ರಾಯಚೂರು: ಜಿಲ್ಲೆಯಲ್ಲಿ ಶುಕ್ರವಾರ ಸುರಿದ ಭಾರಿ ಮಳೆಯಿಂದಾಗಿ ಮಾನ್ವಿ ತಾಲ್ಲೂಕಿನ ಕೆಲವು ಕಡೆ ಜನವಸತಿ ಮತ್ತು ಕೃಷಿ ಬೆಳೆಗಳಲ್ಲಿ ನೀರು ನಿಂತಿದೆ.ಇದ್ದರಿಂದ ತೊಂದರೆಯಾಗಿದೆ. ಮಾನ್ವಿ ಪಟ್ಟಣದಲ್ಲಿ ಒಂದು ಮನೆಯೊಂದರ ಛಾವಣಿ ಕುಸಿದು ಎಂಟು ಜನರು ಗಾಯಗೊಂಡಿದ್ದಾರೆ. ನಕ್ಕುಂಡಿ ಗ್ರಾಮದ ಹತ್ತಿರದ ಹಳ್ಳ ತುಂಬಿ ಹರಿಯುತ್ತಿದ್ದು ಮಾನ್ವಿ–ಕವಿತಾಳ ಸಂಪರ್ಕ ಕಲ್ಪಿಸುವ ರಸ್ತೆ ಸೇತುವೆ ಮುಳುಗಿದೆ.
ಬಹಳಷ್ಟು ಸರ್ಕಾರಿ ಶಾಲಾ ಆವರಣಗಳು ಜಲಾವೃತವಾಗಿದ್ದು, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪರದಾಡಿದರು. ಮಾನ್ವಿ ತಾಲ್ಲೂಕಿನಲ್ಲಿ 77.9 ಮಿಲಿಮೀಟರ್ ಮಳೆಯಾಗಿದೆ.
ದೇವದುರ್ಗ ತಾಲ್ಲೂಕಿನಲ್ಲಿ 28.1, ಲಿಂಗಸುಗೂರು ತಾಲ್ಲೂಕಿನಲ್ಲಿ 16.1, ರಾಯಚೂರು ತಾಲ್ಲೂಕಿನಲ್ಲಿ 34.8, ಸಿಂಧನೂರು ತಾಲ್ಲೂಕಿನಲ್ಲಿ 43.5 ಮಿಲಿ ಮೀಟರ್ ಮಳೆಯಾಗಿದೆ. ಒಣಗಿದ್ದ ಕೆರೆ, ಹಳ್ಳಕೊಳ್ಳುಗಳು ತುಂಬಿ ಹರಿಯಲಾರಂಭಿಸಿವೆ. ಇದರಿಂದ ಕೆಲವು ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಿದೆ.
ನಾರಾಯಣಪುರ ಅಣೆಕಟ್ಟೆಯಿಂದ 70 ಸಾವಿರ ಕ್ಯುಸೆಕ್ ನೀರು ಹೊರಬಿಟ್ಟಿರುವುದರಿಂದ ದೇವದುರ್ಗ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಪ್ರವಾಹದ ಭೀತಿ ಹೆಚ್ಚಾಗಿದೆ. ನೀರಿನ ಹೊರಹರಿವು ಒಂದು ಲಕ್ಷ ಕ್ಯುಸೆಕ್ ತಲಪಿದರೆ ಅನೇಕ ಗ್ರಾಮಗಳು ನಡುಗಡ್ಡೆಗಳಾಗುತ್ತವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.