ADVERTISEMENT

ಮಕ್ಕಳಿಗೆ ಪರಿಣಾಮಕಾರಿ ಕಲಿಕೆ ಮಾಡಿ

ಬೇಸಿಗೆ ಶಿಬಿರ ಸಂಭ್ರಮ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಎಂ.ಕೂರ್ಮಾರಾವ್‌ ಸಲಹೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2017, 4:28 IST
Last Updated 19 ಏಪ್ರಿಲ್ 2017, 4:28 IST
ರಾಯಚೂರು: ಬರಗಾಲದಲ್ಲಿ ಎಲ್ಲಾ ಮಕ್ಕಳಿಗೆ ಬಿಸಿಯೂಟದ ಜತೆಗೆ ಸ್ವಲ್ಪ ಓದು, ಸ್ವಲ್ಪ ಮೋಜು ಎಂಬ ಕಾರ್ಯಕ್ರಮ ಜಾರಿಗೆ ತರಲಾಗಿದೆ. ರಜಾ ದಿನಗಳಲ್ಲಿ ಐದು ಅಂಶಗಳನ್ನು ಆಧಾರವಾಗಿಟ್ಟುಕೊಂಡು ಐದು ವಾರಗಳಲ್ಲಿ ಪರಿಣಾಮಕಾರಿ ಕಲಿಕೆ ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಕೂರ್ಮಾರಾವ್ ಸಲಹೆ ನೀಡಿದರು.
 
ನಗರದ ಪೊಲೀಸ್ ಕಾಲೊನಿಯ ಉನ್ನತೀಕರಿಸಿದ ಸರ್ಕಾರಿ ಮಾಧ್ಯಮಿಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರದಿಂದ ಆರಂಭವಾದ ‘ಸ್ವಲ್ಪ ಓದು, ಸ್ವಲ್ಪ ಮೋಜು’ ಬೇಸಿಗೆ ಶಿಬಿರ ಸಂಭ್ರಮವನ್ನು ಉದ್ಘಾಟಿಸಿ ಮಾತನಾಡಿದರು.
 
ಸರ್ಕಾರವು ಮಕ್ಕಳಿಗೆ ಶಿಕ್ಷಣ ನೀಡಲು ಹಲವು ಶೈಕ್ಷಣಿಕ ಯೋಜನೆ ಗಳನ್ನು ಜಾರಿಗೆ ತರುವುದರ ಮೂಲ ಉದ್ದೇಶ ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗಬಾರದು.

ಎಲ್ಲಾ ವಿದ್ಯಾರ್ಥಿಗಳು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು. ಶಾಲಾ ಮುಖ್ಯಸ್ಥರು ಹಾಗೂ ಸಂಬಂಧ ಪಟ್ಟ ಶಿಕ್ಷಕರು ಸರಿಯಾದ ಸಮಯಕ್ಕೆ ಬಂದು ಮಕ್ಕಳಿಗೆ ಪರಿಣಾಮಾರಿಯಾಗಿ ಬೋಧನೆ ನೀಡಬೇಕು ಎಂದರು.
 
ಡಯಟ್ ಕಾಲೇಜಿನ ಪ್ರಾಂಶುಪಾಲ ಮಲ್ಲಿಕಾರ್ಜುನ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಯೋಜನೆ ಮಕ್ಕಳಿಗೆ ಶೈಕ್ಷಣಿಕ ಅಭಿವೃದ್ದಿಗೆ ಪೂರಕವಾಗಿದೆ.

ಐದು ವಾರಗಳ ಐದು ಅಂಶಗಳ ಆಧಾರದ ಮೇಲೆ ನಡೆದ ಈ ಕಾರ್ಯಕ್ರಮವನ್ನು ಶಿಕ್ಷಣ ಇಲಾಖೆಯ ಎಲ್ಲಾ ಅಧಿಕಾರಿಗಳು ಯೋಜನೆಯನ್ನು ಯಶಸ್ವಿಗೊಳಿಸಲು ಕೆಲಸ ಮಾಡುತ್ತಾರೆ ಎಂದು ಹೇಳಿದರು. 
 
ಎಸ್.ಡಿ.ಎಂ.ಸಿ ನಾಮನಿರ್ದೇಶನ ಸದಸ್ಯ ದಂಡಪ್ಪ ಬಿರಾದಾರ ಅವರು ಶಾಲೆಗೆ ಕೊಳವೆಬಾವಿ ಮತ್ತು ಬೇಸಿಗೆ ಸಂಭ್ರಮದ ಸಮಯದ ಬದಲಾವಣೆ ಕುರಿತು ಬೇಡಿಕೆ ಸಲ್ಲಿಸಿದರು. ಬೇಡಿ ಕೆಗಳಿಗೆ ಸಿ.ಇ.ಓ ಅವರು ಸಕಾರಾ ತ್ಮಕವಾಗಿ ಸ್ಪಂದಿಸಿದರು.
 
ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ಹನುಮಂತಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಂಜು ನಾಥ, ತಾಲ್ಲೂಕು ಅಕ್ಷರ ದಾಸೋಹ ಅಧಿಕಾರಿ ಶಿವಾನಂದ ಬಿರಾದಾರ, ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಗೋವಿಂದ ದಾಸ, ಸದಸ್ಯರಾದ ಸೈಯಾದ್ ಜೈನುದ್ದಿನ್, ಕೃಷ್ಣ, ಸಿಆರ್‌ಪಿ ಗಳಾದ ಅಬ್ದುಲ್ ಅಜೀಮ್, ಮುಖ್ಯ ಗುರು ಶಿವನಪ್ಪಾ ರಾಠೋಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.