ಸಿಂಧನೂರು: ‘ಪ್ರತಿಯೊಬ್ಬರೂ ತ್ಯಾಜ್ಯ ವಸ್ತುಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಿದರೆ ಡೆಂಗಿ ಹಾಗೂ ಸೊಳ್ಳೆಯಿಂದ ಹರಡುವ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸಬಹುದು’ ಎಂದು ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಹಾಗೂ ತಾಲ್ಲೂಕು ನೋಡಲ್ ಅಧಿಕಾರಿ ಡಾ.ಸುರೇಂದ್ರಬಾಬು ಹೇಳಿದರು.
ನಗರದ ತಾಲ್ಲೂಕು ಆರೋಗ್ಯಾಧಿ ಕಾರಿಗಳ ಕಾರ್ಯಾಲಯದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಸೋಮವಾರ ಹಮ್ಮಿ ಕೊಂಡಿದ್ದ ರಾಷ್ಟ್ರೀಯ ಡೆಂಗಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಡೆಂಗಿ, ಮಲೇರಿಯಾ, ಫೈಲೇರಿಯಾ ದಂತಹ ರೋಗಗಳಿಗೆ ಸೊಳ್ಳೆಯೇ ಮೂಲವಾಗಿದೆ. ಮನೆಯ ಸುತ್ತಮುತ್ತ ಸ್ವಚ್ಛವಾಗಿಡಬೇಕು. ನೀರು ನಿಲ್ಲದಂತೆ ಎಚ್ಚರಿಕೆ ವಹಿಸಿದರೆ ಸೊಳ್ಳೆ ಉತ್ಪತ್ತಿ ಯನ್ನು ನಿಯಂತ್ರಿಸಬಹುದು. ಸಾರ್ವಜನಿ ಕರ ಸಹಭಾಗಿತ್ವದಿಂದ ಮಾತ್ರ ಡೆಂಗಿ ಯಂತಹ ಮಾರಕ ರೋಗಗಳನ್ನು ತಡೆಗಟ್ಟಬಹುದು’ ಎಂದರು.
‘ತೀವ್ರ ಜ್ವರ, ತಲೆನೋವು, ಕಣ್ಣು, ಜಂಟಿ, ಸ್ನಾಯು ನೋವು, ಹಸಿವಾಗದಿ ರುವುದು, ಉದರದ ಅಸ್ವಸ್ಥತೆ ಡೆಂಗಿ ರೋಗದ ಲಕ್ಷಣಗಳಾಗಿವೆ. ಡೆಂಗಿ ಜ್ವರವು ವೈರಾಣುಗಳಿಂದ ಬರುವುದರಿಂದ ಇದಕ್ಕೆ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಆದಾಗ್ಯೂ ಕಾಯಿಲೆಯನ್ನು ಮೊದಲ ಹಂತದಲ್ಲೇ ಊಹಿಸಿ ಲಕ್ಷಣಗಳನ್ನು ಶಮನ ಗೊಳಿಸಲು ಸರಿಯಾದ ಔಷಧಿ ನೀಡಿದಲ್ಲಿ ಮುಂದೆ ಆಗಬಹುದಾದ ತೊಂದರೆ ತಪ್ಪಿಸಬಹುದು. ಡೆಂಗಿ ರೋಗ ಬಂದ ನಂತರ ಚಿಕಿತ್ಸೆಗಾಗಿ ಪರದಾಡುವ ಬದಲು ಅದು ಬಾರದಂತೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ’ ಎಂದು ಹೇಳಿದರು.
ವೈದ್ಯಾಧಿಕಾರಿ ಡಾ.ರಮ್ಯಾದೀಪಿಕಾ ಮಾತನಾಡಿ, ‘ಸ್ವಚ್ಛತೆ ಕಾಪಾಡುವುದು ಕೇವಲ ವೈದ್ಯರು, ಚುನಾಯಿತ ಪ್ರತಿನಿಧಿ ಗಳ ಜವಾಬ್ದಾರಿ ಎಂದು ನಿರ್ಲಕ್ಷಿಸದೇ ಪ್ರತಿಯೊಬ್ಬರೂ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿದಲ್ಲಿ ರೋಗ ನಿಯಂತ್ರಿಸಲು ಸಾಧ್ಯ’ ಎಂದರು. ಮಲೇರಿಯಾ ತಾಂತ್ರಿಕ ಮೇಲ್ವಿ ಚಾರಕ ಎಫ್.ಎ.ಹಣಗಿ, ತಾಲ್ಲೂಕು ಮಹಿಳಾ ಸಂದರ್ಶಕಿ ನಂದಕುಮಾರಿ, ತಾಲ್ಲೂಕು ವೈದ್ಯಾಧಿಕಾರಿಗಳು, ಆರೋಗ್ಯ ಸಹಾಯಕಿಯರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.