿವ ಸ್ಥಾನ ನೀಡಿಲ್ಲ. ಜಿಲ್ಲಾ ಉತ್ಸವ ನಡೆಸುವ ವ್ಯವಸ್ಥೆ ಆಗಿಲ್ಲ. ಕೂಡಲೇ ಜಿಲ್ಲಾ ಉತ್ಸವ ಮಾಡಿ ಕಲೆ, ಸಾಹಿತ್ಯ, ಸಂಸ್ಕೃತಿಗೆ ಪ್ರೋತ್ಸಾಹ ನೀಡಬೇಕು’ ಎಂದು ಬಿಜೆಪಿ ಮುಖಂಡ ಎ.ಪಾಪಾರೆಡ್ಡಿ ಒತ್ತಾಯಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ಅವರು, ‘ಜಿಲ್ಲಾ ಉತ್ಸವ ನಡೆದು 11 ವರ್ಷಗಳಾದರೂ ಮತ್ತೆ ಉತ್ಸವ ಅಗುತ್ತಿಲ್ಲ. 2006 ರಲ್ಲಿ ನಾನು ಶಾಸಕನಾಗಿದ್ದಾಗ ಹಾಗೂ ಆಲ್ಕೋಡ ಹನುಮಂತಪ್ಪ ಅವರು ಉಸ್ತುವಾರಿ ಆಗಿದ್ದಾಗ ರಾಯಚೂರು ಜಿಲ್ಲಾ ಉತ್ಸವ ಮಾಡಲಾಗಿತ್ತು. ಕಲಾವಿದರು ಈ ಬಗ್ಗೆ ನಿರಂತರ ಮನವಿ ಸಲ್ಲಿಸುತ್ತಿದ್ದಾರೆ. ಆದರೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಬರೀ ಭರವಸೆ ನೀಡುತ್ತಾ ಬರುತ್ತಿದ್ದಾರೆ’ ಎಂದರು.
‘ಈಗ ಚುನಾವಣೆ ಸಮೀಪಿಸುತ್ತಿರುವುದರಿಂದ ಉತ್ಸವ ನಡೆಸಲು ದಿನಾಂಕ ಪ್ರಕಟಿಸಬೇಕು. ಉತ್ಸವ ನಡೆಸಲು ಜಿಲ್ಲೆಗೆ ಬಂದಿರುವ ₹5 ಕೋಟಿ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು’ ಎಂದು ಆಗ್ರಹಿಸಿದರು.
‘ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾ ಉತ್ಸವ ನಡೆಯುತ್ತಿವೆ. ರಾಯಚೂರಿನಲ್ಲಿ ಮಾತ್ರ ಏಕೆ ಮಾಡುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಕೊನೆಯ ವರ್ಷವಾದರೂ ಜಿಲ್ಲಾ ಉತ್ಸವ ನಡೆಸಲು ಕ್ರಮ ಕೈಕೊಳ್ಳಬೇಕು. ಇಲ್ಲದಿದ್ದರೆ ಕಲಾವಿದರು ಹೋರಾಟದ ಮಾರ್ಗ ಹಿಡಿಯುವುದು ಅನಿವಾರ್ಯ ಆಗುತ್ತದೆ’ ಎಂದು ಹೇಳಿದರು. ಕಲಾವಿದರಾದ ರಘುಪತಿ ಪೂಜಾರಿ, ವಿಜಯಕುಮಾರ, ಬಸವರಾಜ, ರಾಘವೇಂದ್ರ, ಈರಣ್ಣ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.