ಲಿಂಗಸುಗೂರು: ‘ಟಿಪ್ಪು ಜಯಂತಿ ಆಚರಣೆಗೆ ತೆಗೆದುಕೊಂಡ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ಆದರೆ, ಮೆರವಣಿಗೆಗೆ ಅವಕಾಶ ನೀಡದೆ ರಾಜ್ಯ ಸರ್ಕಾರ ಮಲತಾಯಿ ಧೋರಣೆ ಅನುಸರಿಸಿದೆ’ ಎಂದು ಶಾಸಕ ಮಾನಪ್ಪ ವಜ್ಜಲ ಅಸಮಾಧಾನ ವ್ಯಕ್ತಪಡಿಸಿದರು.
ಶುಕ್ರವಾರ ತಾಲ್ಲೂಕು ಆಡಳಿತ ಆಯೋಜಿಸಿದ್ದ ಟಿಪ್ಪು ಜಯಂತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಇತರೆ ಜಯಂತಿಗಳಂತೆ ಟಿಪ್ಪು ಜಯಂತಿಯಲ್ಲಿ ಮೆರವಣಿಗೆಗೆ ಅವಕಾಶ ಕಲ್ಪಿಸಬೇಕಿತ್ತು. ಜಯಂತಿ ಆಚರಣೆಗೆ ಸಾರ್ವಜನಿಕರ ಸಹಭಾಗಿತ್ವದ ಹೆಸರಿನಲ್ಲಿ ಸರ್ಕಾರ ವ್ಯವಸ್ಥಿತವಾಗಿ ಜಾತಿ ವ್ಯವಸ್ಥೆಯನ್ನು ಪ್ರೋತ್ಸಾಹಿಸುತ್ತಿದೆ. ಈ ನಿಟ್ಟಿನಲ್ಲಿ ಜಯಂತಿಗಳ ಆಚರಣೆ ಪರಾಮರ್ಶೆಗೆ ಸರ್ಕಾರ ಮುಂದಾಗಬೇಕು’ ಎಂದು ಹೇಳಿದರು.
ಉಪ ವಿಭಾಗಾಧಿಕಾರಿ ದಿವ್ಯಾಪ್ರಭು ಮಾತನಾಡಿ, ‘ಕನ್ನಡಿಗರು ಟಿಪ್ಪು ಸುಲ್ತಾನ್ ಅವರಂತೆ ಆತ್ಮಸ್ಥೈರ್ಯ, ಕ್ರಿಯಾಶೀಲತೆ ಮೈಗೂಡಿಸಿಕೊಳ್ಳಬೇಕು. ಬ್ರಿಟಿಷರ ವಿರುದ್ಧ ನಾಲ್ಕು ಹಂತದಲ್ಲಿ ಯುದ್ಧ ಮಾಡಿ ಟಿಪ್ಪು ವೀರತ್ವವನ್ನು ಪ್ರದರ್ಶಿಸಿದರು. ಬ್ರಿಟಿಷರ ವಿರುದ್ಧ ಕ್ಷಿಪಣಿ ತಂತ್ರಜ್ಞಾನ ಬಳಕೆ ಮಾಡಿದ ಮೊದಲ ವ್ಯಕ್ತಿ ಟಿಪ್ಪು ಆಗಿದ್ದಾರೆ’ ಎಂದರು.
ವೀರಶೈವ ಸಂಘದ ಆಡಳಿತಾಧಿಕಾರಿ ಬಸವಂತರಾಯ ಕುರಿ ಮಾತನಾಡಿ, ‘ಬ್ರಿಟಿಷರ ವಸಹಾತುಶಾಹಿ ಮತ್ತು ಉಳಿಗಮಾನ್ಯ ಪದ್ಧತಿ ನಿವಾರಣೆಗೆ ಕಾನೂನಾತ್ಮಕ ರೂಪರೇಷೆ ನೀಡಿದವರು ಟಿಪ್ಪು. ಮೇಧಾವಿ ಆಗಿದ್ದ ಅವರು ದೇಶಪ್ರೇಮದ ಜೊತೆಗೆ ನಾಡಿನ ರೈತರು, ಶೋಷಿತ, ದಲಿತ, ನೊಂದವರ ಧ್ವನಿಯಾಗಿ ನೀರಾವರಿ, ರಸ್ತೆ, ಒಡ್ಡು, ಕೆರೆ ಕಟ್ಟೆಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು’ ಎಂದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶ್ವೇತಾ ವೆಂಕನಗೌಡ ಪಾಟೀಲ, ಪುರಸಭೆ ಅಧ್ಯಕ್ಷ ಖಾದರಪಾಷ, ಎಪಿಎಂಸಿ ಅಧ್ಯಕ್ಷೆ ಶಾಂತಲಾ ಹನುಮಂತಪ್ಪ ಕಂದಗಲ್ಲ, ಟಿಎಪಿಸಿಎಂಎಸ್ ಅಧ್ಯಕ್ಷ ಸೋಮಶೇಖರ ಐದನಾಳ, ತಂಜಿಮುಲ್ ಮುಸ್ಲೀಮಿನ್ ಸಮಿತಿ ಉಪಾಧ್ಯಕ್ಷ ಲಾಲ್ ಅಹ್ಮದಸಾಬ್, ತಹಶೀಲ್ದಾರ್ ಚಾಮರಾಜ ಪಾಟೀಲ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪುಷ್ಪಾ ಕಮ್ಮಾರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.