ಶಕ್ತಿನಗರ: ಸಮರ್ಪಕ ಮಳೆಯಾಗದ ಕಾರಣ ರೈತರು ಆತಂಕ ಎದುರಿಸುವಂತಾಗಿದೆ.
‘ಈ ವರ್ಷ ಸರಿಯಾಗಿ ಮಳೆ–ಬೆಳೆಯಾಗುವುದು ಎಂಬ ನಿರೀಕ್ಷೆಯ ಇತ್ತು. ಆದರೆ, ಬರದ ಛಾಯೆ ಎಲ್ಲೆಡೆ ಕಂಡುಬರುತ್ತಿದೆ. ಈಗಾಗಲೇ ಬೆಳೆಗಳು ಬಿತ್ತನೆಯಾಗಿದ್ದು, ಮೊಳಕೆಯೊಡೆದಿದ್ದ ಬೆಳೆಗಳು ನೀರಿನ ಅಭಾವದಿಂದಾಗಿ ಒಣಗಲಾರಂಭಿಸಿವೆ’ ಎಂಬುದು ಈ ಭಾಗದ ರೈತರ ಆತಂಕ.
‘ಜೂನ್ ತಿಂಗಳಲ್ಲಿ ಉತ್ತಮ ಮಳೆಯಾಗಿದ್ದರಿಂದ ಬಿತ್ತನೆ ನಿರೀಕ್ಷೆಗೂ ಮೀರಿ ನಡೆದಿದೆ. ಆದರೆ, ಈಗ ಮಳೆ ಇಲ್ಲದೆ ಬೆಳೆಗಳು ಬಾಡಿವೆ. ರೈತರು ಕೈಯಲ್ಲಿದ್ದ ಹಣವನ್ನು ಗೊಬ್ಬರ, ಬಿತ್ತನೆ ಬೀಜಕ್ಕಾಗಿ ಸುರಿದು ಕಂಗಾಲಾಗಿದ್ದಾರೆ. ಶೇಂಗಾ, ತೊಗರಿ, ಹತ್ತಿ ಒಣಗಿವೆ. ಈ ವರ್ಷವೂ ಬರತಪ್ಪಿದ್ದಲ್ಲ ಎಂಬ ಚಿಂತೆ ಕಾಡುತ್ತಿದೆ’ ಎಂದು ರೈತ
ಹನುಮೇಶ ಹೇಳಿದರು.
‘ಬೆಳೆಗಳು ಒಣಗಿರುವುದರಿಂದ ಕೃಷಿ ಇಲಾಖೆಯ ಅಧಿಕಾರಿಗಳು ಹೋಬಳಿವಾರು, ಗ್ರಾಮವಾರು ಸಮೀಕ್ಷೆ ನಡೆಸಬೇಕು. ರೈತರಿಗೆ ಪರಿಹಾರ ನೀಡಬೇಕು’ ಎಂದು ರೈತ ಸುರೇಶ ಒತ್ತಾಯಿಸಿದರು.
‘ಮಳೆ ಬಾರದೇ ಬೆಳೆಗಳು ಸಂಪೂರ್ಣ ಕಮರುತ್ತಿವೆ. ಈ ಭಾಗದ ಮುಖ್ಯ ಬೆಳೆಗಳಾದ ತೊಗರಿ, ಹತ್ತಿ ಬಿತ್ತನೆಗೆ ಮುಂದಾಗದೇ ಮುಗಿಲಿನತ್ತ ಮುಖ ಮಾಡುವಂತಾಗಿದೆ’ ಎಂದು ರೈತ ಶಿವರಾಜ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.